ಮೈಸೂರು : ಬಿಜೆಪಿ ಜನ ಕಲ್ಯಾಣ ಸಮಾವೇಶ ಮುಂದೂಡಿಕೆ
ಮೈಸೂರು, ಜೂ. 08 : ಮೈಸೂರಿನಲ್ಲಿ ಜೂನ್ 10ರಂದು ನಡೆಯಬೇಕಾಗಿದ್ದ ಬಿಜೆಪಿ 'ಜನ ಕಲ್ಯಾಣ ಪರ್ವ' ಸಮಾವೇಶವನ್ನು ಮುಂದೂಡಲಾಗಿದೆ. ಆದರೆ, ಗದಗದಲ್ಲಿ ನಡೆಯಬೇಕಿದ್ದ ಸಮಾವೇಶ ಜೂನ್ 23ರಂದು ನಿಗದಿಯಂತೆ ನಡೆಯಲಿದೆ.
ಮೈಸೂರಿನಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಜೂ.10 ಮತ್ತು 23ರಂದು ಕರ್ನಾಟಕ ಬಿಜೆಪಿ ಎರಡು ಜನಕಲ್ಯಾಣ ಪರ್ವ ಸಮಾವೇಶಗಳನ್ನು ರಾಜ್ಯದಲ್ಲಿ ಆಯೋಜಿಸಿತ್ತು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜೂ.10ರ ಬುಧವಾರ ಬಿಜೆಪಿ ಸಮಾವೇಶ ನಡೆಯಬೇಕಾಗಿತ್ತು. ಈ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಾಲ್ಗೊಂಡು ಭಾಷಣ ಮಾಡಬೇಕಿತ್ತು. [ಮೈಸೂರಲ್ಲಿ ಅಮಿತ್ ಶಾ ಸಮಾವೇಶ]
ಆದರೆ, ಅಂದು ದೆಹಲಿಯಲ್ಲಿ ಪ್ರಮುಖ ಸಭೆಯೊಂದು ನಡೆಯಲಿದ್ದು, ಅದರಲ್ಲಿ ಅಮಿತ್ ಶಾ ಅವರು ಪಾಲ್ಗೊಳ್ಳಬೇಕಾಗಿರುವುದರಿಂದ ಮೈಸೂರಿಗೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. [ಬಿಜೆಪಿಯ ಎರಡು ಸಮಾವೇಶ]
ನಿಗದಿಯಂತೆ ಸಮಾವೇಶ : ಜೂ.23ರಂದು ಗದಗ ಜಿಲ್ಲೆಯ ನರಗುಂದದಲ್ಲಿ ನಡೆಯಬೇಕಿದ್ದ ಸಮಾವೇಶ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಕರ್ನಾಟಕ ಬಿಜೆಪಿ 'ಜನ ಕಲ್ಯಾಣ ಪರ್ವ ಸಮಾವೇಶ' ಸೇರಿದಂತೆ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.












Click it and Unblock the Notifications