ಮೈಸೂರು: ಮಂಗಳವಾರದಿಂದ ರಸ್ತೆಗಿಳಿಯಲಿದೆ ಅಂಬಾರಿ ಬಸ್
ಮೈಸೂರು, ಮಾರ್ಚ್ 01: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಆಕರ್ಷಣೆ ಸೇರ್ಪಡೆಗೊಳ್ಳಲಿದೆ. ಪ್ರವಾಸಿಗರನ್ನು ಸೆಳೆಯಲು 'ಅಂಬಾರಿ' ಹೆಸರಿನ ಡಬಲ್ ಡೆಕ್ಕರ್ ಬಸ್ಗಳು ಮೈಸೂರಿನ ರಸ್ತೆಗಿಳಿಯಲು ತಯಾರಾಗಿವೆ.
ಮೈಸೂರಿನ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಕಳೆದ ಬಜೆಟ್ನಲ್ಲಿ ಆದ್ಯತೆ ನೀಡಿದ್ದ ಕರ್ನಾಟಕ ಸರ್ಕಾರ ಲಂಡನ್ ಬಿಗ್ ಬಸ್ ಮಾದರಿಯಲ್ಲಿ 6 ಡಬಲ್ ಡೆಕ್ಕರ್ ತೆರೆದ ಬಸ್ ಸೇವೆ ಆರಂಭಿಸಲು ತೀರ್ಮಾನಿಸಿತ್ತು. ಇದಕ್ಕಾಗಿ 5 ಕೋಟಿ ರೂ. ಅನುದಾನವನ್ನು ಸಹ ಬಿಡುಗಡೆ ಮಾಡಿತ್ತು.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ ಅಂಬಾರಿ ಬಸ್ ಸೇವೆ ಆರಂಭಿಸಲು ಮುಂದಾಗಿತ್ತು. ನುರಿತ ಸಂಸ್ಥೆಗಳಿಂದ ಡಬಲ್ ಡೆಕ್ಕರ್ ಬಸ್ಗಳನ್ನು ವಿನ್ಯಾಸಗೊಳಿಸಿದ್ದು, ಈ ಬಸ್ಗಳು ಮಂಗಳವಾರದಿಂದ ರಸ್ತೆಗಳಿಯಲಿವೆ.

ಮೊದಲ ಹಂತದಲ್ಲಿ ಬಸ್ಗಳು ಸಂಚಾರ ನಡೆಸುವ ಮೈಸೂರು ನಗರದ ಸೂಚಿತ ಮಾರ್ಗಗಳಲ್ಲಿರುವ ಅಡೆತಡೆಗಳನ್ನು ತೆರವುಗೊಳಿಸಲಾಗಿದೆ. ಮಂಗಳವಾರ ಸಂಜೆ 5.30ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೇಶ್ವರ್ ಬಸ್ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.
ಈಗಾಗಲೇ ಮೈಸೂರು ನಗರದಲ್ಲಿ ಬಸ್ಗಳ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ. ಬಸ್ ಸಾಗುವ ಮಾರ್ಗದಲ್ಲಿ ಇದ್ದ ವಿದ್ಯುತ್ ತಂತಿ, ಮರದ ಕೊಂಬೆಗಳನ್ನು ತೆಗೆಯಲಾಗಿದೆ. ತೆರೆದ ಬಸ್ನಲ್ಲಿ ಕುಳಿತು ಜನರು ಮೈಸೂರು ನಗರದ ಅಂದವನ್ನು ಸವಿಯಬಹುದಾಗಿದೆ.

ಬಸ್ ಸಂಚಾರದ ಮಾರ್ಗ: ಹೋಟೆಲ್ ಮಯೂರ ಹೊಯ್ಸಳ-ಜಿಲ್ಲಾಧಿಕಾರಿಗಳ ಕಚೇರಿ-ಕ್ರಾಫರ್ಡ್ ಹಾಲ್- ಕುಕ್ಕರಹಳ್ಳಿಕೆರೆ-ಮೈಸೂರು ವಿಶ್ವವಿದ್ಯಾನಿಲಯ-ಜಾನಪದ ವಸ್ತುಪ್ರದರ್ಶನ-ರಾಮಸ್ವಾಮಿ ವೃತ್ತ-ಅರಮನೆ ಕರಿಕಲ್ಲು ತೊಟ್ಟಿ-ಅರಮನೆ (ದಕ್ಷಿಣ ದ್ವಾರ) ಜೈಮಾರ್ತಾಂಡ-ಮೃಗಾಲಯ-ಕಾರಂಜಿ ಲೇಕ್-ಸಂಗೊಳ್ಳಿ ರಾಯಣ್ಣ ವೃತ್ತ-ಸ್ನೋ ಸಿಟಿ -ಚಾಮುಂಡಿ ವಿಹಾರ್ ಸ್ಟೇಡಿಯಂ-ಸೆಂಟ್ ಫಿಲೋಮಿನ ಚರ್ಚ್-ಬನ್ನಿಮಂಟಪ-ರೈಲ್ವೆ ಸ್ಟೇಷನ್ ಹೋಟೆಲ್ ಮಯೂರ ಹೊಯ್ಸಳ.
ಈ ಮಾರ್ಗದಲ್ಲಿ ಪ್ರತಿ ಅರ್ಧ ಗಂಟೆಗೊಂದರಂತೆ ಅಂಬಾರಿ ಬಸ್ ಕಾರ್ಯಾಚರಣೆ ನಡೆಸಲಿದ್ದು, ಅಂಬಾರಿ ಬಸ್ಸಿನಲ್ಲಿ ಮೈಸೂರು ನಗರ ವೀಕ್ಷಣೆಗೆ ಪ್ರತಿ ಪ್ರವಾಸಿಗರಿಗೆ 250 ರೂ. ದರ ನಿಗದಿಪಡಿಸಲಾಗಿದೆ.












Click it and Unblock the Notifications