ಬೆಂ-ಮೈ ಜೋಡಿ ಹಳಿಗೆ ಅಡ್ಡಿಯಾದ ಟಿಪ್ಪು ಮದ್ದಿನ ಮನೆ
ಮೈಸೂರು, ಮಾರ್ಚ್ 26 : ಶ್ರೀರಂಗಪಟ್ಟಣ ಬಳಿಯಿರುವ ಟಿಪ್ಪುಸುಲ್ತಾನ್ ಕಾಲದ ಮದ್ದಿನ ಮನೆಯನ್ನು ಸ್ಥಳಾಂತರಿಸುವ ಕಾರ್ಯ ಸದ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣಗಳು ಕಂಡು ಬರುತ್ತಿಲ್ಲವಾದ್ದರಿಂದ ಬೆಂಗಳೂರು-ಮೈಸೂರು ಜೋಡಿ ಹಳಿ ನಿರ್ಮಾಣ ಕಾರ್ಯ ಮುಗಿದು ರೈಲು ಸಂಚರಿಸುವುದು ಯಾವಾಗ ಎಂದು ಜನ ಕಾಯುತ್ತಿದ್ದಾರೆ.
ಕಳೆದ ಮೂರು ವರ್ಷದಿಂದ ಬೆಂಗಳೂರು ಮೈಸೂರು ಜೋಡಿ ರೈಲು ನಿರ್ಮಾಣ ಕಾರ್ಯ ಸಾಗಿದ್ದರೂ ಆಂಗ್ಲೋ ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿದ್ದ ಐತಿಹಾಸಿಕ ಟಿಪ್ಪು ಸುಲ್ತಾನ್ ಮದ್ದಿನ ಮನೆಯನ್ನು ಬೇರೆಡೆಗೆ ಸ್ಥಳಾಂತರಿಸದ ಹೊರತು ಪೂರ್ಣಗೊಳ್ಳುವುದು ಅಸಾಧ್ಯವಾಗಿದೆ.
ಬೆಂಗಳೂರು-ಮೈಸೂರು ರೈಲು ಹಳಿಗೆ ತಾಗಿಕೊಂಡಂತೆ ಇರುವ ಮದ್ದಿನ ಮನೆಯನ್ನು ಒಂದೋ ಸ್ಥಳಾಂತರಗೊಳಿಸಬೇಕು ಇಲ್ಲವೇ ಕೆಡವಬೇಕು. ಇದನ್ನು ಹೊರತು ಪಡಿಸಿದರೆ ಬೇರೆ ಮಾರ್ಗವೇ ಇಲ್ಲದಂತಾಗಿದೆ. [ಶ್ರೀರಂಗಪಟ್ಟಣದ ಕೆ.ಶೆಟ್ಟಿಹಳ್ಳಿ ಕ್ರಾಸ್ ಪ್ರಯಾಣಿಕರ ಯಮಪಾಶ]
ಜೋಡಿ ಹಳಿ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಬೆಂಗಳೂರು ಮತ್ತು ಮೈಸೂರಿನ ನಡುವೆ ರೈಲು ಸಂಪರ್ಕ ಹೆಚ್ಚಲಿದೆ, ಜೊತೆಗೆ ಹೈಸ್ಪೀಡ್ ರೈಲ್ವೆ ಸೇವೆಯೂ ಲಭ್ಯವಾಗಲಿದೆ. 139 ಕಿ.ಮೀ.ನಷ್ಟು ಉದ್ದ ಮೈಸೂರು ಮತ್ತು ಬೆಂಗಳೂರು ಹಳಿಯಿದ್ದು ಈ ಪೈಕಿ 137.5 ಕಿ.ಮೀ.ನಷ್ಟು ಹಳಿಯ ಕೆಲಸವೂ ಮುಗಿದಿದೆ. ಆದರೆ ಶ್ರೀರಂಗಪಟ್ಟಣ ಬಳಿ 1.5 ಕಿ.ಮೀ. ಮಾತ್ರ ಕೆಲಸ ನಡೆಯಬೇಕಿದೆ. ಇದನ್ನು ಪೂರ್ಣಗೊಳಿಸಲು ಮದ್ದಿನ ಮನೆ ಅಡ್ಡಿಯಾಗಿದೆ.
ಸರ್ಕಾರ ಮದ್ದಿನ ಮನೆಯ ಮೂಲ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಸ್ಥಳಾಂತರ ಮಾಡುವ ಉದ್ದೇಶದಿಂದ ಅಮೆರಿಕ ಮೂಲದ ವೂಲ್ಫ್ ಪೈ.ಲಿ. ಎಂಬ ಸಂಸ್ಥೆಗೆ ಕಾಮಗಾರಿಯನ್ನು ವಹಿಸಿದೆ. 13.66 ಕೋಟಿ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಂತೆ ಮದ್ದಿನ ಮನೆಗೆ ಧಕ್ಕೆಯಾಗದಂತೆ ಸುತ್ತಲೂ ಕಂದಕ ತೋಡಿ, ಬಳಿಕ ಸ್ಮಾರಕದ ಕೆಳಗಡೆ ಕಬ್ಬಿಣದ ಸರಳುಗಳು ಇರಿಸಿ ಹೈಡ್ರಾಲಿಕ್ ಕ್ರೇನ್ಗಳ ಮೂಲಕ ಮೇಲೆತ್ತಿ ರೈಲ್ವೆ ಹಳಿಯಿಂದ ಸುಮಾರು 100 ಮೀ. ದೂರದಲ್ಲಿ ಇರಿಸುವುದು ಸಂಸ್ಥೆಯ ಜವಬ್ದಾರಿಯಾಗಿದೆ. ['ಟಿಪ್ಪು ಗೋಹತ್ಯೆ ಮಾಡಿದ ಉಲ್ಲೇಖ ಇತಿಹಾಸದಲ್ಲಿ ಇಲ್ಲ']
ಕಳೆದ ವರ್ಷ ಸಂಸ್ಥೆಗೆ ಕಾಮಗಾರಿ ವಹಿಸಿದ್ದು ವರ್ಷದೊಳಗೆ ಮುಗಿಸಲು ಸೂಚನೆ ನೀಡಲಾಗಿತ್ತು. ಕಾರ್ಯ ಆರಂಭಿಸಿದ ಸಂಸ್ಥೆ ಮದ್ದಿನ ಮನೆಯನ್ನು ಸ್ಥಳಾಂತರಿಸುವ ಸಲುವಾಗಿ ರೈಲ್ವೆ ಇಲಾಖೆಯ ವಸತಿ ಗೃಹಗಳನ್ನು ನೆಲಸಮಗೊಳಿಸಿದೆ.
ಮಂದೆ ಮದ್ದಿನ ಮನೆಯನ್ನು ಅಡಿಪಾಯದ ಸಹಿತ ಮೇಲೆತ್ತಿ ಹಳಿಯಿಂದ ದೂರ ಇಡುವುದಾಗಿದೆ. ಈ ಕಾರ್ಯ ಅಷ್ಟು ಸುಲಭವಾಗಿ ಮುಗಿಯುವಂಥದ್ದಲ್ಲ. ಆದ್ದರಿಂದ ಅದು ಮುಗಿಯುವವರೆಗೂ ಮೈಸೂರು-ಬೆಂಗಳೂರು ಜೋಡಿ ಹಳಿಯಲ್ಲಿ ರೈಲು ಓಡುವುದು ಅಸಾಧ್ಯವೇ. 2014ರಲ್ಲೇ ಜೋಡಿ ರೈಲು ಓಡಾಟ ಆರಂಭಿಸುವ ಭರವಸೆ ನೀಡಲಾಗಿತ್ತು. 2016 ಬಂದರೂ ಅದು ಸಾಧ್ಯವಾಗಿಲ್ಲ. ಹೀಗಾಗಿ ಇನ್ನೆಷ್ಟು ವರ್ಷ ಕಾಯಬೇಕೋ? [ಟಿಪ್ಪು ಜಯಂತಿ ವಿವಾದದ ಒಳ-ಹೊರಗು, ನಿಮ್ಮ ಮುಂದೆ]