ಭಿಕ್ಷೆ ಬೇಡಿ ಬಂದ 2 ಲಕ್ಷ ಯಾದವಗಿರಿ ಪ್ರಸನ್ನ ಆಂಜನೇಯನಿಗೆ ದಾನ
Recommended Video

ಈ ವೃದ್ಧೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದು, ಆಕೆಗೆ ಈವರೆಗೆ ಬಂದ ಒಂದು ಪೈಸೆ ಖರ್ಚು ಮಾಡಿಲ್ಲ. ಮತ್ತೊಬ್ಬರಿಂದ ಸಹಾಯಕ್ಕೆ ಕೈ ಚಾಚುವ ಆಕೆಯದೇ ಔದಾರ್ಯ ಈಗ ಬಯಲಿಗೆ ಬಂದಿದೆ. ದೇವಸ್ಥಾನದ ಮುಂದೆ ಮತ್ತೊಬ್ಬರಿಂದ ಪಡೆದ ಹಣವನ್ನು ತಾನು ದಿನವೂ ಪ್ರಸಾದ ಸ್ವೀಕರಿಸುವ ದೇವರಿರುವ ದೇವಾಲಯಕ್ಕೆ ನೀಡಿದ್ದಾರೆ.
ಹ್ಞಾಂ, ಹಾಗೆ ಆಕೆ ನೀಡಿದ ಮೊತ್ತ ಬರೋಬ್ಬರಿ 2 ಲಕ್ಷ ರುಪಾಯಿ. ಮೂಲತಃ ಮೈಸೂರಿನವರೇ ಆದ ಎಂ.ವಿ ಸೀತಾ, ಯಾದವಗಿರಿಯ ಪ್ರಸನ್ನ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ 20 ವರ್ಷದಿಂದ ಭಿಕ್ಷೆ ಬೇಡುತ್ತಿರುವ ವೃದ್ಧೆ ಮಾಡಿದ ಈ ದಾನ ಕಾರ್ಯ ಎಲ್ಲರ ಮಧ್ಯೆ ಚರ್ಚೆಗೆ ಕಾರಣವಾಗಿದೆ.
ತಾನು ಭಿಕ್ಷೆ ಬೇಡಿ ಬದುಕುತ್ತಿದ್ದರೂ ಈಕೆಗೆ ದೇವರ ಮೇಲೆ ಅಪಾರ ಭಕ್ತಿ ಹಾಗೂ ಗೌರವ. ನಿತ್ಯ ಇದೇ ದೇವಸ್ಥಾನದ ಮುಂದೆ ಭಿಕ್ಷೆ ಬೇಡಿದ ಹಣವನ್ನು ದೇವಸ್ಥಾನದ ಖರ್ಚಿಗೇ ನೀಡಿದ್ದಾರೆ. ಸೀತಾ ಅವರ ಕೆಲಸದಿಂದ ವಿಸ್ಮಿತರಾದ ಜನರು ಕೈಮುಗಿದು ಗೌರವ ಸಲ್ಲಿಸಿದ್ದಾರೆ.

ಸ್ಥಿತಿವಂತರ ಕುಟುಂಬದವರು
ಸ್ಥಿತಿವಂತರ ಕುಟುಂಬದಲ್ಲಿ ಹುಟ್ಟಿ ಬೆಳೆದು, ಜನರಿಂದ ವಂಚಿತರಾಗಿ ನೊಂದಿರುವ ಹಿರಿಯ ಜೀವ ಇದು. ಜನರು ಮೋಸ ಮಾಡಿದರೂ ದೇವರು ಕೈ ಬಿಡಲ್ಲ ಅಂತ ನಂಬಿರುವ ಇವರು, ಸೇವಾ ಕಾರ್ಯದಿಂದ ಶಹಬ್ಬಾಸ್ ಗಿರಿ ಪಡೆದಿದ್ದಾರೆ. ಈಕೆಗೆ ಬಂದ ಹಣವನ್ನು ಕೂಡ ಹಲವರು ಪಡೆದು ಹಿಂತಿರುಗಿಸುವುದಾಗಿ ಮೋಸ ಮಾಡಿದ್ದೂ ಇದು.

2 ದಿನಕ್ಕೊಮ್ಮೆ ಬ್ಯಾಂಕ್ ಗೆ ದುಡ್ಡು
ಇದು ಗೊತ್ತಾದ ಮೇಲೆ ಕೆಲವರು ಬ್ಯಾಂಕ್ ಅಕೌಂಟ್ ತೆರೆಯುವಂತೆ ಸಲಹೆ ನೀಡಿದ್ದಾರೆ. ಆ ನಂತರ ಬ್ಯಾಂಕ್ ನಲ್ಲಿ ಅಕೌಂಟ್ ತೆರೆದು, 2 ದಿನಕ್ಕೊಮ್ಮೆ ಹೋಗಿ ದುಡ್ಡು ಕಟ್ಟುತ್ತಿದ್ದರಂತೆ. ಹಾಗೆ ತಾನು ಕೂಡಿಟ್ಟಿದ್ದ ಹಣವನ್ನೆಲ್ಲ ತನಗೆ ಪ್ರಸಾದ ಹಾಗೂ ಸೌಕರ್ಯವನ್ನು ನೀಡಿದ ದೇವಸ್ಥಾನಕ್ಕೆ ವಾಪಸ್ ಕೊಡಬೇಕೆಂಬ ಅಪೇಕ್ಷೆಯಿಂದಾಗಿ 90ರ ಹರೆಯದ ಈ ಮಹಿಳೆ ದಾನ ಮಾಡಿದ್ದಾರೆ.

ದೇವಸ್ಥಾನಕ್ಕೆ ಕೊಡುವುದಾಗಿ ಭಿಕ್ಷೆ
ಸಂಬಂಧಿಕರಿಂದಲೇ ತಿರಸ್ಕಾರಕ್ಕೆ ಒಳಗೆ ಮನೆಯಿಂದ ಹೊರ ದಬ್ಬಿಸಿಕೊಂಡ ಈಕೆ ಜನರಿಂದ ಭಿಕ್ಷೆಗಾಗಿ ಅಂಗಲಾಚುತ್ತಿದ್ದಾಗ ತಾನು ದೇವಸ್ಥಾನಕ್ಕೆ ಈ ಹಣ ನೀಡುವುದಾಗಿ ಹೇಳುತ್ತಿದ್ದರು. ಇದೀಗ ಅದನ್ನು ನಿಸ್ವಾರ್ಥ ಮನೋಭಾವದಿಂದ ಅರ್ಪಿಸುತ್ತಿದ್ದೇನೆ ಎಂದು ಅಜ್ಜಿ ಹೇಳಿದ್ದಾರೆ.

ಎಣಿಸಿದರೆ ಎರಡು ಲಕ್ಷ
ಅಜ್ಜಿಯ ಹಣವನ್ನು ಮೊದಲು ದೇವಸ್ಥಾನದ ಆಡಳಿತ ಮಂಡಳಿ ತಿರಸ್ಕರಿಸಿತ್ತು. ಆ ನಂತರ ತನಗೆ ಇಷ್ಟು ದಿನ ಪ್ರಸಾದದ ರೂಪದಲ್ಲಿ ಊಟ ಹಾಕಿದ, ಉಳಿದುಕೊಳ್ಳಲು ಜಾಗವಿತ್ತ ದೇವಾಲಯಕ್ಕೆ ತನ್ನ ಹಣ ತಲುಪಬೇಕು ಎಂದು ಪಟ್ಟು ಹಿಡಿದಾಗ ತೆಗೆದುಕೊಂಡಿದ್ದಾರೆ. ಆಕೆ ನೀಡಿದ ಹಣವನ್ನು ಎಣಿಕೆ ಮಾಡಿದಾಗ ಇದ್ದದ್ದು ಬರೋಬ್ಬರಿ 2 ಲಕ್ಷ ರುಪಾಯಿ.

ಕೆರೆಯ ನೀರನು ಕೆರೆಗೆ ಚೆಲ್ಲಿ
ಈ ಹಣವನ್ನು ನೀವೇ ಇಟ್ಟುಕೊಂಡು ಜೀವನ ಸಾಗಿಸಿ ಎಂದು ದೇವಸ್ಥಾನ ಆಡಳಿತ ಮಂಡಳಿಯವರು ಎಷ್ಟೇ ಸಲಹೆ ನೀಡಿದರೂ ಕೇಳದ ಅಜ್ಜಿ, ನನ್ನ ಜನರು ಮೋಸ ಮಾಡಿದರೂ ಈ ದೇವರು ಮೋಸ ಮಾಡಲಿಲ್ಲ. ಅವನು ಕೊಟ್ಟಿದ್ದನ್ನೇ ಆತನಿಗೆ ವಾಪಸ್ ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.












Click it and Unblock the Notifications