ಮೈಸೂರು: ಕಪಿಲ ನದಿ ದಡದಲ್ಲಿ ಅದ್ಧೂರಿ ರಥೋತ್ಸವ
ಮೈಸೂರು, ಜನವರಿ 31: ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಭೀಮನಕೊಲ್ಲಿರುವ ಶ್ರೀ ಮಹದೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ರಥೋತ್ಸವ ಭಕ್ತರನ್ನು ಸೆಳೆಯಿತು.
ಈ ಭವ್ಯ ರಥೋತ್ಸವಕ್ಕೆ ಭಕ್ತರು ಕಪಿಲ ನದಿಯನ್ನು ದೋಣಿ ಮೂಲಕ ಆಗಮಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ದೇವಸ್ಥಾನದ ಮುಂಭಾಗದಲ್ಲಿದ್ದ 60 ಅಡಿ ಎತ್ತರದ ರಥವನ್ನು ಭಕ್ತರು ಎಳೆಯುವ ಮೂಲಕ, ಇನ್ನು ಕೆಲವರು ಹಣ್ಣುಜವನ ಎಸೆಯುವ ಮೂಲಕ ಹರಕೆ ತೀರಿಸಿ ಸಂತೃಪ್ತರಾದರು.
ರಥವನ್ನು ಮರ ಮತ್ತು ಬಿದಿರಿನಿಂದ ಸಿದ್ಧಪಡಿಸಿದ್ದು, ಇದಕ್ಕೆ ವಿವಿಧ ಬಣ್ಣಗಳ ಬಟ್ಟೆಗಳನ್ನು ಕಟ್ಟಿ, ಹೂವಿನಿಂದ ಅಲಂಕರಿಸಿದ ರಥಕ್ಕೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಬೆಳಿಗ್ಗೆ 11 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಮಂಗಳವಾಧ್ಯ, ವೀರಭದ್ರನ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ರಥೋತ್ಸವಕ್ಕೆ ಮೆರುಗು ತಂದವು. ಭಕ್ತರು ಹರ್ಷೋದ್ಘಾರದೊಂದಿಗೆ ರಥವನ್ನು ಎಳೆದು ಬಳಿಕ ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು.
ಈ ಸಂದರ್ಭದಲ್ಲಿ ಭಕ್ತ ಸಮೂಹ ಮಹದೇಶ್ವರಸ್ವಾಮಿಗೆ ಭಕ್ತಿ ಭಾವದಿಂದ ನಮಿಸಿದರೆ, ಹರಕೆ ಹೊತ್ತ ಭಕ್ತರು ಸಮೀಪದ ಕಪಿಲನದಿ ತೀರದಲ್ಲಿ ಸ್ನಾನ ಮಾಡಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರೆ, ಕೆಲವು ಭಕ್ತರು ಉರುಳು ಸೇವೆ ಮಾಡಿ ದೇವರಿಗೆ ನಮನ ಸಲ್ಲಿಸಿದರು.

ರಥೋತ್ಸವಕ್ಕೆ ಅಕ್ಕ ಪಕ್ಕದ ಹಳ್ಳಿಗಳಾದ ಗುಂಡತ್ತೂರು, ಹೊಸಹೊಳಲು, ಮಗ್ಗೆ, ಮಳಲಿ ಮತ್ತು ಗಂಡತ್ತೂರು ಗ್ರಾಮಗಳಿಂದ ಜನರು ನದಿ ದಾಟಿ ಬರಲು ಅನುಕೂಲವಾಗುವಂತೆ ದೇವಸ್ಥಾನ ಸಮಿತಿ ವತಿಯಿಂದ ಒಂದು ದೋಣಿ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ 4 ದೋಣಿಗಳನ್ನು ವ್ಯವಸ್ಥೆ ಮಾಡಲಾಗಿತ್ತು.












Click it and Unblock the Notifications