ಮೈಸೂರಿನಲ್ಲಿ ಯುವ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳಿಂದ ತಂತ್ರ
Recommended Video

ಮೈಸೂರು, ಮಾರ್ಚ್ 13:ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಈ ಬಾರಿ 36,163 ಮಂದಿ ಯುವ ಮತದಾರರಿದ್ದು, ಇವರನ್ನು ಸೆಳೆಯಲು ರಾಜಕೀಯ ಪಕ್ಷಗಳು ತಮ್ಮದೇ ಆದ ತಂತ್ರಗಾರಿಕೆಯನ್ನು ರೂಪಿಸುತ್ತಿವೆ.
ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ಸುಮಾರು 10 ಸಾವಿರ ಅರ್ಜಿ ಫಾರಂ ಮುದ್ರಿಸಿ ಕಾಲೇಜುಗಳಲ್ಲಿ ಹಂಚಲಾಗಿದೆ. 18 ವರ್ಷ ತುಂಬಿರುವವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. 10 ಸಾವಿರ ಅರ್ಜಿಗಳ ಪೈಕಿ 2 ಸಾವಿರ ಅರ್ಜಿಗಳು ಮಾತ್ರ ಇಲ್ಲಿಯ ತನಕ ಭರ್ತಿಯಾಗಿ ಬಂದಿದೆ.
ಇನ್ನು ಸಾಕಷ್ಟು ಮಂದಿ ಅರ್ಜಿ ಪಡೆದಿದ್ದು, ವಾರದೊಳಗೆ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಡೆಸಿದ ಜಾಗೃತಿಯಿಂದಾಗಿ ಈ ಬಾರಿ ಫೆಬ್ರವರಿಯಲ್ಲೇ ಮೊದಲ ಬಾರಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
ನಂತರವೂ ಸಾಕಷ್ಟು ಮಂದಿ ಅರ್ಜಿ ನೀಡಿದ್ದು, ಸೇರ್ಪಡೆ ಪ್ರಕ್ರಿಯೆ ಮುಗಿಯುವುದರೊಳಗೆ ಈ ಸಂಖ್ಯೆ ಸುಮಾರು 40 ಸಾವಿರವನ್ನು ಮುಟ್ಟುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಇನ್ನು ಯುವ ಮತದಾರರು ನಿರ್ಣಾಯಕ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ಅವರನ್ನು ಸೆಳೆದುಕೊಳ್ಳಲು ಪ್ರಮುಖ ರಾಜಕೀಯ ಪಕ್ಷಗಳು ತಂತ್ರಗಾರಿಕೆ ರೂಪಿಸುತ್ತಿವೆ.ಅದು ಹೇಗೆ ಅಂತೀರಾ ಮುಂದೆ ಓದಿ...

ಸಾಮಾಜಿಕ ಜಾಲತಾಣಗಳ ಪಾತ್ರ
ಯುವ ಮತದಾರರನ್ನು ಒಲಿಸಿಕೊಂಡರೆ ಅವರ ಮತಗಳು ಮಾತ್ರವಲ್ಲದೆ, ಪೋಷಕರ ಮೇಲೆಯೂ ಪ್ರಭಾವವಿರುವ ಸಾಧ್ಯತೆ ಇರುವುದರಿಂದ ಈ ಜಾಲ ರೂಪಿಸಲಾಗಿದೆ. ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿ ಕೊಳ್ಳುತ್ತಿರುವುದರಿಂದ ಈ ಬಾರಿ ಮತದಾನದ ಪ್ರಮಾಣ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಮೊದಲ ಬಾರಿಗೆ ಮತ ಚಲಾಯಿಸುವ ಉತ್ಸಾಹದೊಂದಿಗೆ ಜೊತೆಯಲ್ಲಿ ಕುಟುಂಬದವರು ಕೂಡ ಆಗಮಿಸುವ ಸಾಧ್ಯತೆ ಇದೆ. ಯುವ ಮತದಾರರು ಸಕ್ರಿಯವಾಗಿರುವುದರಿಂದ ರಾಜಕೀಯ ಪಕ್ಷಗಳ ಮುಖಂಡರು ಈಗಾಗಲೇ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

ರಾಹುಲ್ ಗಾಂಧಿ ಪ್ರಭಾವ
ನಾಮಪತ್ರ ಸಲ್ಲಿಕೆ ಸಂದರ್ಭ ತಮ್ಮ ಹೆಸರಿನಲ್ಲಿರುವ ಸಾಮಾಜಿಕ ಜಾಲತಾಣಗಳ ಕುರಿತಾದ ಮಾಹಿತಿಯನ್ನು ನೀಡುವಂತೆ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಯುವಕರ ಮೇಲೆ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಪರಿಣಾಮ ಬೀರಿದ್ದಾರೆ ಎನ್ನುವುದು ಬಿಜೆಪಿ ವಾದವಾದರೆ, ರಾಹುಲ್ ಗಾಂಧಿ ಅವರಿಂದ ಯುವಕರು ಸಾಕಷ್ಟು ಪ್ರಭಾವಕ್ಕೊಳಗಾಗಿದ್ದಾರೆ ಮಾತ್ರವಲ್ಲದೆ, ಪ್ರಿಯಾಂಕಾ ಸಕ್ರಿಯ ರಾಜಕೀಯಕ್ಕೆ ಸೇರಿರುವುದು ಪ್ರಯೋಜನವಾಗಲಿದೆ ಎನ್ನುವ ವಿಶ್ವಾಸವನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸುತ್ತಾರೆ.

ಯುವ ಪಡೆ ನಮ್ಮ ಬೆಂಬಲಕ್ಕೆ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದಾಗಿ ಯುವ ಪಡೆ ನಮ್ಮ ಬೆಂಬಲಕ್ಕೆ ನಿಲ್ಲಲಿದೆ. ಈ ಬಾರಿ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕಣಕ್ಕೆ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಲಿದ್ದಾರೆ ಎನ್ನುತ್ತಾರೆ ಜೆಡಿಎಸ್ ಮುಖಂಡರು.

ಮತದಾನದ ಜಾಗೃತಿ ಬಗ್ಗೆ ಅರಿವು
ಇನ್ನು ಲೋಕಸಭಾ ಚುನಾವಣೆಯ ಮತದಾನದಲ್ಲಿ ಭಾಗವಹಿಸುವ ವಿಶೇಷ ಚೇತನ ಮತದಾರರಿಗೆ ಹಾಗೂ ವೃದ್ಧರಿಗೆ ಮತಗಟ್ಟೆಗೆ ತೆರಳಲು ಅನುಕೂಲವಾಗುವಂತೆ ಚುನಾವಣಾ ಆಯೋಗವೇ ವಾಹನ ವ್ಯವಸ್ಥೆ ಮಾಡಲಿದೆ. ಮತಗಟ್ಟೆಗಳಲ್ಲಿ 1,129 ಗಾಲಿ ಕುರ್ಚಿಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಅದೇ ಅಲ್ಲದೆ ಚಾಮುಂಡಿ ಬೆಟ್ಟದ ಮೇಲೆ "ನಿಮ್ಮ ಮತ ನಿಮ್ಮ ಹಕ್ಕು" ಎಂದು ವಿದ್ಯುತ್ ದೀಪಾಲಂಕಾರದಲ್ಲಿ ಮತದಾನದ ಜಾಗೃತಿ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಕೂಡ ಮಾಡಲಾಗುತ್ತದೆ.

ಲೋಕ ಚುನಾವಣೆಗೆ ಮೈಸೂರು ಸಜ್ಜು
ಬಸ್ ಟಿಕೆಟ್, ಹಾಲಿನ ಪ್ಯಾಕೆಟ್ ಮತ್ತು ವೈದ್ಯರು ನೀಡುವ ಔಷಧಿ ಚೀಟಿಯ ಮೇಲೆ "ನಿಮ್ಮ ಮತ ನಿಮ್ಮ ಹಕ್ಕು" ಎಂದು ಮತದಾನದ ಬಗ್ಗೆ ಅರಿವು ಮೂಡಿಸಲು ವಿಶೇಷ ಪ್ರಯತ್ನ ಮಾಡಲಾಗುತ್ತಿದೆ. ಮೈಸೂರಿನಲ್ಲಿರುವ ಡಿಜಿಟಲ್ ಬೋರ್ಡ್ ಗಳ ಮತದಾನದ ಜಾಗೃತಿ ಬಗ್ಗೆ ಈಗಾಗಲೇ ವಿಡಿಯೋ ಚಿತ್ರಗಳನ್ನು ಅಳವಡಿಸಲಾಗುವುದು ಎಂದು ಸಹ ಜಿಲ್ಲಾಡಳಿತ ಸೂಚಿಸಿದೆ. ಒಟ್ಟಾರೆ ಲೋಕ ಚುನಾವಣೆಗೆ ಮೈಸೂರು ಸಜ್ಜಾಗುತ್ತಿದೆ.












Click it and Unblock the Notifications