ಒಂಟಿ ಸಲಗಕ್ಕೆ ಬಲಿಯಾಗಿದ್ದ ಮಣಿಕಂದನ್ ಹೆಸರು ಕಳ್ಳಬೇಟೆ ತಡೆ ಶಿಬಿರಕ್ಕೆ
ಮೈಸೂರು, ಸೆಪ್ಟೆಂಬರ್ 12: ವಿಶ್ವ ವನ್ಯಜೀವಿಗಳ ದಿನವಾದ ಮಾರ್ಚ್ 3ರಂದೇ ಕಾಡಾನೆಯ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಎಸ್. ಮಣಿಕಂದನ್ ಅವರ ಹೆಸರನ್ನು ಕಳ್ಳಬೇಟೆ ತಡೆ ಶಿಬಿರವೊಂದಕ್ಕೆ ಇರಿಸಲಾಗಿದೆ.
ಸೆ. 11ರಂದು ನಾಗರಹೊಳೆ ಅರಣ್ಯದ ವೀರನಹೊಸಹಳ್ಳಿ ವನ್ಯಜೀವಿ ವಲಯದಲ್ಲಿ ನಡೆದ ಅರಣ್ಯ ಹುತಾತ್ಮರ ದಿನದಂದು ಈ ಶಿಬಿರವನ್ನು ಉದ್ಘಾಟಿಸಲಾಯಿತು.
ಮಣಿಕಂದನ್ ಅವರ ಸಾವಿನ ನಂತರ ನಾಗರಹೊಳೆ ಹುಲಿ ಯೋಜನೆಯ ನಿರ್ದೇಶಕರಾಗಿ ನೇಮಕವಾದ ಆರ್. ರವಿಶಂಕರ್ ಶಿಬಿರವನ್ನು ಉದ್ಘಾಟಿಸಿದರು.
ಕಾಡು ಮತ್ತು ಕಾಡುಪ್ರಾಣಿಗಳ ರಕ್ಷಣೆ ಹಾಗೂ ಅರಣ್ಯ ರಕ್ಷಕ ಸಿಬ್ಬಂದಿಗಳ ಸುರಕ್ಷತೆಗಾಗಿ ತುಡಿಯುತ್ತಿದ್ದ ಮಣಿಕಂದನ್ ಅವರ ಸ್ಮರಣಾರ್ಥ, ಈ ಸುಸಜ್ಜಿತ ಕಟ್ಟಡಕ್ಕೆ ಅವರ ಹೆಸರನ್ನು ಇರಿಸಲಾಗಿದೆ.

ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿನ ಸಣ್ಣ ಹಳ್ಳಿಯೊಂದರಲ್ಲಿ 1978ರಲ್ಲಿ ಜನಿಸಿದ್ದ ಮಣಿಕಂದನ್, ಟಿಎನ್ಎ ವಿಶ್ವವಿಶ್ವದ್ಯಾಲಯದಿಂದ ಪದವಿ ಪಡೆದರು. ಬಳಿಕ ಕೀಟಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಭಾರತೀಯ ಅರಣ್ಯ ಸೇವೆಯ 2001ರ ಬ್ಯಾಚ್ನ ಅಧಿಕಾರಿಯಾದ ಅವರು, 2016ರ ಜುಲೈನಿಂದ ನಾಗರಹೊಳೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ನಾಗರಹೊಳೆ ಹುಲಿ ಯೋಜನೆ ನಿರ್ದೇಶಕರಾಗಿ ಮತ್ತು ಉದ್ಯಾನದ ಸಂರಕ್ಷಕರಾಗಿ ಅವರು ನಾಗರಹೊಳೆ ಕೇಂದ್ರ ಭಾಗದಿಂದ ವೀರನಹೊಸಹಳ್ಳಿ ವನ್ಯಜೀವಿ ವಲಯಕ್ಕೆ ಸಫಾರಿಯನ್ನು ವಿಸ್ತರಿಸಿದ್ದರು. ಅಲ್ಲದೆ, ನೀರಿಲ್ಲದ ಪ್ರದೇಶಗಳಲ್ಲಿ ಪ್ರಾಣಿಗಳಿಗೆ ನೀರುಣಿಸಲು ಅನುಕೂಲವಾಗುವಂತೆ ಖಾಸಗಿ ಪ್ರಾಯೋಜಕತ್ವದ ಮೂಲಕ ಬೋರ್ವೆಲ್ಗಳನ್ನು ಕೊರೆಯಿಸಿ ಸೋಲಾರ್ ಪಂಪ್ಗಳನ್ನು ಅಳವಡಿಸಿದ್ದರು.
ಹಲವು ವರ್ಷಗಳಿಂದ ಒಣಗಿದ್ದ ಕೆರೆಗಳಿಗೆ ಮಳೆ ನೀರು ಹರಿದುಹೋಗುವಂತೆ ಕಾಲುವೆಗಳನ್ನು ನಿರ್ಮಿಸಿದ್ದರು. ಈ ಪ್ರಯತ್ನದಿಂದಾಗಿ ನಾಗರಹೊಳೆಯ ಅನೇಕ ಭಾಗಗಳಲ್ಲಿ ಬತ್ತಿಹೋಗಿದ್ದ ಅನೇಕ ಕೆರೆಗಳು ತುಂಬಿಕೊಂಡಿವೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಒಳಬರುವ ಮತ್ತು ಹೊರಹೋಗುವ ವಾಹನಗಳನ್ನು ಟ್ರ್ಯಾಕ್ ಮಾಡಲು ಗುಸ್ತ್ ಆಪ್ ಬಳಕೆಯನ್ನು ಆರಂಭಿಸಿದ್ದ ಹೆಗ್ಗಳಿಕೆ ಮಣಿಕಂದನ್ ಅವರಿಗೆ ಸಲ್ಲುತ್ತದೆ.
ಕಾಡಾನೆಗಳು ಕೃಷಿ ಭೂಮಿಯನ್ನು ದಾಟುವ ವೇಳೆ ರೈತರ ಜೀವಕ್ಕೆ ಉಂಟಾಗುವ ಅಪಾಯದ ಬಗ್ಗೆ ಮಣಿಕಂದನ್ ಕಳವಳ ಹೊಂದಿದ್ದರು. ಈ ಕಾರಣಕ್ಕಾಗಿ ಆನೆಗಳು ಬೆಳೆಹಾನಿ ಮಾಡದಂತೆ ಸುಮಾರು 40 ಕಿ.ಮೀ ರೈಲ್ವೆ ಕಂಬಿಗಳ ಅಳವಡಿಕೆಯನ್ನು ಪೂರ್ಣಗೊಳಿಸಿದ್ದರು. ಅವರ ಕಾಲಾವಧಿಯಲ್ಲಿ ಮನುಷ್ಯ-ಪ್ರಾಣಿ ಸಂಘರ್ಷ ಶೇ 90ರಷ್ಟು ಕಡಿಮೆಯಾಗಿತ್ತು.
ಫಾರೆಸ್ಟ್ ವಾಚರ್ಗಳು ಮತ್ತು ಗಾರ್ಡ್ಗಳನ್ನು ಅರಣ್ಯದ ಬರಿಗಾಲಿನ ಸೈನಿಕರು ಎಂದು ಮಣಿಕಂದನ್ ಕರೆಯುತ್ತಿದ್ದರು. ಒಂಟಿ ಸಲಗದ ದಾಲಿಗೆ ಅವರು ಬಲಿಯಾಗುವ ಒಂದು ವಾರದ ಹಿಂದಷ್ಟೇ ಅಲ್ಲಿನ ಎಲ್ಲ ವಾಚರ್ಗಳಿಗೂ ಉತ್ತಮ ಗುಣಮಟ್ಟದ ಸ್ಪೋರ್ಟ್ಸ್ ಶೂಗಳನ್ನು ಒದಗಿಸಿಕೊಟ್ಟಿದ್ದರು ಎಂದು ರವಿಶಂಕರ್ ಸ್ಮರಿಸಿಕೊಂಡಿದ್ದಾರೆ.
ನಾಗರಹೊಳೆ ಉದ್ಯಾನದ ಮೇಟಿಕುಪ್ಪೆಯಲ್ಲಿ ಎರಡು, ವೀರನಹೊಸಹಳ್ಳಿ, ಕಲ್ಲಹಳ್ಳ ಮತ್ತು ಹುಣಸೂರು ವಲಯದಲ್ಲಿ ತಲಾ ಒಂದು ಕಳ್ಳ ಬೇಟೆ ತಡೆ ಶಿಬಿರವನ್ನು ನಿರ್ಮಿಸಲಾಗುತ್ತಿದೆ.
ಕಲ್ಲಹಳ್ಳದಲ್ಲಿ ನಿರ್ಮಾಣವಾಗಿರುವ ಶಿಬಿರಕ್ಕೆ ಕಾಡುಗಳ್ಳ ವೀರಪ್ಪನ್ ದಾಳಿಗೆ ಮೃತಪಟ್ಟಿದ್ದ ಡಿಸಿಎಫ್ ಶ್ರೀನಿವಾಸ್ ಅವರ ಹೆಸರನ್ನು ಇರಿಸಲಾಗಿದೆ.












Click it and Unblock the Notifications