ಮರ್ಯಾದೆ ಹೋಯ್ತೆಂದು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾದ ಆಟೋ ಚಾಲಕ
ಮೈಸೂರು, ಡಿಸೆಂಬರ್ 9: ದೂರೊಂದರ ವಿಚಾರಣೆಗಾಗಿ ಪೊಲೀಸರು ಠಾಣೆಗೆ ಕರೆದೊಯ್ದಿದ್ದಕ್ಕೆ ಅವಮಾನಿತರಾದ ಆಟೋ ಚಾಲಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಕಾಡನಕೊಪ್ಪಲು ಗ್ರಾಮದ ನಿವಾಸಿ ಕಾಂತರಾಜು ಹಾಗೂ ಇಂದ್ರಮ್ಮ ದಂಪತಿ ಪುತ್ರ ಕೆ.ರವಿ (22) ಆತ್ಮಹತ್ಯೆಗೆ ಶರಣಾದ ಯುವಕ. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಇವರು ಶನಿವಾರ ಸಂಜೆ ಬನ್ನಿಕುಪ್ಪೆ ಗ್ರಾಮದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಇವರ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದರು. ನಂತರ ಇವರ ಮಾವ ರಾತ್ರಿ 10.30ರ ವೇಳೆಯಲ್ಲಿ ಠಾಣೆಯಿಂದ ಕರೆದುಕೊಂಡು ಬಂದಿದ್ದರು.
ಪೊಲೀಸರ ವಿಚಾರಣೆಯಿಂದ ಮನನೊಂದಿದ್ದ ರವಿ ಭಾನುವಾರ ರಾತ್ರಿ ಡೆತ್ ನೋಟ್ ಬರೆದಿಟ್ಟು ಮನೆಯ ಹಿಂದಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರು ಠಾಣೆಗೆ ಕರೆದೊಯ್ದಿದ್ದರಿಂದ ಮರ್ಯಾದೆ ಹೋಯ್ತು, ಪೊಲೀಸರು ಬೈದು ಹೊಡೆದಿದ್ದಾರೆ, ನನ್ನದು ತಪ್ಪಿಲ್ಲ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬನ್ನಿಕುಪ್ಪೆ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.












Click it and Unblock the Notifications