ಪೊಲೀಸರಿಗೆ ಶಿಫ್ಟ್ ಆಧಾರದಲ್ಲಿ ಕೆಲಸ ಹಂಚಿಕೆ; ಬಸವರಾಜ ಬೊಮ್ಮಾಯಿ
ಮೈಸೂರು, ಮೇ 22: ಪೊಲೀಸ್ ಸಿಬ್ಬಂದಿಗೆ ಶಿಫ್ಟ್ ಆಧಾರದಲ್ಲಿ ಕೆಲಸ ಹಂಚಿಕೆ ಮಾಡಬೇಕೆಂದು ಆದೇಶಿಸಿರುವುದಾಗಿ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
Recommended Video
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ಪೊಲೀಸರಿಗೆ ಕೋವಿಡ್ ಸೋಂಕು ತಗುಲಿರುವ ಘಟನೆ ಬಹಳ ಕಡಿಮೆ ಇದೆ. ಆದರೂ ನಾವು ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದ್ದೇವೆ. ಕೆ.ಆರ್.ಪೇಟೆಯಲ್ಲಿ ಎರಡು ಪೊಲೀಸ್ ಠಾಣೆ ಸೀಲ್ ಡೌನ್ ಮಾಡಿದ್ದೇವೆ. ಬೆಂಗಳೂರಿನಲ್ಲಿ ಅವಶ್ಯಕತೆ ಇದ್ದರೆ ಫ್ರೇಜರ್ ಟೌನ್ ಸೀಲ್ ಡೌನ್ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.

"ಅಂತರ ಜಿಲ್ಲಾ ಪ್ರವಾಸದ ಮೇಲೂ ನಿಯಂತ್ರಣ ಬೇಕು"
ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಒಳ್ಳೆಯ ಕೆಲಸ ಮಾಡಿದೆ. ಆಶಾಕಾರ್ಯಕರ್ತರು, ಪೊಲೀಸರು, ವೈದ್ಯರು, ಅಧಿಕಾರಿಗಳು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಶ್ಲಾಘಿಸಿದರು. ಅಂತರ ರಾಜ್ಯ ಚಲನವಲನಗಳನ್ನು ನಿಯಂತ್ರಿಸುತ್ತಿದ್ದೇವೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಅಂತರ ಜಿಲ್ಲಾ ಪ್ರವಾಸದ ಮೇಲೂ ನಿಯಂತ್ರಣ ಬೇಕು. ಮುಂಬೈನಿಂದ ಬಂದ ವಲಸಿಗರಿಂದ ಕೊರೊನಾ ಕೇಸ್ಗಳು ಹೆಚ್ಚಾಗುತ್ತಿವೆ. ಆದ್ದರಿಂದ ಚೆಕ್ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ಲಾಕ್ಡೌನ್ 4 ಮುಗಿದ ಮೇಲೆ ಏನು ಮಾಡಬೇಕು ಎಂಬುದನ್ನು ಚಿಂತನೆ ಮಾಡಬೇಕಿದೆ. ಈ ಬಗ್ಗೆ ಇನ್ನಷ್ಟೇ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

"ಮುಂಬೈ ಪ್ರಕರಣಗಳನ್ನೂ ನಿರ್ವಹಿಸಲೇಬೇಕಿದೆ"
ಜುಬಿಲಿಯೆಂಟ್ ಕಾರ್ಖಾನೆ ಪುನರಾರಂಭದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಠಿಣ ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಖಾನೆ ತೆರೆಯಲು ಅನುಮತಿ ನೀಡಿದ್ದೇವೆ. ಜುಬಿಲಿಯೆಂಟ್ ಫಾರ್ಮಾಸಿಟಿಕಲ್ ಕಂಪನಿ. ಬಾಗಿಲು ಹಾಕಲು ಸಾಧ್ಯವಿಲ್ಲ. ಕಾರ್ಖಾನೆ ತೆರೆಯಲು ಅನುಮತಿ ಕೇಳಿದ್ದರು. ಲಾಕ್ಡೌನ್ ಅವಧಿಯಲ್ಲಿ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ತೆರೆಯುವ ಸಂದರ್ಭದಲ್ಲಿ ಹೇಗಿದೆ, ಅಲ್ಲಿನ ಪರಿಸ್ಥಿತಿ ಏನು ಎಂಬುದನ್ನು ನೋಡಬೇಕಿದೆ. ಅದನ್ನು ನೋಡಿಕೊಂಡು ಕಾರ್ಖಾನೆ ತೆರೆಯಲಾಗುವುದು ಎಂದರು. ಮೈಸೂರು ಜಿಲ್ಲಾಡಳಿತ ಜುಬಿಲಿಯೆಂಟ್, ದೆಹಲಿ ಮೂಲದಿಂದ ಬಂದಿದ್ದ ಕೇಸ್ ಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದೆ. ಮುಂಬೈ ಮೂಲದ ಕೇಸ್ಗಳ ಸವಾಲನ್ನೂ ಯಶಸ್ವಿಯಾಗಿ ನಿರ್ವಹಿಸಲೇಬೇಕಿದೆ. ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು ಎಂದರು.

ಪೊಲೀಸರಿಗೆ ಗೃಹ ಸಚಿವರ ಸಲಹೆ
ಕೊರೊನಾ ಸೋಂಕಿತರ ಜತೆ ಕೆಲಸ ಮಾಡುವ ಪೊಲೀಸರು ಎಚ್ಚರಿಕೆಯಿಂದ ಇರಬೇಕು. ಲಾಕ್ ಡೌನ್ ಯಶಸ್ಸು ಮತ್ತು ಮತ್ತು ಕೊರೊನಾ ನಿಯಂತ್ರಣದಲ್ಲಿ ಪೊಲೀಸರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಆದ್ದರಿಂದಲೇ ಹಲವು ಕಡೆ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪೇದೆಗೆ ಕೊರೊನಾ ಬಂದಿತ್ತು.
ಪೊಲೀಸ್ ಠಾಣೆಯಲ್ಲಿದ್ದ ಕೈದಿಗೆ ಕೊರೊನಾ ಬಂದಿತ್ತು. ಶಿವಮೊಗ್ಗ, ಬೆಂಗಳೂರು ನಂತರ ಈಗ ಕೆ.ಆರ್. ಪೇಟೆಯಲ್ಲಿ ಪೇದೆಗೆ ಕೊರೊನಾ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದ ಪೊಲೀಸ್ ಸಿಬ್ಬಂದಿಗೆ ಟೆಸ್ಟ್ ಮಾಡಿಸುತ್ತಿದ್ದೇವೆ. ಡ್ಯೂಟಿ ಹಾಕುವಾಗ ಒತ್ತಡ ಆಗದಂತೆ ಎಚ್ಚರ ವಹಿಸುವಂತೆ ಮೇಲಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಪೊಲೀಸ್ ಸಿಬ್ಬಂದಿಗೆ ಈಗಾಗಲೇ ಇನ್ಶೂರೆನ್ಸ್ ಪಾಲಿಸಿ ಜಾರಿಗೊಳಿಸಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಪ್ರಶ್ನಿಸಿದ ಸಚಿವರು
ಸೋನಿಯಾಗಾಂಧಿ ವಿರುದ್ಧ ದೂರು ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಗೆ ನನ್ನ ಪ್ರಶ್ನೆ, ಕಳೆದ 15 ದಿನಗಳ ಹಿಂದೆ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಏನೋ ಸ್ಟೇಟ್ ಮೆಂಟ್ ಕೊಟ್ಟರು ಅಂತ ಇಡೀ ದೇಶಾದ್ಯಂತ ಅವರ ಮೇಲೆ ಹದಿನೈದಕ್ಕೂ ಹೆಚ್ಚು ಎಫ್ ಐಆರ್ ಹಾಕಲಿಲ್ಲವೇ ? ಅವರಿಗೆ ಕೇಳೋ ಅಧಿಕಾರ ಇಲ್ಲವಾ? ದ್ವಿಮುಖ ನೀತಿಯಾಕೆ? ತನಿಖೆಯಲ್ಲಿ ಎಲ್ಲ ತಿಳಿಯಲಿದೆ ಎಂದು ಹೇಳಿದರು.












Click it and Unblock the Notifications