ಎಲ್ಲೆಲ್ಲೂ ಓಲಾ, ಉಬರ್, ನ್ಯಾನೊ...ಆಟೋ ಚಾಲಕರ ಸಂಕಷ್ಟ ಕೇಳೋರಾರು?
Recommended Video
ಮೈಸೂರು, ಅಕ್ಟೋಬರ್ 25: ಆಟೋ ಒಂದು ಕಾಲದಲ್ಲಿ ಡಿಗ್ನಿಟಿಯ ಸಂಕೇತ. ಇನ್ನು ಆಟೋದವರಿಗೆ ಆಟೋ ರಾಜ ಶಂಕರ್ ನಾಗ್ ರವರೇ ಮಾದರಿ. ಆದರೆ ಸದ್ಯ ಈ ಆಟೋ ಹಾಗೂ ಆಟೋ ಚಾಲಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ.
ಹೌದು, ದಿನದಿಂದ ದಿನಕ್ಕೆ ಏರುತ್ತಿರುವ ನಿರ್ವಹಣಾ ವೆಚ್ಚ, ಪೆಟ್ರೋಲ್, ಗ್ಯಾಸ್ ದರ ಏರಿಕೆಯಿಂದ ಆಟೋ ಚಾಲಕರು ಅಡಕತ್ತರಿಯಲ್ಲಿ ಸಿಲುಕಿದ್ದು, ಬದುಕಿನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಓಲಾ, ಉಬರ್, ನ್ಯಾನೊ, ರಾಪಿಡೊಗಳ ಪೈಪೋಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆಟೋ ಗಳ ವಿಮಾ ಕಂತಿನ ಮೊತ್ತವೂ ಹೆಚ್ಚಳವಾಗಿರುವುದರಿಂದ ಮತ್ತಷ್ಟು ತೊಂದರೆಗೀಡಾಗಿದ್ದಾರೆ. ಆಟೋ ಪ್ರಯಾಣ ದರಗಳು ಪರಿಷ್ಕರಣೆಯಾಗಿ ಮೂರು ವರ್ಷಗಳು ಕಳೆದಿವೆ. 3 ವರ್ಷಗಳಲ್ಲಿ ಎಲ್ಲ ವೆಚ್ಚಗಳೂ ದುಪ್ಪಟ್ಟಾಗಿವೆ. ಆದರೆ, ಪ್ರಯಾಣ ದರ ಮಾತ್ರ ಹಾಗೇ ಇದೆ. ದರ ಪರಿಷ್ಕರಿಸುವ ಬೇಡಿಕೆ ಇಡಲು ಚಾಲಕರು ಯೋಚನೆ ಮಾಡುವಂತಾಗಿದೆ.
ಬೆಂಗಳೂರಿನಲ್ಲಿ ಶುರುವಾಯ್ತು ಇ ಆಟೋರಿಕ್ಷಾ ಓಡಾಟ
ದರ ಪರಿಷ್ಕರಿಸಿದರೆ ಆಟೋ ಹತ್ತುವ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಕಡಿಮೆ ಆಗಬಹುದು ಎಂಬುದು ಅವರ ಆತಂಕ. ಸದ್ಯ, ನಗರದಲ್ಲಿ ಜನಪ್ರಿಯಗೊಳ್ಳುತ್ತಿರುವ ರ್ಯಾಪಿಡೊ, ಓಲಾ, ಉಬರ್, ನ್ಯಾನೊಗಳಿಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಕಡಿಮೆ ವೆಚ್ಚ, ಆರಾಮದಾಯಕ ಪ್ರಯಾಣಾನುಭೂತಿ ಸೇರಿದಂತೆ ಇತರ ಆಕರ್ಷಣೆಗಳು ಸಾರ್ವಜನಿಕರನ್ನು ಸೆಳೆಯುತ್ತಿವೆ. ಇದರಿಂದ ಸಾಮಾನ್ಯ ಆಟೋಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗುತ್ತಿವೆ.
ವಾಹನ ನಿರ್ವಹಣೆಗೆ 15 ಸಾವಿರ
ವಿಮೆ ಮಾರುಕಟ್ಟೆಯ ನಿಯಂತ್ರಕ 'ಐಆರ್ ಡಿಎ' ಕಳೆದ 3 ವರ್ಷಗಳಲ್ಲಿ ತ್ರಿಚಕ್ರ ವಾಹನಗಳ ವಿವಿಧ ಬಗೆಯ ವಿಮಾ ಕಂತುಗಳನ್ನು ಹಲವು ಪಟ್ಟು ಹೆಚ್ಚಿಸಿದೆ. ಮತ್ತೊಂದೆಡೆ ಪ್ರತಿ ವರ್ಷ ವಾಹನದ ನಿರ್ವಹಣಾ ವೆಚ್ಚ ಏರುತ್ತಲೇ ಇದೆ. ಕನಿಷ್ಠ ಎಂದರೂ ವರ್ಷಕ್ಕೆ 15 ಸಾವಿರವಾದರೂ ವಾಹನ ನಿರ್ವಹಣೆಗೆ ಬೇಕೇ ಬೇಕು ಎನ್ನುತ್ತಾರೆ ಆಟೋ ಚಾಲಕರು.
ಶಿವಮೊಗ್ಗ ಆಟೋ ಚಾಲಕರ ಕಿರುಕುಳ ತಪ್ಪಿಸಲು ಬಂತು 'ಆಟೋ ಮಿತ್ರ'
ವಿಮೆಯನ್ನು ಬೇಗ ನವೀಕರಿಸಿಕೊಳ್ಳಿ
ತ್ರಿಚಕ್ರ ವಾಹನಗಳ ವಿಮಾ ದರದಲ್ಲಿ ಆಗಿರುವ ಹೆಚ್ಚಳದಿಂದ ಬಹುತೇಕ ಬಡ ಆಟೋ ಚಾಲಕರು ವಿಮೆಯನ್ನು ನವೀಕರಿಸುತ್ತಿಲ್ಲ. ಇದೇ ಅವಕಾಶವನ್ನು ಬಳಸಿಕೊಂಡಿರುವ ಪೊಲೀಸರು ದ್ವಿಚಕ್ರ ವಾಹನ ಬಿಟ್ಟು ತ್ರಿಚಕ್ರ ವಾಹನಗಳತ್ತ ಲಕ್ಷ್ಯವಹಿಸಿದ್ದಾರೆ. ವಿಮೆ ನವೀಕರಣ ಆಗದ ಆಟೋ ಚಾಲಕರಿಗೆ 500 ರೂ. ದಂಡ ವಿಧಿಸಲಾಗುತ್ತಿದೆ.
ಇದಕ್ಕೆ ಮತ್ತಷ್ಟು ಹೆಚ್ಚು ಕಷ್ಟಕೊಡುವಂತೆ ಏನೋ ವಿಮಾ ಕಂತನ್ನು ನವೀಕರಿಸದ ಆಟೋಗಳ ವಿರುದ್ಧ ಕಾರ್ಯಾಚರಣೆಯನ್ನು ನಗರ ಸಂಚಾರ ವಿಭಾಗದ ಪೊಲೀಸರು ಹೆಚ್ಚಿಸಿದ್ದಾರೆ. ಒಂದು ವೇಳೆ ಎರಡನೇ ಬಾರಿಯೂ ವಿಮೆ ಇಲ್ಲದೇ ರಸ್ತೆಯಲ್ಲಿ ಆಟೋಗಳು ಸಂಚರಿಸಿದರೆ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವೂ ಇದೆ. ಹೀಗಾಗಿ, ವಿಮೆಯನ್ನು ಆದಷ್ಟು ಬೇಗ ನವೀಕರಿಸಿಕೊಳ್ಳಬೇಕು ಎಂದು ಪೊಲೀಸರು ಹೇಳುತ್ತಾರೆ.
ನಿತ್ಯ ಕಸ ಸಾಗಿಸುವ ಚಾಲಕರು, ಆಟೋ ಟಿಪ್ಪರ್ ಮಾಲೀಕರಾಗಲಿದ್ದಾರೆ!
ಸರ್ಕಾರ ನಮ್ಮ ನೋವಿಗೆ ಸ್ಪಂದಿಸಬೇಕಿದೆ
ಓಲಾ, ಉಬರ್ ನಂತಹ ಆನ್ ಲೈನ್ ಬುಕಿಂಗ್ ಜನಪ್ರಿಯಗೊಳ್ಳಲು ಬೇಕಾಬಿಟ್ಟಿ ವಸೂಲಿ ಮಾಡುವ ಆಟೋ ಚಾಲಕರೇ ಕಾರಣ ಎಂದು ಹೆಸರು ಹೇಳಲಿಚ್ಛಿಸದ ಆಟೋ ಚಾಲಕರೊಬ್ಬರು ಹೇಳುತ್ತಾರೆ. ದೋಷಪೂರಿತ ಮೀಟರ್ ಅಳವಡಿಕೆ, ಹೆಚ್ಚಿನ ದರ ವಸೂಲಿ, ಹೇಳಿದ ಕಡೆ ಬಾರದ ಚಾಲಕರು... ಹೀಗೆ ಕೆಲವು ಆಟೋ ಚಾಲಕರ ವರ್ತನೆಗಳಿಂದಾಗಿಯೇ ಜನರು ಆನ್ಲೈನ್ ಬುಕ್ಕಿಂಗ್ ನತ್ತ ವಾಲಿದ್ದಾರೆ.
ಆನ್ ಲೈನ್ ಬುಕ್ ಮಾಡಿದಾಗಲೂ ಬರುವವರು ಇದೇ ಆಟೋ ಚಾಲಕರೇ. ಅಲ್ಲಿ ಒಂದು ದರ, ಆನ್ ಲೈನ್ ಇಲ್ಲದೇ ಬಂದಾಗ ಮತ್ತೊಂದು ದರ ವಸೂಲಿ ಮಾಡುತ್ತಿದ್ದಾರೆ. ಪ್ರಾಮಾಣಿಕ ಆಟೋ ಚಾಲಕರ ಸ್ಥಿತಿ ಶೋಚನೀಯವಾಗಿದ್ದು, ಸಾಲ ಮಾಡಿ ಆಟೋ ತೆಗೆದುಕೊಂಡವರ ಗೋಳು ಕೇಳುವವರೇ ಇಲ್ಲ. ಸರ್ಕಾರ ನಮ್ಮ ನೋವಿಗೆ ಸ್ಪಂದಿಸಬೇಕಿದೆ ಎನ್ನುತ್ತಾರೆ ನೊಂದ ಆಟೋ ಚಾಲಕರು.
ಹಬ್ಬಗಳ ಆಚರಣೆಗೆ ಸೀಮಿತ
ಮೈಸೂರು ನಗರದಲ್ಲಿ ಆಟೋ ಚಾಲಕರ ಹಿತ ಕಾಯಲು 8 ಸಂಘಟನೆಗಳು ಅಸ್ತಿತ್ವದಲ್ಲಿವೆ. ಎಲ್ಲಾ ಸಂಘಟನೆಗಳೂ, ಹಬ್ಬಗಳ ಆಚರಣೆಗೆ ಸೀಮಿತವಾದಂತಿವೆ. ಆಟೋ ಚಾಲಕರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಮುಂದಾಗುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.