ಮಗುವಿಗೆ ಬರೆ ಎಳೆದ ಪ್ರಕರಣ: ಅಂಗನವಾಡಿ ಸಹಾಯಕಿ ಲೀಲಮ್ಮ ಅಮಾನತು
ಮೈಸೂರು, ಸೆಪ್ಟೆಂಬರ್.7: ಅಂಗನವಾಡಿ ಕೇಂದ್ರದ ಆವರಣದಲ್ಲಿ ಮೂತ್ರ ವಿಸರ್ಜಿಸಿದ್ದಕ್ಕೆ ಅಲ್ಲಿನ ಸಹಾಯಕಿ 3 ವರ್ಷದ ಮಗುವಿನ ಕಾಲಿಗೆ ಬರೆ ಹಾಕಿರುವ ಅಮಾನವೀಯ ಘಟನೆ ಬಳಿಕ ಅಂಗನವಾಡಿ ಸಹಾಯಕಿಯನ್ನು ಅಮಾನತುಗೊಳಿಸಲಾಗಿದೆ.
ಅಂಗನವಾಡಿ ಸಹಾಯಕಿ ಲೀಲಮ್ಮ ಚಾಕುವನ್ನು ಗ್ಯಾಸ್ ಸ್ಟೌನಲ್ಲಿ ಕೆಂಪಾಗುವವರೆಗೂ ಕಾಯಿಸಿ 3 ವರ್ಷದ ಪುಟ್ಟ ಕಂದ ಕೃಷ್ಣನಿಗೆ ಬರೆ ಎಳೆದಿದ್ದಾಳೆ. ಮೊಣಕಾಲಿನ ಬಳಿ ಸುಟ್ಟ ಗಾಯವಾಗಿ ಬೊಬ್ಬೆ ಎದ್ದಿದೆ. ಮಗು ಕೃಷ್ಣ ನೋವಿನಿಂದ ಅತ್ತು ಹೊರಳಾಡಿದರೂ ಸಹಾಯಕಿಯ ಮನ ಕರಗಿಲ್ಲ.
ಮೈಸೂರು: ಮಗು ಮೂತ್ರ ಮಾಡಿದ್ದಕ್ಕೆ ಬರೆ ಹಾಕಿದ ಅಂಗನವಾಡಿ ಸಹಾಯಕಿ
ಅಂಗನವಾಡಿ ಕಾರ್ಯಕರ್ತೆ ಮಹದೇವಮ್ಮ ಅವರು ನೀಡಿದ ದೂರಿನ ಮೇರೆಗೆ ಮಕ್ಕಳ ಮೇಲೆ ದೌರ್ಜನ್ಯ' ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಂಗನವಾಡಿ ಸಹಾಯಕಿ ಲೀಲಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಮಹದೇವಮ್ಮ ಹಾಗೂ ಮಗುವಿನ ಪೋಷಕರ ದೂರಿನ ಮೇರೆಗೆ ಸಹಾಯಕಿ ಲೀಲಮ್ಮಳನ್ನು ಅಮಾನತುಗೊಳಿಸಿದ್ದಾರೆ. ಅಂಗನವಾಡಿ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ ನೀಡುವಂತಿಲ್ಲ ಎಂಬುದನ್ನು ಇಲಾಖೆ ಮನದಟ್ಟು ಮಾಡಿಕೊಟ್ಟಿದ್ದರೂ, ಇದೇ ವಿಚಾರವಾಗಿ ಹೊಸ ಕಾಯ್ದೆಯನ್ನು ಜಾರಿಗೊಳಿಸಿದ್ದರೂ ಕೆಲವರಿಗಿನ್ನೂ ಮನವರಿಕೆ ಆದಂತಿಲ್ಲ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಂತಿದೆ.
ಇಂಥ ಅಂಗನವಾಡಿಗೆ ಯಾವ ಧೈರ್ಯದಿಂದ ನಿಮ್ಮ ಮಕ್ಕಳನ್ನು ಕಳಿಸುತ್ತೀರಿ?!
ಹೀಗಾಗಿ ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಕಠಿಣ ಶಿಕ್ಷೆಯಂತಹ ಅಮಾನವೀಯ ಘಟನೆಗಳು ಮರುಕಳಿಸುತ್ತಲೇ ಇವೆ.