ಶಾಸಕರಿಗೆ ಎಚ್ಚರಿಕೆ ನೀಡಿದ ಬಡಗಲಪುರ ನಾಗೇಂದ್ರ
ಮೈಸೂರು, ಜನವರಿ 18: ಮಾನ-ಮರ್ಯಾದೆ ಇದ್ದರೆ ರೆಸಾರ್ಟ್ ಬಿಟ್ಟು ಕ್ಷೇತ್ರಕ್ಕೆ ಬನ್ನಿ, ಇಲ್ಲ ಶಾಸಕರ ವಿರುದ್ಧ ವಿಧಾನಸೌಧ ಖಾಲಿ ಮಾಡಿ' ಹೋರಾಟ ಆರಂಭಿಸಲಾಗುವುದು ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.
ನಗರದ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕೀಯ ಬೆಳವಣಿಗೆ ದೊಂಬರಾಟದಂತಾಗಿರುವುದು ವಿಪರ್ಯಾಸ. ಮಂತ್ರಿಗಿರಿ ಅಧಿಕಾರಕ್ಕಾಗಿ ಸಮ್ಮಿಶ್ರ ಸರ್ಕಾರ ಸಮಯ ಹಾಳು ಮಾಡುತ್ತಿದೆ. ಆಡಳಿತ ಪಕ್ಷಗಳ ವೈಫಲ್ಯಕ್ಕೆ ಚಾಟಿ ಬೀಸಬೇಕಾದ ವಿರೋಧ ಪಕ್ಷ ತನ್ನ ಜವಾಬ್ದಾರಿ ಮರೆತಿದೆ ಎಂದು ಆರೋಪಿಸಿದರು.
ರಾಜ್ಯದ 150 ತಾಲೂಕುಗಳಲ್ಲಿ ಬರಗಾಲದಿಂದಾಗಿ ಉದ್ಯೋಗಕ್ಕಾಗಿ ಜನರು ಗುಳೆ ಹೋಗುವ ಪರಿಸ್ಥಿತಿ ತಲೆದೋರಿದೆ. ಇಂತಹ ವೇಳೆ ಜನಪ್ರತಿನಿಧಿಗಳು ಜನರ ಕಷ್ಟ ಆಲಿಸುವ ಕೆಲಸ ಮಾಡಬೇಕು. ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿದ್ದು, ಸರ್ಕಾರದ ಕಿವಿ ಹಿಂಡಿ ಕೆಲಸ ಮಾಡಿಸುವುದನ್ನು ಬಿಟ್ಟು ವಾಮಮಾರ್ಗದ ಮೂಲಕ ಜನಪ್ರತಿನಿಧಿಗಳನ್ನು ಕರೆದೊಯ್ಯುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.

ಕೃಷ್ಣರಾಜಸಾಗರ ಅಣೆಕಟ್ಟೆಯ ಹಿನ್ನೀರಿನಲ್ಲಿ ನಿರ್ಮಿಸಲು ಮುಂದಾಗಿರುವ ಡಿಸ್ನಿಲ್ಯಾಂಡ್ ಮಾದರಿ ಉದ್ಯಾನವನದಿಂದ ಆಗುವ ತೊಂದರೆ ಸಂಬಂಧ ಬಹಿರಂಗ ಚರ್ಚೆಗೆ ಮುಖ್ಯಮಂತ್ರಿಗಳು ದಿನಾಂಕ ನಿಗದಿಪಡಿಸಲಿ. ಚರ್ಚಿಸಲು ಪ್ರಗತಿಪರ ಸಂಘಟನೆಗಳು, ರೈತಸಂಘ, ಕೆಆರ್ ಎಸ್ ಉಳಿಸಿ ಹೋರಾಟ ಸಮಿತಿ ಸಿದ್ಧವಿದೆ. ಡಿಸ್ನಿಲ್ಯಾಂಡ್ ವಿಚಾರ ಅವೈಜ್ಞಾನಿಕ ಎಂಬುದನ್ನು ದಾಖಲೆಗಳ ಮೂಲಕ ಮುಖ್ಯಮಂತ್ರಿಗಳಿಗೆ, ರೈತರಿಗೆ ತಿಳಿಸುತ್ತೇವೆ ಎಂದರು.
ಭತ್ತ ಖರೀದಿ ಕೇಂದ್ರ ಶೀಘ್ರ ತೆರೆಯುವಲ್ಲಿ ಜಿಲ್ಲಾಡಳಿತ ವಿಫಲವಾದ ಹಿನ್ನೆಲೆಯಲ್ಲಿ ನೋಂದಾಯಿಸಿಕೊಂಡ ರೈತರ ಸಂಖ್ಯೆಯೂ ಕಡಿಮೆಯಾಗಿದೆ. ಕಡಿಮೆ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡಿದ್ದಾರೆಂಬ ನೆಪವೊಡ್ಡಿ ಬೇರೆ ಜಿಲ್ಲೆಗೆ ಮಾರಾಟ ಮಾಡುವುದನ್ನು ಜಿಲ್ಲಾಡಳಿತ ಬಿಟ್ಟು ಸ್ಥಳೀಯವಾಗಿ ಖರೀದಿ ಪ್ರಕ್ರಿಯೆ ನಡೆಸಬೇಕೆಂದು ರೈತಸಂಘ ಆಗ್ರಹಿಸುತ್ತದೆ ಎಂದರು.












Click it and Unblock the Notifications