ಮೈಸೂರಿನ ಶಕ್ತಿಧಾಮಕ್ಕೆ 5 ಕೋಟಿ ರೂ. ಅನುದಾನ: ಸಿಎಂ
ಮೈಸೂರು, ಏಪ್ರಿಲ್ 07; "ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿರುವ ಮೈಸೂರಿನ ಶಕ್ತಿಧಾಮಕ್ಕೆ 5 ಕೋಟಿ ರೂ. ನೆರವು ನೀಡಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ಗುರುವಾರ ಮೈಸೂರು ನಗರದ ಊಟಿ ರಸ್ತೆಯಲ್ಲಿರುವ ಶಕ್ತಿಧಾಮದಲ್ಲಿ ಇನ್ಫೋಸಿಸ್ ಫೌಂಡೇಶನ್ ಬ್ಲಾಕ್ ಕಟ್ಟಡ ಲೋಕಾರ್ಪಣೆ ಹಾಗೂ ಶಕ್ತಿಧಾಮ ವಿದ್ಯಾಶಾಲಾ ಶಂಕುಸ್ಥಾಪನೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಸಮಾಜದ ನೋವಿಗೆ ಚಿಕಿತ್ಸೆ ನೀಡುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಶೋಷಿತರು, ದುರ್ಬಲರನ್ನು ಸಮಾಜ ಮತ್ತು ಸರಕಾರ ಕೈ ಹಿಡಿದು ನಿಲ್ಲಿಸಬೇಕು. ಪ್ರೀತಿ ವಿಶ್ವಾಸವನ್ನು ಸಮಾಜಕ್ಕೆ ಕೊಟ್ಟರೇ ಅದೇ ಪ್ರೀತಿ ಗೌರವ ನಮಗೆ ಸಿಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಳ್ಳೆಯದನ್ನೇ ಮಾಡಬೇಕು. ಒಳ್ಳೆಯದನ್ನೇ ಯೋಚಿಸಬೇಕು" ಎಂದರು.
"ಶಕ್ತಿಧಾಮ ಎಂಬುದು ಸರಿಯಾದ ಹೆಸರು. ಸ್ತ್ರೀ ಎಂದರೆ ಶಕ್ತಿ, ಭಗವಂತ ಸೃಷ್ಟಿ ಮಾಡುವ ಅಮೂಲ್ಯ ಗುಣವನ್ನು ಹೆಣ್ಣಿಗೆ ನೀಡಿದ್ದಾನೆ. ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಏನೆಲ್ಲಾ ಮಾಡಿದರೂ ಒಂದು ಮಗುವಿಗೆ ಜನ್ಮ ನೀಡುವ ಶಕ್ತಿಯನ್ನು ಪಡೆದುಕೊಂಡಿಲ್ಲ. ಹಾಗಾಗಿ ಇಂದು ಸರಕಾರ ಮಾಡುವ ಕೆಲಸವನ್ನು ಶಕ್ತಿಧಾಮ ಮಾಡುತ್ತಿದೆ. ಹಾಗಾಗಿ ಬಜೆಟ್ನಲ್ಲಿ ಇದಕ್ಕೆ ವಿಶೇಷ ನೆರವು ಘೋಷಿಸಲಾಗಿತ್ತು" ಎಂದು ಹೇಳಿದರು.
ಈ ಕಾರ್ಯಕ್ರಮಲ್ಲಿ ಇನ್ಫೋಸಿಸ್ ಉಪಾಧ್ಯಕ್ಷ ಸಾಜು ಮ್ಯಾಥ್ಯೂ, ನಟ ಶಿವರಾಜ್ ಕುಮಾರ್, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಮುಂತಾದವರು ಉಪಸ್ಥಿತರಿದ್ದರು.

ಹೆಣ್ಣುಮಕ್ಕಳ ಅಭವೃದ್ಧಿಗೆ ಶ್ರಮ
"ನಮ್ಮ ಸರಕಾರ ಹೆಣ್ಣು ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಜೊತೆಗೆ ಆರೋಗ್ಯ, ಶಿಕ್ಷಣಕ್ಕೆಂದೆ 40 ಸಾವಿರ ಕೋಟಿ ಮೀಸಲಿಡಲಾಗಿದೆ. ಆ್ಯಸಿಡ್ ದಾಳಿಗೆ ಒಳಗಾದವರಿಗೆ 2 ಸಾವಿರ ಇದ್ದ ಸಹಾಯಧನವನ್ನು 10 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಅಲ್ಲದೆ ನಿರಾಶ್ರಿತರಿಗೆ ಹೊಸ ಬದುಕು ಕಟ್ಟಿಕೊಡುತ್ತಿರುವ ಸಂಘ-ಸಂಸ್ಥೆಗಳಿಗೂ ನಮ್ಮ ಸರಕಾರ ಪ್ರೋತ್ಸಾಹ ನೀಡುತ್ತಿದೆ" ಎಂದು ಮುಖ್ಯಮಂತ್ರಿಗಳು ಹೇಳಿದರು.

ಮುಖ್ಯಮಂತ್ರಿಗಳು ಕಾಮನ್ ಮ್ಯಾನ್
ನಟ ಶಿವರಾಜ್ ಕುಮಾರ್ ಮಾತನಾಡಿ, "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳ ರೀತಿ ಎಂದೂ ವರ್ತಿಸಲಿಲ್ಲ. ಅವರೊಬ್ಬ ಕಾಮನ್ ಮ್ಯಾನ್. ಸಿಎಂ ಅವರು ನಮ್ಮ ಕುಟುಂಬದ ಮೇಲೆ ಅಪ್ಪು ಅವರು ಅಗಲಿದಾಗಿನಿಂದಲೂ ಇಟ್ಟಿರುವ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ಭಾವನೆಯನ್ನು ನಾಟಕ ಮಾಡಲು ಆಗಲ್ಲ. ಹೀಗಾಗಿ ಅವರ ಭಾವನಾತ್ಮಕತೆ ನಮಗೆ ಸ್ಪೂರ್ತಿಯಾಗಿದ್ದು, ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ" ಎಂದರು.
"ನನಗೆ ಇಂದು ಬಹಳ ಖುಷಿಯಾಗುತ್ತಿದೆ. ಇನ್ಫೋಸಿಸ್ನಿಂದ ಇಂತಹ ಕಟ್ಟಡ ನೀಡಿದ್ದು, ಸುಧಾಮೂರ್ತಿಯವರಿಗೆ ಸದಾ ಚಿರ ಋಣಿ ಆಗಿರುತ್ತೇನೆ" ಎಂದು ಹೇಳಿದರು.

ನಮ್ಮ ಕುಟುಂಬದ ನಂಟಿದೆ
"ಜೆಎಸ್ಎಸ್ ವಿದ್ಯಾಪೀಠದೊಂದಿಗೆ ನಮ್ಮಕುಟುಂಬದ ನಂಟಿದೆ. ಅಮ್ಮ ಶಕ್ತಿಧಾಮ ಪ್ರಾರಂಭವಾದಾಗ ಅಪ್ಪ ಅಮ್ಮ ಶಕ್ತಿಧಾಮ ಮುನ್ನಡೆಸಿಕೊಂಡು ಬಂದರು. ಬಳಿಕ ಗೀತಾಳಿಗೆ ಆ ಭಾಗ್ಯ ಸಿಕ್ಕಿತು. ಅದಾದ ಮೇಲೆ ಅಪ್ಪು ನಮ್ಮಿಂದ ದೂರ ಆದ ಮೇಲೆ ಕಳೆದ ಏಳೆಂಟು ತಿಂಗಳಿಂದ ಇಲ್ಲಿಗೆ ಹೆಚ್ಚಾಗಿ ಬರಲು ಆರಂಭಿಸಿದೆ. ಡಿಸೆಂಬರ್ನಿಂದಲೇ ಅಪ್ಪುವನ್ನು ಈ ಮಕ್ಕಳಲ್ಲಿ ನೋಡಿ ಸಮಾಧಾನ ಪಡೆಯುತ್ತಿದ್ದೇನೆ" ಎಂದು ಶಿವರಾಜ್ ಕುಮಾರ್ ಹೇಳಿದರು.

ಅಣ್ಣ, ತಂದೆಯಾಗಿ ನೋಡುತ್ತಾರೆ
"ಈ ಮಕ್ಕಳು ನನ್ನನ್ನು ಅಣ್ಣ, ತಂದೆಯಾಗಿ ನೋಡುತ್ತಾರೆ. ನನ್ನ ಉಸಿರು ಇರುವವರೆಗೂ ನಾನು ನಿಮ್ಮ ಜೊತೆಗಿರುತ್ತೇನೆ. ಶಕ್ತಿಧಾಮಕ್ಕೆ ಗೀತಾ ಏನೇ ಮಾಡಿದರೂ ಅವಳ ಶಕ್ತಿಗೆ ನಾನು ಯುಕ್ತಿಯಾಗಿ ಇರುತ್ತೇನೆ" ಎಂದು ಶಿವರಾಜ್ ಕುಮಾರ್ ಭರವಸೆ ನೀಡಿದರು.












Click it and Unblock the Notifications