ಅಂಬಿಗೆ ನಾಟಿ ಕೋಳಿ ಸಾರಷ್ಟೇ ಅಲ್ಲ, ಮಾವಿನ ಹಣ್ಣೆಂದರೂ ಬಲು ಇಷ್ಟ
ಮೈಸೂರು, ನವೆಂಬರ್.26: ಅಂಬರೀಶ್ ಅವರಿಗೆ ರಾಗಿಮುದ್ದೆ, ನಾಟಿ ಕೋಳಿ ಸಾರು ತುಂಬಾ ಪ್ರಿಯವಾದ ತಿನಿಸಾಗಿತ್ತು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಅವರು ಹಣ್ಣುಗಳಲ್ಲಿ ಮಾವಿನ ಹಣ್ಣನ್ನು ಹೆಚ್ಚು ಇಷ್ಟಪಡುತ್ತಿದ್ದರು ಎಂಬುದಾಗಿ ಅವರ ಅಭಿಮಾನಿಗಳು ಹೇಳುತ್ತಾರೆ.
In Pics : 'ದಿಗ್ಗಜ'ನನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿರುವ ಚಿತ್ರರಂಗ
ಹಾಗೆನೋಡಿದರೆ ಅಂಬರೀಶ್ ಸಾಮಾನ್ಯವಾಗಿ ಎಲ್ಲ ಜಿಲ್ಲೆಯ ಜನರೊಂದಿಗೆ ಒಡನಾಟವಿಟ್ಟುಕೊಂಡಿದ್ದರು. ಅವರು ಎಲ್ಲ ರೀತಿಯ ಜನರೊಂದಿಗೆ ಬೆರೆಯುತ್ತಿದ್ದರು. ಅಂಬರೀಶ್ ಬರುತ್ತಾರೆ ಎಂದರೆ ಅವರಿಗೆ ಅಡುಗೆ ಮಾಡಿ ಬಡಿಸಲು ತುಂಬಾ ಜನ ಮುಂದೆ ಬರುತ್ತಿದ್ದರು.
ಶೂಟಿಂಗ್ ಸ್ಥಳದಲ್ಲಿದ್ದಾಗಲೂ ಅವರಿಗೆ ಅಭಿಮಾನಿಗಳು ತಮ್ಮ ಮನೆಗಳಿಂದ ಅಡುಗೆ ತಯಾರಿಸಿ ತಂದುಕೊಡುತ್ತಿದ್ದರು ಎಂಬುದನ್ನು ಎಲ್ಲರೂ ಸ್ಮರಿಸುತ್ತಾರೆ. ಅದರಂತೆ ಮಾವಿನ ಹಣ್ಣನ್ನು ಅವರು ಇಷ್ಟಪಡುತ್ತಿದ್ದರು ಎಂಬ ವಿಚಾರವನ್ನು ಕೂಡ ರಾಮನಗರದ ಜಿಲ್ಲೆಯ ಗ್ರಾಪಂ ಸದಸ್ಯ ಕೂನಮುದ್ದನಹಳ್ಳಿ ರುದ್ರೇಶ್ ಅವರು ಸ್ಮರಿಸಿಕೊಂಡಿದ್ದಾರೆ.

ಅಂಬರೀಶ್ ಅವರು ಚುನಾವಣಾ ಪ್ರಚಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಅವರಿಗೆ ಮಾವಿನ ಹಣ್ಣು ಇಷ್ಟ ಎಂಬುದು ಅಭಿಮಾನಿಗಳಿಗೆ ಗೊತ್ತಾಗಿತ್ತಂತೆ. ಹೀಗಾಗಿ ಅವರು ಅಂಬರೀಶ್ ಅವರು ಇಷ್ಟಪಡುತ್ತಿದ್ದ ಕೂಟಗಲ್ ಭಾಗದ ನೈಸರ್ಗಿಕವಾದ ಮಾವಿನ ಹಣ್ಣುಗಳನ್ನು ತಂದು ನೀಡುತ್ತಿದ್ದರಂತೆ.
ಕೂನಮುದ್ದನಹಳ್ಳಿ ಗ್ರಾಮದಲ್ಲಿನ ಮಹದೇಶ್ವರಸ್ವಾಮಿ ದೇವಾಲಯದ ಆರಂಭೋತ್ಸವ ಕಾರ್ಯಕ್ರಮದಲ್ಲಿಯೂ ಅವರು ಪಾಲ್ಗೊಂಡು ಜನರ ಪ್ರೀತಿಗೆ ಪಾತ್ರರಾಗಿದ್ದರು.
ಕೇಂದ್ರ ಹಾಗೂ ರಾಜ್ಯ ಸರಕಾರದಲ್ಲಿ ಸಚಿವರಾಗಿದ್ದಾಗಲೂ ಅಂಬರೀಶ್ ಅವರು ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರ ಅಭಿನಂದನೆಯನ್ನು ಸ್ವೀಕರಿಸಿದ್ದರಂತೆ. ಇದೆಲ್ಲವನ್ನು ಗಮನಿಸಿದರೆ ಅಂಬರೀಶ್ ಅವರು ಹಳ್ಳಿಗಳ ಜನರ ಪ್ರೀತಿಗೆ ಸ್ಪಂದಿಸುತ್ತಿದ್ದರು ಎಂಬುದು ಗೊತ್ತಾಗುತ್ತದೆ.












Click it and Unblock the Notifications