ಮೈಸೂರಿನಲ್ಲಿ 'ಅಂಬಾರಿ' ಸಂಚಾರಕ್ಕೆ ಕಾಲ ಕೂಡಿ ಬಂತು!
ಮೈಸೂರು, ಸೆಪ್ಟೆಂಬರ್ 01; ಪ್ರವಾಸೋದ್ಯಮ ಇಲಾಖೆಯ ಡಬಲ್ ಡೆಕ್ಕರ್ 'ಅಂಬಾರಿ' ಬಸ್ನಲ್ಲಿ ಕುಳಿತು ಮೈಸೂರು ನಗರದ ಪ್ರವಾಸಿ ತಾಣಗಳಿಗೊಂದು ಸುತ್ತು ಹೊಡೆಯುವ ಕಾಲ ಕೂಡಿ ಬಂದಿದೆ. ಇದೇ ಸೆಪ್ಟಂಬರ್ 4ರಂದು ಬಸ್ ಸಂಚಾರವನ್ನು ಆರಂಭಿಸಲಿದೆ.
ಈ ಹಿಂದೆ ದಸರಾ ಸಮಯದಲ್ಲಿ ದೀಪಾಲಂಕಾರ ನೋಡಲೆಂದು 'ಅಂಬಾರಿ' ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ದೀಪಾಲಂಕಾರದ ಸುಂದರ ದೃಶ್ಯಗಳನ್ನು ತೋರಿಸಲೆಂದು ಮೈಸೂರಿಗೆ ಬಂದಿಳಿದ ಅಂಬಾರಿ ಬಸ್ಗೆ ನಗರದಲ್ಲಿ ಸಂಚರಿಸಲು ದೀಪಾಲಂಕಾರವೇ ಅಡ್ಡಿಯಾಗಿ ನಿಲ್ಲುವಂತಾಗಿದ್ದು ಹಳೆಯ ಕಥೆ.
ಆ ನಂತರವೂ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಮತ್ತು ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತೇಜಿಸಲು ಅಂಬಾರಿ ಸಂಚಾರವನ್ನು ನಗರದಲ್ಲಿ ಖಾಯಂ ಮಾಡಬೇಕೆಂಬ ಹಂಬಲ ಹೊಂದಲಾಗಿತ್ತು. ಆದರೆ ಕೊರೊನಾ ಮಹಾಮಾರಿಯಿಂದಾಗಿ ಯಾವುದೂ ಅಂದುಕೊಂಡಂತೆ ಆಗದೆ ಅಂಬಾರಿ ಬಸ್ ಧೂಳು ಹಿಡಿದು ನಿಲ್ಲುವಂತಾಗಿತ್ತು.
ಆ ನಂತರವೂ ಅಂಬಾರಿ ಸಂಚಾರ ಆರಂಭಿಸುವ ಕಸರತ್ತು ನಡೆಸಲಾಗಿತ್ತಾದರೂ ಕೆಲವೊಂದು ಕಾರಣಗಳಿಂದ ಮುಂದೂಡುತ್ತಲೇ ಬರಲಾಗಿತ್ತು. ಈಗ ಪ್ರವಾಸೋದ್ಯಮ ಚಟುವಟಿಕೆ ಮತ್ತೆ ಆರಂಭವಾಗಿದ್ದು ಅಂಬಾರಿ ಸಹ ರಸ್ತೆಗೆ ಇಳಿಯುತ್ತಿದೆ.

ಮೈಸೂರು ರಸ್ತೆಗೆ ಇಳಿಯಲಿದೆ ಅಂಬಾರಿ ಬಸ್
ಆಗಸ್ಟ್ ತಿಂಗಳಿನಲ್ಲಿಯೇ ಅಂಬಾರಿ ಬಸ್ ಸಂಚಾರ ಆರಂಭಿಸುವ ಕುರಿತಂತೆ ಮಾಹಿತಿಗಳು ಬಂದಿದ್ದವು. ಬಳಿಕ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೊಮ್ಮೆ ಸಂಚಾರ ಆರಂಭಿಸುವ ಕುರಿತಂತೆ ಅಧಿಕೃತ ಮಾಹಿತಿಗಳು ಬಂದಿವೆ.
ಹಾಗೆ ನೋಡಿದರೆ ಡಬಲ್ ಡೆಕ್ಕರ್ ಅಂಬಾರಿ ಬಸ್ ಸುಮಾರು ಇಪ್ಪತ್ತೈದು ಅಡಿಗಳಷ್ಟು ಎತ್ತರ ಇರುವ ಕಾರಣ ಸಂಚಾರಕ್ಕೆ ಅಡಚಣೆಯಾಗದಂತೆ ಈ ಹಿಂದೆಯೇ ಬಸ್ ಸಂಚರಿಸುವ ಮಾರ್ಗದಲ್ಲಿದ್ದ ಬಾಗಿಕೊಂಡಿದ್ದ ಮರಗಳ ಕೊಂಬೆಯನ್ನು ಕತ್ತರಿಸಿ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಬಸ್ ರಸ್ತೆಗೆ ಇಳಿದಿರಲಿಲ್ಲ.

ಬಸ್ ವೇಳಾಪಟ್ಟಿ, ಮಾರ್ಗ
ಇದೀಗ ಸೆಪ್ಟೆಂಬರ್ 4ರಿಂದ ಬೆಳಗ್ಗೆ 9.30 ರಿಂದ ಸಂಜೆ 5.30ರವರೆಗೆ ನಗರದಲ್ಲಿ ಅಂಬಾರಿ ಬಸ್ ಸಂಚರಿಸಲಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ ತಿಳಿಸಿದ್ದಾರೆ. ಈ ಸಂಬಂಧ ಬಸ್ ಸಂಚಾರದ ಮಾರ್ಗಗಳ ವಿವರಗಳನ್ನು ಕೂಡ ನೀಡಿದ್ದಾರೆ.
ಡಬಲ್ ಡೆಕ್ಕರ್ ಅಂಬಾರಿ ಬಸ್ ನಗರದ ಪ್ರವಾಸೋದ್ಯಮ ಇಲಾಖೆಯ ಆವರಣ (ಹೋಟೆಲ್ ಮಯೂರ ಹೊಯ್ಸಳ) ದಿಂದ ಹೊರಡಲಿದ್ದು, ನಗರದ ಜಿಲ್ಲಾಧಿಕಾರಿ ಕಚೇರಿ, ಕುಕ್ಕರಹಳ್ಳಿಕೆರೆ, ಮೈಸೂರು ವಿಶ್ವವಿದ್ಯಾನಿಲಯ, ರಾಮಸ್ವಾಮಿ ಸರ್ಕಲ್, ಸಂಸ್ಕೃತಪಾಠಶಾಲೆ, ಕೆ.ಆರ್.ಸರ್ಕಲ್, ದೊಡ್ಡಗಡಿಯಾರ, ಅರಮನೆ ದಕ್ಷಿಣದ್ವಾರ, ಹಾರ್ಡಿಂಗ್ ಸರ್ಕಲ್, ಮೃಗಾಲಯ, ಕಾರಂಜಿಕೆರೆ, ಗೌರ್ಮೆಂಟ್ ಗೆಸ್ಟ್ ಹೌಸ್, ಸಂತ ಫಿಲೋಮಿನಾ ಚರ್ಚ್, ಬನ್ನಿಮಂಟಪ, ಆಯುರ್ವೇದಿಕ್ ಆಸ್ಪತ್ರೆ ಸರ್ಕಲ್, ರೈಲ್ವೆ ನಿಲ್ದಾಣದ ಮೂಲಕ ಹೊರಟ ಸ್ಥಳ ಹೋಟೆಲ್ ಮಯೂರ ಹೊಯ್ಸಳವನ್ನು ತಲುಪಲಿದೆ.

ಎಷ್ಟು ಆಸನಗಳನ್ನು ಬಸ್ ಹೊಂದಿದೆ
ಇನ್ನು ಅಂಬಾರಿ ಬಸ್ಸಿನ ಬಗ್ಗೆ ಹೇಳುವುದಾದರೆ ಇದನ್ನು ಬೆಂಗಳೂರಿನ ಕೆಎಂಎಸ್ ಬಸ್ ಕವಚ ನಿರ್ಮಾಣ ಸಂಸ್ಥೆ ತಯಾರು ಮಾಡಿದ್ದು, ಮೇಲೆ ಮತ್ತು ಕೆಳಗೆ ಸೇರಿ 40 ಆಸನಗಳಿವೆ. ಸುಮಾರು ಇಪ್ಪತೈದು ಅಡಿಯಷ್ಟು ಎತ್ತರವಿದೆ. ಇನ್ನು ಬಸ್ ಸಂಚರಿಸುವ ವೇಳೆ ಆಯಾಯ ಸ್ಥಳಗಳು ಬಂದಾಗ ಅದರ ಪರಿಚಯ ಬಸ್ನಲ್ಲಿ ಸಂಚರಿಸುವ ಪ್ರವಾಸಿಗರಿಗೆ ಮಾಡಿಕೊಡಲಾಗುತ್ತದೆ. ಮೇಲಿನ ಮಹಡಿ ತೆರೆದಿದ್ದರೆ ಕೆಳಗಿನ ಮಹಡಿ ಹವಾನಿಯಂತ್ರಿತವಾಗಿದ್ದು, ಸಿಸಿಟಿವಿ ಸೇರಿದಂತೆ ಎಲ್ಲ ಸೌಲಭ್ಯಗಳು ಇದರಲ್ಲಿದೆ. ಡಬಲ್ ಡೆಕ್ಕರ್ ಅಂಬಾರಿ ಸಂಚರಿಸಲು ಬಯಸುವವರು ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ದೂರವಾಣಿಸಂಖ್ಯೆ (0821-2423652) ಕರೆ ಮಾಡಿ ಪಡೆಯಬಹುದಾಗಿದೆ.

ಬಜೆಟ್ನಲ್ಲಿ 5 ಕೋಟಿ ರೂ. ಅನುದಾನ
ಮೈಸೂರು ನಗರದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಹಲವು ಯೋಜನೆಗಳನ್ನು ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿತ್ತು. ಲಂಡನ್ ಬಿಗ್ ಬಸ್ ಮಾದರಿಯಲ್ಲಿ 6 ಡಬಲ್ ಡೆಕ್ಕರ್ ತೆರೆದ ಬಸ್ ಸೇವೆಯನ್ನು ನಗರದಲ್ಲಿ ಆರಂಭಿಸಲು ತೀರ್ಮಾನಿಸಿತ್ತು. ಇದಕ್ಕಾಗಿ ಬಜೆಟ್ನಲ್ಲಿ 5 ಕೋಟಿ ರೂ. ಅನುದಾನ ಘೋಷಣೆ ಮಾಡಿತ್ತು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ ಅಂಬಾರಿ ಬಸ ಸೇವೆಯನ್ನು ಆರಂಭಿಸಲಾಗುತ್ತಿದೆ.












Click it and Unblock the Notifications