"ಬ್ರಾಹ್ಮಣರಿಂದ ಅರ್ಚಕ ವೃತ್ತಿಯನ್ನು ಕಿತ್ತುಕೊಳ್ಳುವ ಪ್ರಯತ್ನ''
ಮೈಸೂರು, ಮಾರ್ಚ್ 1: "ಬ್ರಾಹ್ಮಣರಿಂದ ಅರ್ಚಕ ವೃತ್ತಿಯನ್ನು ಕಿತ್ತು ಕೊಳ್ಳುವ ಪ್ರಯತ್ನ ನಡೆಯುತ್ತಿದೆ. ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರ ಭಾರದ ಬ್ಯಾಗ್ ಹೊರುವ ಹಮಾಲಿಗಳಿಗೆ ತಮ್ಮ ಜೀವನ ತಾವು ನಡೆಸಲು ಅವಕಾಶ ಕೊಡುತ್ತಿರುವ ಕಾನೂನು, ಬ್ರಾಹ್ಮಣರಿಗೆ ಅರ್ಚಕರ ವೃತ್ತಿಯಲ್ಲಿ ಮುಂದುವರಿಯಲು ಅವಕಾಶ ಕೊಡದಿರುವುದು ಬೇಸರದ ಸಂಗತಿ" ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಮೈಸೂರು ನಗರದ ಖಾಸಗಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ವಿಪ್ರ ಸಮ್ಮಿಲನವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಅರ್ಚಕ ವೃತ್ತಿಯನ್ನು ಬ್ರಾಹ್ಮಣರಿಂದ ಕಿತ್ತುಕೊಳ್ಳುವ ಸರ್ಕಾರದ ಪ್ರಯತ್ನಕ್ಕೆ ಏನು ಹೇಳಲಿ ಎಂದು ತೋಚುತ್ತಿಲ್ಲ. ಈ ಸಮಸ್ಯೆಗಳು ಪರಿಹಾರವಾಗಲು ಸಮುದಾಯ ಸಂಘಟನೆಯಾಗುವುದೇ ಪರಿಹಾರ" ಎಂದು ಅಭಿಪ್ರಾಯಪಟ್ಟರು.
ರಾಮನ ಹೆಸರಿನಲ್ಲಿ ನಮ್ಮ ಸಂಸ್ಕೃತಿ ಪುನರುತ್ಥಾನವಾಗಬೇಕು. ರಾಮ ಮಂದಿರ ನಿರ್ಮಾಣಕ್ಕೆ 1500 ಕೋಟಿ ರೂ. ಹಣ ಬೇಕು ಎಂದು ಅಂದಾಜಿಸಲಾಗಿತ್ತು. ಆದರೆ ಈಗ 2,100 ಕೋಟಿ ರೂ. ಸಂಗ್ರಹವಾಗಿದೆ. ಮಂದಿರ ನಿರ್ಮಾಣ ಮಾಡುವುದು ದೊಡ್ಡ ವಿಷಯವೇನಲ್ಲ.

ಆದರೆ ಇಷ್ಟು ಆಸ್ಥೆಯಿಂದ ನಿರ್ಮಿಸಿದ ಮಂದಿರವನ್ನು ಎಷ್ಟು ದಿವಸ ಉಳಿಸಿಕೊಳ್ಳುತ್ತೇವೆ ಎಂಬುದು ಮುಖ್ಯ. 'ನೀವು ಕಟ್ಟಿದ ಮಂದಿರ ಅದೆಷ್ಟು ಕಾಲ ನಿಮ್ಮ ಕೈಲಿ ಉಳಿಯುತ್ತದೆ? ಅದು ಮತ್ತೆ ನಮ್ಮ ಕೈಗೆ ಬಂದೇ ಬರುತ್ತದೆ' ಎಂಬ ಮಾತುಗಳು ಈಗಾಗಲೇ ಕೇಳಿ ಬರುತ್ತಿವೆ. ಇದನ್ನು ಸುಳ್ಳು ಮಾಡಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.












Click it and Unblock the Notifications