Bengaluru-Mysuru Expressway: ಫೆ. 15ರೊಳಗೆ ಟೋಲ್ ಸಂಗ್ರಹ ಆರಂಭ
ಮಹತ್ವಾಕಾಂಕ್ಷೆಯ ಮೈಸೂರು- ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್ ರಸ್ತೆಯಲ್ಲಿ ಫೆಬ್ರವರಿ 15ರೊಳಗೆ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಮೈಸೂರು, ಜನವರಿ 31: ಮಹತ್ವಾಕಾಂಕ್ಷೆಯ ಮೈಸೂರು- ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್ ರಸ್ತೆಯಲ್ಲಿ ಫೆಬ್ರವರಿ 15ರೊಳಗೆ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಕಾಮಗಾರಿಯು ಮೊದಲ ಹಂತದಲ್ಲಿ ಬೆಂಗಳೂರು-ಚನ್ನಪಟ್ಟಣದ ನಿಡಘಟ್ಟದವರೆಗೂ ನಡೆದಿತ್ತು. ಇದು 56 ಕಿಮೀ ಒಳಗೊಂಡಿತ್ತು. ಎರಡನೇ ಹಂತದ ಕಾಮಗಾರಿ ನಿಡುಘಟ್ಟದಿಂದ ಮೈಸೂರಿನವರೆಗೆ ನಡೆಯುತ್ತಿದೆ. 61 ಕಿ.ಮೀ. ಕಾಮಗಾರಿ ಭರದಿಂದ ಸಾಗುತ್ತಿದೆ. ಇದೀಗ ಮೊದಲ ಹಂತದ ಬೆಂಗಳೂರು-ನಿಡಘಟ್ಟ ಟೋಲ್ ಸಂಗ್ರಹಕ್ಕೆ ಹೆದ್ದಾರಿ ಪ್ರಾಧಿಕಾರ ತೀರ್ಮಾನಿಸಿದೆ.
"ಮೊದಲ ಹಂತದ ಕಾಮಗಾರಿ ಮುಗಿದಿದ್ದು, ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಎರಡನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. ಹಾಗಾಗಿ ಮೊದಲ ಹಂತದಲ್ಲಿ ಬೆಂಗಳೂರು-ನಿಡಘಟ್ಟ ಟೋಲ್ ಸಂಗ್ರಹವನ್ನು ಆರಂಭಿಸಲಾಗುವುದು. ಎರಡನೇ ಹಂತದ ಕಾಮಗಾರಿ ಮುಗಿದ ಬಳಿಕ ಎರಡನೆ ಟೋಲ್ ಸಂಗ್ರಹ ಮಾಡಲಾಗುವುದು," ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಟೋಲ್ ಸಂಗ್ರಹ ಆರಂಭವಾಗುವ ಮುನ್ನ ಪ್ರಯಾಣಿಕ ಸ್ನೇಹಿ ಟ್ರಾಫಿಕ್ ಸೈನ್ ಬೋರ್ಡ್ಗಳು, ರಸ್ತೆಯ ದೂರ, ಮಾರ್ಗದರ್ಶಿ ಬೋರ್ಡ್ ಅಳವಡಿಸಲಾಗುತ್ತದೆ. ಶ್ರೀರಂಗಪಟ್ಟಣ ಹಾಗೂ ಬಿಡದಿ ಬಳಿ ಎರಡು ಟೋಲ್ ಪ್ಲಾಜಾ ನಿರ್ಮಿಸಲಾಗಿದೆ. ಪ್ರವೇಶ ಹಾಗೂ ನಿರ್ಗಮನಕ್ಕೆ ಅನುಕೂಲವಾಗುವಂತೆ 11 ಗೇಟ್ ಅಳವಡಿಸಲಾಗಿದೆ. ಎಲ್ಲಾ ಗೇಟ್ಗಳು ಅತ್ಯಾಧುನಿಕ ಟೋಲ್ ಸಿಸ್ಟಂ ಹಾಗೂ ಫ್ಯಾಸ್ಟ್ ಟ್ಯಾಗ್ ವ್ಯವಸ್ಥೆ ಇರಲಿದೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ .
ಸರ್ವಿಸ್ ರಸ್ತೆ ನಿರ್ಮಾಣವಾದ ಬಳಿಕ ಹೈವೇ ರಸ್ತೆಯಲ್ಲಿ ದ್ವಿಚಕ್ರ ಮತ್ತು ಮೂರು ಚಕ್ರದ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ. ಚನ್ನಪಟ್ಟಣದಲ್ಲಿ ಐಲೆಂಡ್ ರೆಸ್ಟ್ ಏರಿಯಾ ನಿರ್ಮಾಣ ಮಾಡಲು ಸುಮಾರು 50 ಎಕರೆ ಜಮೀನನ್ನು ಖರೀದಿಸಿ ಟ್ರಾಮಾ ಸೆಂಟರ್ ತೆರೆದು ಅಪಘಾತಗಳು ಸಂಭವಿಸಿದಲ್ಲಿ ತುರ್ತು ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು ಎಂದಿದ್ದಾರೆ.
ಮಂಡ್ಯ ಬೈಪಾಸ್ ರಸ್ತೆ ಕಾಮಗಾರಿ ಮುಗಿದಿದೆ. ಕೆಲ ಗ್ರಾಮಗಳಲ್ಲಿ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿಯಾಗಿ 1,201 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಈಗಾಗಲೇ ತ್ರಿಡಿ ನೋಟಿಫಿಕೇಷನ್ ಮುಗಿದು ಮುಂದಿನ ತಿಂಗಳೊಳಗಾಗಿ ಕಾಮಗಾರಿಗೆ ಚಾಲನೆ ನೀಡಲು ಕ್ರಮವಹಿಸಲಾಗಿದೆ. ನೈಸ್ ರಸ್ತೆಯಂತೆ ಆಗಮನ ಮತ್ತು ನಿರ್ಗಮನ ಸಂಪರ್ಕ ಕಲ್ಪಿಸುವ ರಸ್ತೆಯಂತೆ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣಗಳಲ್ಲಿ ಸಂಪರ್ಕ ಕಲ್ಪಿಸುವ ರಸ್ತೆಗಳ ಜೊತೆಗೆ ರೆಸ್ಟ್ ಏರಿಯಾ ನಿರ್ಮಾಣ ಮಾಡಲು ಮುಂದಾಗಿದೆ ಎಂದು ಹೇಳಿದರು.












Click it and Unblock the Notifications