ಮಳೆ, ಪ್ರವಾಹದ ವಿಚಾರದಲ್ಲಿ ರಾಜಕೀಯ ಬೇಡ: ಸಿಎಂ
ಮೈಸೂರು, ಸೆಪ್ಟೆಂಬರ್ 6: ಮಳೆ, ಪ್ರವಾಹದ ವಿಷಯದಲ್ಲಿ ರಾಜಕೀಯವಾಗುತ್ತಿರುವುದು ದುರ್ದೈವದ ಸಂಗತಿ. ಮಳೆ ತಂದಿರುವ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಯುದ್ಧೋಪಾದಿಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂದು ಕರೆಸಿಕೊಳ್ಳುವ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಒಂದು ದಿನ ವ್ಯಾಪಕವಾಗಿ ಮಳೆ ಬಿದ್ದಾಗ ಬಹುತೇಕ ಕಡೆಗಳಲ್ಲಿ ನೀರು ತುಂಬಿಕೊಂಡು, ತಗ್ಗು ಪ್ರದೇಶಗಳು ಜಲಾವೃತವಾಗಿ ಹಾನಿ ಉಂಟಾಗುತ್ತದೆ. ಹಲವೆಡೆ ಅನಾಹುತವಾಗುತ್ತವೆ. ಈ ಬಾರಿಯ ಮಳೆಗೆ ಬೆಂಗಳೂರಿನಲ್ಲಿ ಸಾಕಷ್ಟು ತೊಂದರೆಯಾಗಿದೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮಳೆ ಯಾವ ಪಕ್ಷವನ್ನೂ ನೋಡಿ ಬರುವುದಿಲ್ಲ. ಇಡೀ ರಾಜ್ಯದಲ್ಲಿ ಎಲ್ಲ ಕೆರೆಗಳೂ ತುಂಬಿದ್ದು, ದಾಖಲೆಯ ಮಳೆಯಾಗಿದೆ. ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರದಲ್ಲಿ ಹೆಚ್ಚು ಮಳೆಯಾಗಿದೆ. ಬೆಂಗಳೂರಿನಲ್ಲಿ ಕೆರೆಗಳೆಲ್ಲಾ ತುಂಬಿ ಹರಿಯುತ್ತಿದೆ. ಜಲಪ್ರವಾಹದ ವಿರುದ್ದ ನಾವು ಸಮರ ಸಾರಿದ್ದೇವೆ. ಈ ಸವಾಲನ್ನು ಒಗ್ಗಟ್ಟಾಗಿ ಎದುರಿಸಬೇಕಾಗಿದೆ. ಈ ವಿಷಯದಲ್ಲಿ ರಾಜಕೀಯ ಮಾಡುವುದು ಸಣ್ಣ ಪ್ರವೃತ್ತಿಯಾಗಿದೆ ಎಂದು ತಿಳಿಸಿದರು.

ಮೇಯರ್-ಉಪಮೇಯರ್ ಸ್ಥಾನಗ ಸಿಕ್ಕಿದ್ದು ಒಳ್ಳೆಯದೇ
ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್, ಉಪ ಮೇಯರ್ ಎರಡು ಸ್ಥಾನಗಳಿಸಿರುವುದು ಮೈಸೂರಿನ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು. ಎರಡು ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದರೂ, ಮುಂದಿನ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತದೆ. ಕಾಂಗ್ರೆಸ್ ಅವಧಿಯಲ್ಲಿ ಆಗಿರುವ ಹಿನ್ನಡೆಯನ್ನು ಗಮನಿಸಿರುವ ನಗರಪಾಲಿಕೆ ಸದಸ್ಯರು ಬಿಜೆಪಿ ಬೆಂಬಲಿಸಿದ್ದಾರೆ.
ಈ ಬಾರಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಯಿತು. ಸಂಖ್ಯಾ ಬಲದ ಆಧಾರದ ಮೇಲೆ ಸ್ಪರ್ಧೆಗೆ ಮುಂದಾಗಿದವು. ಉಪ ಮೇಯರ್ ಸ್ಥಾನಕ್ಕಾಗಿ ಜೆಡಿಎಸ್ ಕೂಡ ಪ್ರಯತ್ನಿಸಿತು. ಆದರೆ ತಾಂತ್ರಿಕವಾಗಿ ಜೆಡಿಎಸ್ಗೆ ಸೋಲಾಯಿತು ಎಂದರು.

ಕೆರೆಗಳು ತುಂಬಿರುವುದರಿಂದ ಎಲ್ಲೆಂದರಲ್ಲಿ ನೀರು
ಬೆಂಗಳೂರಿನಲ್ಲಿ 164 ಕೆರೆಗಳೂ ತುಂಬಿದೆ. ಅನಿರೀಕ್ಷಿತ ಮಳೆಯಾಗಿದ್ದು, ದೊಡ್ಡ ಪ್ರಮಾಣದ ಒತ್ತುವರಿಯಾಗಿದೆ. ರಾಜಕಾಲುವೆಗಳನ್ನು, ಚರಂಡಿಗಳನ್ನು ಮುಚ್ಚಲಾಗಿದೆ. ಆದ್ದರಿಂದ ನೀರು ಬಡಾವಣೆಗಳು , ಐಟಿಪಾರ್ಕ್ ಗಳ ಮುಂದೆ ಬಂದು ನಿಂತಿದೆ. ನಮ್ಮ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನೀರನ್ನು ತೆರವು ಕಾರ್ಯಾಚರಣೆಯನ್ನು ಮಾಡಲಾಗುತ್ತಿದ್ದು, ಸವಾಲಿನ ಕೆಲಸವಾಗಿದೆ. ಮೋಟರ್ ಬಳಸಿ ನೀರು ಖಾಲಿ ಮಾಡಿಸಬೇಕಾದರೂ, ನೀರು ಹೋಗಲು ಜಾಗವಿಲ್ಲ . ವರ್ತೂರು ಕೆರೆ ಮತ್ತು ಬೆಳ್ಳಂದೂರು ಕೆರೆ ಅವುಗಳಲ್ಲಿ ಈಗಾಗಲೇ ನೀರು ತುಂಬಿ ಹರಿಯುತ್ತಿರುವುದರಿಂದ, ಹೆಚ್ಚಿನ ನೀರು ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.

ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವಿಗೆ ಸೂಚನೆ
ಒತ್ತುವರಿಗಳನ್ನು ತೆರವು ಮಾಡಲಾಗುತ್ತಿದ್ದು, ವರ್ತೂರು ಮತ್ತು ಬೆಳಂದೂರು ಕೆರೆಗಳಲ್ಲಿ ನೀರಿನ ಹರಿವನ್ನು ನಿಯಂತ್ರಿಸಲಾಗುತ್ತಿದೆ. ಬುಧವಾರ ಸಂಜೆಯೊಳಗೆ ಈ ಕಾರ್ಯವನ್ನು ಸಂಪೂರ್ಣ ಮುಗಿಸಲಾಗುತ್ತದೆ. ನಾನೇ ಖುದ್ದು ಪರಿಶೀಲನೆ ಮಾಡುತ್ತಿದ್ದೇನೆ. ಯಾರೇ ಒತ್ತುವರಿ ಮಾಡಿದ್ದರೂ ಕೂಡ, ಅದನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡುವ ಸೂಚನೆ ನೀಡಲಾಗಿದ್ದು, ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಎರಡು ಎಸ್ ಡಿ ಆರ್ ಎಫ್ ತಂಡವನ್ನು ನಿಯೋಜಿಸಲಾಗಿದೆ. ಬಿಬಿಎಂಪಿ. ಜಲಮಂಡಳಿ, ಬಿಡಿಎ ಸಿಬ್ಬಂದಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನಾಳೆ ಸಂಜೆಯೊಳಗೆ ಈ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಬೆಂಗಳೂರಿನ ಮಳೆ ನಿರ್ವಹಣೆ ಹಾಗೂ ಮೂಲಸೌಲಭ್ಯಗಳ ನಿರ್ವಹಣೆಗೆ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ 8 ವಲಯಗಳಲ್ಲಿ 2ಕ್ಕೆ ಹಾನಿ
ಬೆಂಗಳೂರಿನಲ್ಲಿ 90 ವರ್ಷ ಆಗದಿರುವ ಮಳೆಯಾಗಿದೆ. ಇಡೀ ಬೆಂಗಳೂರು ಮುಳುಗಿಲ್ಲ. ಆ ರೀತಿ ಬಿಂಬಿಸುವ ಅವಶ್ಯಕತೆ ಇಲ್ಲ. ಬೆಂಗಳೂರಿನಲ್ಲಿ 8 ವಲಯಗಳಿವೆ. ಅವುಗಳಲ್ಲಿ 2 ವಲಯಗಳಲ್ಲಿ ತೊಂದರೆಯಾಗಿದೆ. ಅದರಲ್ಲಿ ಬೊಮ್ಮನಹಳ್ಳಿ ವಲಯ ಸಂಪೂರ್ಣ ನಿಯಂತ್ರಣದಲ್ಲಿದೆ. ಮತ್ತೊಂದು ವಲಯದಲ್ಲಿ 69 ಕೆರೆಗಳಿದ್ದು, ಅವುಗಳೆಲ್ಲವೂ ತುಂಬಿ, ನಿರಂತರವಾಗಿ ಮಳೆಯಾಗಿ ನೀರು ಹರಿಯುತ್ತಿದೆ. ಅನಿರೀಕ್ಷಿತ ಮಳೆಯಾಗಿದ್ದು, ಯಾವ ಚರಂಡಿಯನ್ನೂ ಈ ರೀತಿಯ ಮಳೆಗೆ ವಿನ್ಯಾಸಗೊಳಿಸಿರಲಿಲ್ಲ. ಮಹದೇವಪುರದಲ್ಲಿ ಒತ್ತುವರಿಯಾಗಿದೆ ಎಂದರು.












Click it and Unblock the Notifications