ಕೊಡಗು-ಚಾ.ನಗರ ಚೆಕ್ ಪೋಸ್ಟಿನಲ್ಲಿ ಎಸಿಬಿ ದಾಳಿ: 10 ಮಂದಿ ಬಂಧನ
ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಕೊಡಗು ಮತ್ತು ಚಾಮರಾಜನಗರದ ಗಡಿಭಾಗದ ತಪಾಸಣಾ ಕೇಂದ್ರದ ವಾಣಿಜ್ಯ ತೆರಿಗೆ ಕಚೇರಿ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಚಾಮರಾಜನಗರದ ಗುಂಡ್ಲುಪೇಟೆ ತಪಾಸಣಾ ಕೇಂದ್ರದಲ್ಲಿ 41,೦೦೦ ರೂ.ಗಳನ್ನು ಪತ್ತೆ ಹಚ್ಚಿ ಐವರನ್ನು ಬಂಧಿಸಿದ್ದರೆ, ಕೊಡಗಿನ ವಿರಾಜಪೇಟೆ ಪೆರುಂಬಾಡಿ ಚೆಕ್ ಪೊಸ್ಟಿನಲ್ಲಿ 30,900ರೂ.ಗಳನ್ನು ವಶಕ್ಕೆ ಪಡೆದು ಐವರನ್ನು ಬಂಧಿಸಿದ್ದಾರೆ.
ಹೊರರಾಜ್ಯಗಳಿಗೆ ಸಂಚಾರ ಮಾಡುವ ವಾಹನಗಳ ಚಾಲಕರಿಂದ ನಿಗದಿಗಿಂತ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಎಸಿಬಿ ಪೊಲೀಸರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ವಾಣಿಜ್ಯತೆರಿಗೆ ಅಧಿಕಾರಿ ಸಿ.ಪಿ.ಯೋಗೇಶ್, ವಾಣಿಜ್ಯ ತೆರಿಗೆ ಇನ್ಸ್ ಪೆಕ್ಟರ್ ರತ್ನರಾಜಪ್ಪ, ಗುಮಾಸ್ತ ಶಿವಕುಮಾರ್, ನಾಲ್ಕನೇ ದರ್ಜೆ ನೌಕರ ಮಹದೇವ ಹಾಗೂ ಭದ್ರತಾ ಸಿಬ್ಬಂದಿ ಅಶೋಕ ಎಂಬುವರನ್ನು ಬಂಧಿಸಿ ಚಾಮರಾಜನಗರದ ಜಿಲ್ಲಾಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ ಪಿ ಪ್ರಭಾಕರರಾವ್ ಶಿಂಧೆ ಇನ್ಸ್ ಪೆಕ್ಟರ್ ಶ್ರೀಕಾಂತ್, ಸಿಬ್ಬಂದಿ ಕುಮಾರ್ ಆರಾಧ್ಯ, ಮಹದೇವಸ್ವಾಮಿ, ಗುರು ಮಲ್ಲಿಕಾರ್ಜುನಪ್ಪ, ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಕೊಡಗು ಪ್ರಕರಣ
ಕೊಡಗಿನ ವೀರಾಜಪೇಟೆಯಿಂದ ಕೇರಳ ರಾಜ್ಯಕ್ಕೆ ತೆರಳುವ ಅಂತರ್ರಾಜ್ಯ ಹೆದ್ದಾರಿಯಲ್ಲಿನ ಪೆರುಂಬಾಡಿ ಚೆಕ್ ಪೋಸ್ಟ್ನಲ್ಲಿರುವ ವಾಣಿಜ್ಯ ಇಲಾಖೆಯ ಮಾರಾಟ ತೆರಿಗೆ ಕೇಂದ್ರದ ಮೇಲೆ, ಮೈಸೂರು ಎಸಿಬಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆದಿದ್ದು. ತೆರಿಗೆ ಕೇಂದ್ರದ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಡಿಕೇರಿಯ ನಿವಾಸಿ ದೇವಾರಾಜು ಬಳಿ ಪತ್ತೆಯಾದ ರೂ. 30,900 ನಗದನ್ನು ವಶಕ್ಕೆ ಪಡೆದು ಈತ ಸೇರಿದಂತೆ ವಾಣಿಜ್ಯ ತೆರಿಗೆ ಅಧಿಕಾರಿ ನಿರಂಜನ್, ತೆರಿಗೆ ನಿರೀಕ್ಷಕ ನಾಗರಾಜು ಹಾಗೂ ಸಿಬ್ಬಂದಿಗಳಾದ ಗಿರೀಶ್ ಹಾಗೂ ಪುಟ್ಟೆಗೌಡ ಸೇರಿ ಐವರವನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ತಪಾಸಣಾ ಕೇಂದ್ರದಲ್ಲಿ ನಿತ್ಯ ಅಧಿಕ ಸಂಖ್ಯೆಯಲ್ಲಿ ಸರಕು ಸಾಗಣೆ ವಾಹನ ಸಂಚರಿಸುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿ ವ್ಯಾಪಕವಾಗಿ ಹಣದ ಲೂಟಿ ನಡೆಯುತ್ತಿರುವ ಬಗ್ಗೆ ದೂರು ಬಂದ ಬಳಿಕ ಆ ದೂರು ಖಚಿತ ಪಡಿಸಿಕೊಂಡ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಚೆಕ್ ಪೋಸ್ಟಿನಿಂದ ದಿನಕ್ಕೆ ಸುಮಾರು 40 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹವಾಗುತ್ತಿದ್ದು, ಪ್ರತಿದಿನ ಪೊಲೀಸ್ ಅಧಿಕಾರಿಗಳಿಗೂ ಇದರಲ್ಲಿ ಪಾಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಾರ್ಯಾಚರಣೆಯಲ್ಲಿ ಮೈಸೂರು ವಿಭಾಗದ ಡಿವೈಎಸ್ ಪಿ ಗಜೇಂದ್ರ ಪ್ರಸಾದ್, ಹಾಸನ ವಿಭಾಗದ ಡಿವೈಎಸ್ ಪಿ ರಾಜು, ಮಡಿಕೇರಿಯ ಸರ್ಕಲ್ ಇನ್ಸ್ ಪೆಕ್ಟರ್ ಗಂಗಾಧರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.












Click it and Unblock the Notifications