ತಿ.ನರಸೀಪುರ, ಮಗುವನ್ನು ಕೊಂದು ನೇಣಿಗೇರಿದ ಬಾಣಂತಿ
ತಿ.ನರಸೀಪುರ, ಫೆಬ್ರವರಿ 9: ಜೀವನದಲ್ಲಿ ಜಿಗುಪ್ಸೆಗೊಂಡ ಬಾಣಂತಿಯೊಬ್ಬಳು ಏಳು ತಿಂಗಳ ಹಸುಗೂಸನ್ನು ಕತ್ತು ಹಿಸುಕಿ ಕೊಲೆಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಪಟ್ಟಣದ ಹೆಳವರಹುಂಡಿಯಲ್ಲಿ ನಡೆದಿದೆ.
ಪಟ್ಟಣದ ಹೆಳವರಹುಂಡಿಯ ತವರುಮನೆಯಲ್ಲಿ ಚೊಚ್ಚಲ ಬಾಣಂತನದ ಆರೈಕೆಯಲ್ಲಿದ್ದ ಗುರುಸಿದ್ದಪ್ಪ ಎಂಬುವರ ಪುತ್ರಿ ಜ್ಯೋತಿ(24) ಎಂಬಾಕೆಯೇ ತನ್ನ ಏಳು ತಿಂಗಳ ಹಸುಳೆ ಮೇಘನಾಳನ್ನು ಹತ್ಯೆಗೈದು ನೇಣಿಗೆ ಶರಣಾದ ದುದೈವಿ.

ಈಕೆಯ ವಿವಾಹ ಕಳೆದ ಒಂದೂವರೆ ವರ್ಷದ ಹಿಂದೆ ತಾಲೂಕಿನ ವೀರಪ್ಪಓಡೆಯರಹುಂಡಿ ಗ್ರಾಮದ ದಿವಂಗತ ನಾಗಪ್ಪ ಎಂಬುವರ ಪುತ್ರ ಶಂಕರಪ್ಪ ಎಂಬಾತನೊಂದಿಗೆ ನಡೆದಿತ್ತು. ಗರ್ಭಿಣಿಯಾದ ಜ್ಯೋತಿಯನ್ನು ತವರು ಮನೆಗೆ ಕಳುಹಿಸಲಾಗಿತ್ತು. ಏಳು ತಿಂಗಳ ಹಿಂದೆ ಜ್ಯೋತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ನೀನು ಹೆಣ್ಣು ಮಗುವನ್ನೇಕೆ ಹೆತ್ತಿದೀಯಾ ಎಂದು ಕಿರಿಕ್ ಮಾಡಿದ ಗಂಡ ಶಂಕರಪ್ಪ ಮತ್ತು ಮನೆಯವರು ಮಗುವನ್ನು ನೋಡಲು ಬಂದಿರಲೇ ಇಲ್ಲ ಎನ್ನಲಾಗಿದೆ.[ಸಾವಿನಲ್ಲೂ ಒಂದಾದ ಮೈಸೂರಿನ ತಂದೆ- ಮಗ]
ಇದೆಲ್ಲದರ ನಡುವೆ ಮಗುವಿಗೆ ಮೇಘನಾ ಎಂದು ನಾಮಕರಣ ಮಾಡಲಾಗಿತ್ತು. ಗಂಡ ಮತ್ತು ಆತನ ಮನೆಯವರು ಹೆಣ್ಣು ಮಗು ಹೆತ್ತ ಕಾರಣಕ್ಕೆ ನೋಡಲು ಬಾರದೆ ಇದ್ದುದು ಆಕೆಯನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು. ಅಲ್ಲದೆ ಆಕೆಯ ಬಗ್ಗೆಯೇ ಜಿಗುಪ್ಸೆ ಪಡುವಂತೆ ಮಾಡಿತ್ತು. ಇದೇ ನೋವಲ್ಲಿ ದಿನ ಕಳೆಯುತ್ತಿದ್ದ ಆಕೆ ತಾನು ಮಲಗುತ್ತಿದ್ದ ಕೋಣೆಯಲ್ಲೇ ಯಾರೂ ಇಲ್ಲದ ಸಂದರ್ಭ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ತಾನು ಸೀಲಿಂಗ್ ಫ್ಯಾನ್ ಅಳವಡಿಸುವ ಹುಕ್ಕುಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.












Click it and Unblock the Notifications