Amit Shah In Varuna: ಸೋಮಣ್ಣ ಗೆಲ್ಲಿಸಿ, ದೊಡ್ಡ ವ್ಯಕ್ತಿಯಾಗಿ ಮಾಡುತ್ತೇವೆ: ಸಿಎಂ ಆಫರ್ ನೀಡಿದ್ರಾ ಅಮಿತ್ ಶಾ?
ಮೈಸೂರು, ಮೇ 2: 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಮೇ 10ರಂದು ನಡೆಯುವ ಮತದಾನಕ್ಕೂ ಮುನ್ನ ರಾಜಕೀಯ ಪಕ್ಷಗಳು ಮತ್ತು ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಇದೇ ವೇಳೆ ರಾಜ್ಯದ ಹೈ-ವೋಲ್ಟೇಜ್ ಕ್ಷೇತ್ರವಾದ ಮೈಸೂರಿನ ವರುಣಾದಲ್ಲಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರ್ಜರಿ ಪ್ರಚಾರ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಪರ ವಿ. ಸೋಮಣ್ಣ ಪರ ಮತಯಾಚಿಸಿದರು.

ವರುಣಾ ಕ್ಷೇತ್ರದ ಹೊಸಕೋಟೆಯಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, "ವಿ. ಸೋಮಣ್ಣ ಅವರನ್ನು ವರುಣಾದಲ್ಲಿ ಗೆಲ್ಲಿಸಿ ಕೊಡಿ, ನಾವು ಅವರನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇವೆ," ಎಂದು ಹೇಳುವುದರ ಮೂಲಕ ಕ್ಷೇತ್ರದ ಜನತೆಗೆ ದೊಡ್ಡ ಆಫರ್ ನೀಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿರುವ ವಿ. ಸೋಮಣ್ಣ ಪ್ರಬಲ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ವಿ. ಸೋಮಣ್ಣ ಅವರು ಕಾಂಗ್ರೆಸ್ನ ಸಿಎಂ ಆಕಾಂಕ್ಷಿ ಸಿದ್ದರಾಮಯ್ಯಗೆ ದೊಡ್ಡ ಪೈಪೋಟಿ ನೀಡಿದ್ದಾರೆ.
ಹೀಗಾಗಿ ಲಿಂಗಾಯತ ಸಿಎಂ ಕೇಳಿಬರುತ್ತಿರುವ ಈ ಸಮಯದಲ್ಲಿ ಅಮಿತ್ ಶಾ ಅವರು ದೊಡ್ಡ ವ್ಯಕ್ತಿಯಾಗಿ ಮಾಡುತ್ತೇವೆ ಎಂಬ ಈ ಹೇಳಿಕೆ ನೀಡಿರುವುದು ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ವಿ. ಸೋಮಣ್ಣ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆಯೇ ಎಂಬ ಚರ್ಚೆ ಹಟ್ಟುಹಾಕಿದೆ.

ಇದೇ ವೇಳೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, "ಪಿಎಫ್ಐ ಸಂಘಟನೆಗೆ ನಿಷೇಧ ಹೇರಬೇಕಿತ್ತೆ? ಬೇಡವೇ?, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿಎಫ್ಐ ಬ್ಯಾನ್ ವಾಪಸ್ ಪಡೆಯುತ್ತದೆ. ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ ಬಿಟ್ಟು ಏನನ್ನೂ ಮಾಡಲಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಹೆಚ್ಚು ಭ್ರಷ್ಟಾಚಾರ ಆಗಿದೆ. ಸಿದ್ದರಾಮಯ್ಯ ಲಿಂಗಾಯತ ಸಮುದಾಯವನ್ನು ಭ್ರಷ್ಟಾಚಾರಿಗಳು ಎಂದಿದ್ದಾರೆ," ಎಂದು ಟೀಕಿಸಿದರು.
"ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿದೆ. ಕಿಸಾನ್ ಸಮ್ಮಾನ್ ಯೋಜನೆ ಅಡಿ ರಾಜ್ಯಕ್ಕೆ 54 ಲಕ್ಷ ಜನರಿಗೆ ನೇರವಾಗಿ 10 ಸಾವಿರ ಕೋಟಿ ರೂ. ನೀಡಿದೆ. ಕರ್ನಾಟಕವನ್ನು ಸಮೃದ್ಧ, ಸುರಕ್ಷಿತ ರಾಜ್ಯವಾಗಿ ಮಾಡುವ ಏಕೈಕ ವ್ಯಕ್ತಿಯೆಂದರೆ ಅದು ನರೇಂದ್ರ ಮೋದಿ," ಎಂದು ತಿಳಿಸಿದರು.

"ಕಾಂಗ್ರೆಸ್ನಿಂದ ಲಿಂಗಾಯತ ಸಮುದಾಯಕ್ಕೆ ದೊಡ್ಡ ಅಪಮಾನವಾಗಿದೆ. ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಅವಮಾನ ಮಾಡಿದೆ. ಸಿದ್ದರಾಮಯ್ಯ ಅವರು ಪ್ರತಿಬಾರಿ ಕ್ಷೇತ್ರ ಹುಡುಕಾಟದಲ್ಲೇ ಇರುತ್ತಾರೆ. ಏಕೆಂದರೆ ಎಲ್ಲಿ ಹೋದರೂ ಅವರು ಅಭಿವೃದ್ಧಿ ಕೆಲಸ ಮಾಡುವುದಿಲ್ಲ. ನಿವೃತ್ತಿ ಆಗುವ ರಾಜಕಾರಣಿ ಬೇಕಾ ಅಥವಾ ನಿರಂತರವಾಗಿ ಕೆಲಸ ಮಾಡುವ ಅಭ್ಯರ್ಥಿ ಬೇಕೋ ನೀವೆ ನಿರ್ಧರಿಸಿ," ಎಂದರು.
"ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ ನಮ್ಮ ಅವಧಿಯಲ್ಲಿ ಪೂರ್ಣಗೊಂಡಿತು. ಮೈಶುಗರ್ ಆರಂಭ ಮಾಡಿದ್ದು ನಮ್ಮ ಸರ್ಕಾರ. ಮುಸ್ಲಿಂ ಮೀಸಲಾತಿ ತೆಗೆದದ್ದು ತಪ್ಪೋ ಸರಿಯೋ ನೀವೇ ಹೇಳಿ?, ಸಿದ್ದರಾಮಯ್ಯ ಗೆದ್ದರೆ ಲಿಂಗಾಯತರ ಮೀಸಲಾತಿ ಹೋಗುತ್ತದೆ. ಮುಸ್ಲಿಂ ಮೀಸಲಾತಿ ಬರುತ್ತದೆ," ಎಂದು ಹರಿಹಾಯ್ದರು.
ದಲಿತರು, ಎಸ್ಟಿ ಸಮುದಾಯದ ಮೀಸಲು ಕೂಡ ರದ್ದಾಗುತ್ತದೆ. ದೇಶವನ್ನು ಸುರಕ್ಷಿತವಾಗಿಡುವ ಕೆಲಸವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಕಾಶ್ಮೀರದ ಮೇಲೆ ಅಟ್ಯಾಕ್ ಮಾಡಿದ್ದ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಿತ್ತು ಎಂದು ಹೇಳಿದರು.
ಕರ್ನಾಟಕ ವಿಕಾಸ ಕಾಂಗ್ರೆಸ್ನಿಂದ ಸಾಧ್ಯವಿಲ್ಲ. ಹಾಗಾಗಿ ವರುಣಾ ಮತದಾರರು ಸಿದ್ದರಾಮಯ್ಯ ಅವರಿಗೆ ಏಕೆ ಮತ ಚಲಾಯಿಸುತ್ತೀರಾ?, ವಿ ಸೋಮಣ್ಣ ಪರ ಮತ ಚಲಾಯಿಸಿ ಅಭಿವೃದ್ಧಿಗೆ ನಾಂದಿ ಹಾಡಿ. ಅತ್ಯಧಿಕ ಬಹುಮತದಿಂದ ವಿ. ಸೋಮಣ್ಣ ಅವರನ್ನು ಗೆಲ್ಲಿಸಿ ಎಂದು ಅಮಿತ್ ಶಾ ಕರೆ ನೀಡಿದರು.
ಇದಕ್ಕೂ ಮುನ್ನ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, "ನಮ್ಮ ಪ್ರಣಾಳಿಕೆಯಲ್ಲಿ ವಿಧವೆಯರಿಗೆ ಪಿಂಚಣಿ ಹೆಚ್ಚಳ ಮಾಡಲಾಗಿದೆ. ವರ್ಷಕ್ಕೆ ಮೂರು ಸಿಲಿಂಡರ್ ನೀಡಲಾಗುವುದು. ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಿಜೆಪಿ ಯೋಚಿಸುತ್ತಿದೆ. ವಿ. ಸೋಮಣ್ಣ ಅವರು 25 ಸಾವಿರ ಅಂತರದಿಂದ ಗೆದ್ದೆ ಗೆಲ್ಲುತ್ತಾರೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಗೃಹ ಸಚಿವ ಅಮಿತ್ ಶಾ ಅವರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಹರ್ಷವರ್ಧನ್ ಸಾಥ್ ನೀಡಿದರು. ಸುಮಾರು 30 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications