ಗ್ರಾಮದೇವತೆ ಹಬ್ಬದಲ್ಲಿ ತನ್ವೀರ್ ಸೇಠ್ ಆಪ್ತ, ಕಾಂಗ್ರೆಸ್ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ
ಮೈಸೂರು, ಮಾರ್ಚ್ 6: ಕಾಂಗ್ರೆಸ್ ಮುಖಂಡ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಣ್ಣಯ್ಯ ಮೇಲೆ ದುಷ್ಕರ್ಮಿಗಳು ನಿನ್ನೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಣ್ಣಯ್ಯ ಅವರು ಮಾಜಿ ಸಚಿವ ತನ್ವೀರ್ ಸೇಠ್ ಅವರ ಆಪ್ತರಾಗಿದ್ದರು.
ಜಿಲ್ಲೆಯ ಯರಗನಹಳ್ಳಿಯಲ್ಲಿ ಗ್ರಾಮದೇವತೆ ಹಬ್ಬದಲ್ಲಿ ಅಣ್ಣಯ್ಯನ ಮೇಲೆ ಮಚ್ಚು ಮತ್ತು ಲಾಂಗ್ಗಳಿಂದ ಹಲ್ಲೆ ನಡೆಸಲಾಗಿದೆ. ಅದೇ ಗ್ರಾಮದ ನಿವಾಸಿಗಳಾದ ಮಹದೇವು ಹಾಗೂ ಚಿದಂಬರ್ ಎಂಬ ಇಬ್ಬರು ಈ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ. ಅಣ್ಣಯ್ಯ ಅವರ ಮೇಲಿನ ಹಲ್ಲೆಗೆ ಹಳೇ ವೈಷಮ್ಯವೇ ಕಾರಣವೆಂದು ಹೇಳಲಾಗಿದೆ. ರಾಜಕೀಯ ವೈಷಮ್ಯದಿಂದಲೂ ಕೊಲೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ನಡೆದ ಸ್ಥಳದಲ್ಲೇ ಗ್ರಾಮಸ್ಥರು ಆರೋಪಿ ಮಹದೇವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೊರ್ವ ಆರೋಪಿ ಚಿದಂಬರ್ ಪರಾರಿಯಾಗಿದ್ದಾನೆ. ಮಾರಣಾಂತಿಕ ಹಲ್ಲೆಗೊಳಗಾಗಿರುವ ಅಣ್ಣಯ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆ ಯತ್ನ ಪ್ರಕರಣದಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಅಲ್ಲದೇ ಆಲನಹಳ್ಳಿ ಪೊಲೀಸ್ ಠಾಣೆ ಮುಂದೆ ತಡರಾತ್ರಿವರೆಗೂ ಜನರು ಜಮಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಯರಗನಹಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೊಲೆ ಯತ್ನದ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications