ಪ್ರೇಕ್ಷಕರ ಮನರಂಜಿಸಿದ ಚುಂಚನಕಟ್ಟೆ ಜಲಪಾತೋತ್ಸವ
ಮೈಸೂರು, ಸೆಪ್ಟೆಂಬರ್ 10: ಧುಮ್ಮಿಕ್ಕುವ ಜಲಧಾರೆಗೆ ನರ್ತಿಸಿದ ವಿದ್ಯುದ್ದೀಪಗಳು.. ಕತ್ತಲೆಯನ್ನು ಸೀಳಿ ಬರುತ್ತಿದ್ದ ಬೆಳಕಿನಲ್ಲಿ, ಸಂಗೀತದ ನಿನಾದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಜನತೆ.. ಕೊರೆಯುವ ಚಳಿಯಲ್ಲೂ ನಕ್ಕುನಗಿಸಿ ಬಿಸಿಯೇರಿಸಿದ ಹಾಸ್ಯ ಚಟಾಕಿಗಳು..
ಇದು ಕೆ.ಆರ್ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯಲ್ಲಿ ಶನಿವಾರ ಆರಂಭವಾದ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು.. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಪ್ರವಾಸೋದ್ಯಮ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಎರಡನೇ ಬಾರಿಗೆ ನಡೆದ ಜಲಪಾತೋತ್ಸವ ನೆರೆದ ಜನರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.

ವಿಜಯ ರಾಘವೇಂದ್ರ ಚಾಲನೆ
ಜಲಪಾತೋತ್ಸವಕ್ಕೆ ಚಿತ್ರನಟ ವಿಜಯ ರಾಘವೇಂದ್ರ ಮತ್ತು ಶಾಸಕ ಸಾ.ರಾ.ಮಹೇಶ್ ಜ್ಯೋತಿ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು. ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್, ಉಪವಿಭಾಗಾಧಿಕಾರಿ ಡಾ. ಸೌಜನ್ಯ, ಕನ್ನಡ ಸಂಸ್ಕೃತಿ ಇಲಾಖೆಯ ಚನ್ನಪ್ಪ, ಪ್ರವಾಸೋದ್ಯಮ ಇಲಾಖೆಯ ಜನಾರ್ಧನ್, ತಹಸೀಲ್ದಾರ್ ಮಹೇಶ್ಚಂದ್ರ, ಉಪತಹಸೀಲ್ದಾರ್ ಪುಟ್ಟಮಾದಯ್ಯ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಸಾಕ್ಷ್ಯ ಚಿತ್ರ ಪ್ರದರ್ಶನ
ಇದೇ ವೇಳೆ ಕೆ.ಆರ್.ನಗರ ತಾಲೂಕಿನ ಸಮಗ್ರ ಚಿತ್ರಣ ಕುರಿತು ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಜಲಪಾತೋತ್ಸವದಲ್ಲಿ ವೃತ್ತ ನಿರೀಕ್ಷಕ ಬಸವರಾಜು ನೇತೃತ್ವದಲ್ಲಿ ಭಾರೀ ಬಿಗಿ ಭದ್ರತೆ ಒದಗಿಸಲಾಗಿತ್ತು.

ಮಳೆಯಿಂದ ಕಾರ್ಯಕ್ರಮ ಬಂದ್
ಜಲಪಾತೋತ್ಸವದ ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ನಡೆಯಿತಾದರೂ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಮಳೆ ಸುರಿಯಲಾರಂಭಿಸಿತು. ಬೆಳಿಗ್ಗೆಯಿಂದ ಮಳೆಯ ನಿರೀಕ್ಷೆಯೇ ಇಲ್ಲದೆ ರಾತ್ರಿ ದಿಢೀರ್ ಭಾರೀ ಮಳೆ ಸುರಿದ ಕಾರಣದಿಂದಾಗಿ ಕಾರ್ಯಕ್ರಮ ನಡೆಸುವುದು ಅಸಾಧ್ಯವಾಯಿತಲ್ಲದೆ, ನೆರೆದಿದ್ದ ಜನ ತಮ್ಮ ಮನೆ ಹಾದಿ ಹಿಡಿದಿದ್ದರಿಂದ ಕಾರ್ಯಕ್ರಮ ರದ್ದು ಮಾಡಲಾಯಿತು.

ಭಾನುವಾರವೂ ಕಾರ್ಯಕ್ರಮ
ಭಾನುವಾರವೂ ಜಲಪಾತೋತ್ಸವ ಕಾರ್ಯಕ್ರಮ ನಡೆಯಲಿದೆ. ಚುಂಚನಕಟ್ಟೆ ಜಲಪಾತೋತ್ಸವದ ಹಿನ್ನಲೆಯಲ್ಲಿ ಶ್ರೀರಾಮ ದೇವಾಲಯ ಮತ್ತು ಕಾವೇರಿ ಜಲಪಾತಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು.












Click it and Unblock the Notifications