ನನ್ನ ಮಕ್ಕಳಿಗೆ ಹುಡುಗಿ ಹುಡುಕಿಕೊಡಿ ಎಂದ ಮಾಜಿ ಶಾಸಕ ಅಶೋಕ್ ಖೇಣಿ
ಮೈಸೂರು, ಆಗಸ್ಟ್.5: ಮೈಸೂರಿನಲ್ಲಿ ಇಂದು ಭಾನುವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅಶೋಕ್ ಖೇಣಿ ಸುತ್ತೂರು ಶ್ರೀಗಳನ್ನು ಮುಜುಗರಕ್ಕೀಡು ಮಾಡಿದ ಪ್ರಸಂಗ ನಡೆಯಿತು.
ಶ್ರೀಗಳಿಗೆ, ನನಗೆ ಮೈಸೂರಿಗೆ ಬಂದಾಗ ತವರು ಮನೆಗೆ ಬಂದ ಅನುಭವ ಉಂಟಾಗುತ್ತದೆ. ನನ್ನ ಪತ್ನಿ ಯಾವಾಗಲೂ ಸ್ವಾಮೀಜಿಗಳ ಕಣ್ಣುಗಳ ಬಗ್ಗೆ ಹೊಗಳುತ್ತಾರೆ. ಸ್ವಾಮೀಜಿಗಳ ಅರ್ಥ ಗರ್ಭಿತ ಮಾತು, ದಿವ್ಯ ದೃಷ್ಟಿ ಎಲ್ಲವೂ ಅದ್ಭುತ. ಮುಂದೆ ನನ್ನ ಮಕ್ಕಳ ಮದುವೆಯನ್ನು ಸುತ್ತೂರು ಮಠದಲ್ಲೇ ಸ್ವಾಮೀಜಿಗಳ ಸಮ್ಮುಖದಲ್ಲೇ ಮಾಡುತ್ತೇನೆ ಎಂದರು.
ನನ್ನ ಮಕ್ಕಳಿಗೆ 25 ವರ್ಷ ಆಗಿದ್ದು, ಮದುವೆ ಮಾಡಬೇಕಿದೆ. ನನ್ನಿಬ್ಬರು ಗಂಡು ಮಕ್ಕಳಿಗೆ ಅವಳಿ-ಜವಳಿ ಹೆಣ್ಣು ಮಕ್ಕಳನ್ನು ಹುಡುಕಿ ಕೊಡಿ. ಹುಡುಗಿ ಲಿಂಗಾಯತರಾಗಿರಬೇಕು, ಸುಂದರವಾಗಿರಬೇಕು. ನಮ್ಮೆಲ್ಲರ ಮೇಲೆ ನಿಮ್ಮ ಆಶೀರ್ವಾದ ಇರಬೇಕು ಎಂದು ಸ್ವಾಮೀಜಿಗಳಿಗೆ ತಮ್ಮ ಮಕ್ಕಳಿಗೆ ಹೆಣ್ಣು ಹುಡುಕುವ ಜವಾಬ್ದಾರಿ ಅಶೋಕ್ ಖೇಣಿ ನೀಡಿದರು.
ಉದ್ಯಮ, ರಾಜಕಾರಣ ಎಲ್ಲವೂ ಆಯಿತು. ನನ್ನನ್ನು ನಿಮ್ಮ ಮಠಕ್ಕೆ ಸೇರಿಸಿಕೊಳ್ಳಿ ಅಥವಾ ನನಗೊಂದು ಬೇರೆ ಮಠ ಮಾಡಿಕೊಡಿ ಎಂದು ನಾನು ಸ್ವಾಮೀಜಿಗಳ ಬಳಿ ಕೇಳಿಕೊಂಡಿದ್ದೇನೆ. ಆದ್ರೆ ಸ್ವಾಮೀಜಿಗಳು ಒಪ್ಪುತ್ತಿಲ್ಲ. ನಿಮ್ಮ ಪತ್ನಿಯಿಂದ ಅನುಮತಿ ಪಡೆದುಕೊಂಡು ಬನ್ನಿ ಎಂದು ಹೇಳ್ತಾರೆ. ನಾನೇನು ಮಾಡಲಿ ಎಂದು ಆಶೋಕ್ ಖೇಣಿ ಹೇಳಿದರು.