ಕಾಶ್ಮೀರ್ ಫೈಲ್ಸ್ ರೀತಿ ಬದನವಾಳು ಹತ್ಯಾಕಾಂಡದ ಚಿತ್ರ ನಿರ್ಮಾಣ
ಮೈಸೂರು, ಮಾರ್ಚ್ 27; 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸುತ್ತಿರುವ ಬೆನ್ನಲ್ಲೇ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ನಡೆದ ದಲಿತರ ಹತ್ಯಾಕಾಂಡದ ಕುರಿತಂತೆ ಸಿನಿಮಾ ನಿರ್ಮಿಸಲು ನಿರ್ದೇಶಕ ಗಿರಿಕೃಷ್ಣ ಮುಂದಾಗಿದ್ದಾರೆ.
1993ರಲ್ಲಿ ಬದನವಾಳು ಗ್ರಾಮದಲ್ಲಿ ದೇವಾಲಯದ ಪ್ರವೇಶ ಸಂಬಂಧ ಉಂಟಾದ ಗಲಭೆಯಲ್ಲಿ ದಲಿತರ ಕಗ್ಗೊಲೆಯಾಗಿತ್ತು. ಈ ಘಟನೆಯನ್ನು ಮುಂದಿಟ್ಟುಕೊಂಡು ಸಿನಿಮಾ ನಿರ್ಮಿಸುವ ತಯಾರಿ ನಡೆದಿದ್ದು ಆ ಮೂಲಕ ಹೊಸ ಪ್ರಯೋಗವೊಂದಕ್ಕೆ ಗಿರಿಕೃಷ್ಣ ತಯಾರಿ ನಡೆಸುತ್ತಿದ್ದಾರೆ.
ಬದನವಾಳು ಗ್ರಾಮದಲ್ಲಿ ಘಟನೆ ನಡೆದು ಮೂವತ್ತು ವರ್ಷಗಳಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸುಧೀರ್ಘ ವಿಚಾರಣೆ ನಡೆದು 18 ವರ್ಷಗಳ ನಂತರ ಅಂದರೆ 2010ರಲ್ಲಿ 23 ಜನರಿಗೆ ಜೀವಾವಧಿ ಶಿಕ್ಷೆಯಾಯಿತು. ಇವತ್ತಿಗೂ ಇತಿಹಾಸದ ಪುಟಗಳಲ್ಲಿ ಬದನವಾಳು ಹತ್ಯಾಕಾಂಡ ಉಳಿದು ಹೋಗಿದೆ.

ಈ ಘಟನೆಯನ್ನು ಆಧರಿಸಿ ಸಿನಿಮಾ ತೆಗೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಬದನವಾಳು ಗ್ರಾಮದಲ್ಲಿ ಸಿನಿಮಾಕ್ಕೆ ಮುಹೂರ್ತವನ್ನು ನೆರವೇರಿಸಲಾಗಿದೆ. ಈ ವೇಳೆ ಗಲಭೆಯಲ್ಲಿ ಕೊಲೆಯಾದವರ ಸಮಾಧಿ ಬಳಿ ಚಿತ್ರತಂಡ ಮೂಹೂರ್ತದ ಮೊದಲ ದೃಶ್ಯದ ಚಿತ್ರೀಕರಣ ನಡೆಸಿದೆ. ಮೊದಲ ದೃಶ್ಯಕ್ಕೆ ಹತ್ಯಾಕಾಂಡ ನಡೆದ ವೇಳೆ ಬದುಕುಳಿದ ಪ್ರತ್ಯಕ್ಷ ಸಾಕ್ಷಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಿ. ಎಸ್. ರಾಮು ಕ್ಲಾಪ್ ಮಾಡಿದ್ದಾರೆ.
ಚಿತ್ರದ ಕುರಿತಂತೆ ಮಾತನಾಡಿರುವ ನಿರ್ದೇಶಕ ಗಿರಿಕೃಷ್ಣ, "ಬದನವಾಳು ಗ್ರಾಮದಲ್ಲಿ ಜರುಗಿದ ದಲಿತ ದೌರ್ಜನ್ಯ ಪ್ರಕರಣಕ್ಕೆ ಇಂದಿಗೆ 29 ವರ್ಷ ತುಂಬಿದೆ. ಬದನವಾಳು ದಲಿತರ ಕಗ್ಗೊಲೆ ಕುರಿತ ನೈಜ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಅಂದಿನ ಘಟನೆ ವೇಳೆ ಪ್ರಾಣಾಪಾಯದಿಂದ ಪಾರಾದ ಗ್ರಾಮದ ಬಿ. ಎಸ್. ರಾಮು, ಕೃಷ್ಣಮೂರ್ತಿ, ಸೋಮಣ್ಣ, ರಮೇಶ, ರೇವಣ್ಣ, ಬಿ. ಜಿ. ಸ್ವಾಮಿ, ಶ್ರೀಧರ್, ಜಗದೀಶ್ ನಟಿಸಲಿದ್ದು, ಅವರೇ ಅವರ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಿಗೆ ನಟ, ನಟಿಯರ ಆಯ್ಕೆ ಶೀಘ್ರದಲ್ಲಿ ನಡೆಯಲಿದೆ. ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕೊಡಲಾಗುವುದು" ಎಂದರು.
ಜಾಗೃತಿ ಮೂಡಿಸಲು ಚಿತ್ರ ನಿರ್ಮಾಣ; ಸಮಾಜದಲ್ಲಿ ಇಂತಹ ಘಟನೆಗಳು ಜರುಗುತಿದ್ದರೂ ನಾವು ಏನು ಆಗಿಲ್ಲ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಅಂತಹ ಘಟನೆ ಮರುಕಳಿಸದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರವನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಚಿತ್ರೀಕರಣವು ಬದನವಾಳು ಗ್ರಾಮ ಸೇರಿದಂತೆ ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ನಡೆಯಲಿದೆ. ರಾಜ್ಯದಲ್ಲಿ ನಡೆದ ದಲಿತರ ಕೊಲೆಗಳಲ್ಲಿ ಬದನವಾಳು ಕಗ್ಗೊಲೆ ಮಾಡಿದವರಿಗೆ ಮಾತ್ರ 18 ವರ್ಷಗಳ ನಂತರ ಶಿಕ್ಷೆಯಾಯಿತು. ಈ ಕಥಾ ಹಂದರವನ್ನಿಟ್ಟುಕೊಂಡು ದಾಖಲೆ ಸಮೇತ ವಿವರವಾಗಿ ಸಿನಿಮಾವನ್ನು ನಿರ್ಮಿಸಲಾಗುತ್ತದೆ.
18 ವರ್ಷಗಳ ವಿಚಾರಣೆ ಬಳಿಕ ತೀರ್ಪು; ಇನ್ನು ಘಟನೆಯಲ್ಲಿ ಬದುಕುಳಿದ ಬಿ. ಎಸ್. ರಾಮು ಮಾತನಾಡಿ, "ದೇವಾಲಯ ಪ್ರವೇಶ ಸಂಬಂಧ 1993ರ ಮಾರ್ಚ್ 25ರಂದು ತಾಲೂಕಿನ ಆನೆಂಬಳ್ಳಿ ಗ್ರಾಮದಿಂದ ಕ್ರಿಕೆಟ್ ಆಟವಾಡಿಕೊಂಡು ಮನೆಗೆ ಬರುತ್ತಿದ್ದ ನಮ್ಮ ಮೇಲೆ ದೇವನೂರು- ಬದನವಾಳು ಮಾರ್ಗ ಮಧ್ಯೆ ಅಡಗಿ ಕುಳಿತು 70 ಜನರ ಮೂರು ಗುಂಪುಗಳು ಪ್ರತ್ಯೇಕವಾಗಿ ಮಚ್ಚು ದೊಣ್ಣೆಗಳಿಂದ ದಾಳಿ ನಡೆಸಿದರು" ಎಂದರು.
"ಈ ಘಟನೆಯಲ್ಲಿ ಮೂವರ ಕಗ್ಗೊಲೆಯಾಗಿ 11 ಮಂದಿ ಗಾಯಗೊಂಡರು. ಸುಮಾರು 18 ವರ್ಷಗಳ ಕಾಲ ಸುಧೀರ್ಘ ವಿಚಾರಣೆ ನಡೆದು 2010ರಲ್ಲಿ 23 ಜನರಿಗೆ ಜೀವಾವಧಿ ಶಿಕ್ಷೆಯಾಯಿತು. ಇತಿಹಾಸದಲ್ಲೇ ಮೊದಲಬಾರಿಗೆ ದಲಿತ ದೌರ್ಜನ್ಯ ಪ್ರಕರಣಕ್ಕೆ ಶಿಕ್ಷೆಯಾಗಿರುವುದರಲ್ಲಿ ಈ ಪ್ರಕರಣವೇ ಮೊದಲು. ಈ ಕುರಿತು ಸಿನಿಮಾ ನಿರ್ಮಾಣವಾಗಿತ್ತಿದ್ದು ಈ ಸಿನಿಮಾ ಮೂಲಕ ಜಾಗೃತಿ ಉಂಟಾಗಿ ದಲಿತ ದೌರ್ಜನ್ಯಗಳು ನಿಲ್ಲಲಿ" ಎಂಬುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.












Click it and Unblock the Notifications