ಪ್ರಿಯಕರನೇ ಕೊಲ್ಲುವಂತಹ ತಪ್ಪು ಪ್ರೇಯಸಿ ಮಾಡಿದ್ದೇನು?
ಮೈಸೂರು, ಜನವರಿ,12: ವಿಧವೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತನೊಬ್ಬ ಆಕೆಯನ್ನು ಹತ್ಯೆಗೈದು ತಿ.ನರಸೀಪುರ ಪಟ್ಟಣದಲ್ಲಿ ಸೋಮವಾರ ಸಂಜೆ ನೇಣಿಗೆ ಶರಣಾಗಿದ್ದಾನೆ.
ಮೈಸೂರಿನ ತಿ.ನರಸೀಪುರ ಪಟ್ಟಣ ಇಂದಿರಾ ಕಾಲೋನಿ ನಿವಾಸಿ ಜ್ಯೋತಿ (30) ಹತ್ಯೆಗೀಡಾದ ಮಹಿಳೆ. ವಿನಾಯಕ ಕಾಲೋನಿಯ ನಿವಾಸಿ ರಾಜು (34) ಹತ್ಯೆಗೈದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.[ಮಾಯಾವಿ ಮಾತಿಗೆ ಮರುಳಾಗಿ ಹಣ ಕಳೆದುಕೊಂಡ ಗಂಡಸರೆಷ್ಟು?]

ಘಟನೆಯ ವಿವರ:
ಹತ್ಯೆಗೀಡಾಗಿರುವ ಜ್ಯೋತಿಯನ್ನು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದ ಮಹದೇವಸ್ವಾಮಿಗೆ ಕೆಲವು ವರ್ಷಗಳ ಹಿಂದೆಯೇ ಮದುವೆ ಮಾಡಿಕೊಡಲಾಗಿತ್ತು. ಈಕೆಗೆ ಎರಡು ಮಕ್ಕಳು ಇದ್ದರು. ಆದರೆ ಮೂರು ವರ್ಷಗಳ ಹಿಂದೆ ಗಂಡ ಮಹದೇವಸ್ವಾಮಿ ಮೃತಪಟ್ಟಿದ್ದನು. ಈ ಕಾರಣದಿಂದ ಆಕೆ ಮತ್ತೆ ತವರಿಗೆ ಬಂದು ತಿ.ನರಸೀಪುರದಲ್ಲಿ ವಾಸಿಸುತ್ತಿದ್ದಳು.
ಈ ನಡುವೆ ವಿನಾಯಕ ಕಾಲೋನಿಯ ನಿವಾಸಿ ರಾಜು ಎಂಬ ವಿವಾಹಿತನ ಪರಿಚಯವಾಗಿ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಆಗಾಗ್ಗೆ ಆತ ಜ್ಯೋತಿ ಮನೆಗೆ ಬಂದು ಹೋಗುತ್ತಿದ್ದನು. ಅಲ್ಲಿನ ಮುರುಗನ್ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ರಾಜುಗೆ ಪತ್ನಿ ಒಂದು ವರ್ಷದ ಮಗುವಿದ್ದರೂ ಜ್ಯೋತಿಯೊಂದಿಗೆ ಸಂಬಂಧ ಮುಂದುವರೆಸಿಕೊಂಡು ಹೋಗಿದ್ದನು.[ಸದ್ಯದಲ್ಲೇ ಮೈಸೂರಿನಲ್ಲಿ ಕಾವೇರಿ ನದಿ ಗ್ಯಾಲರಿ]
ಸೋಮವಾರ ಮಧ್ಯಾಹ್ನ 3ಗಂಟೆ ಸಮಯದಲ್ಲಿ ಜ್ಯೋತಿ ಮನೆಗೆ ಬಂದಿದ್ದ ರಾಜು ಅಲ್ಲಿ ಕೆಲ ಸಮಯ ಕಳೆದಿದ್ದನು. ಈ ನಡುವೆ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ. ಅದು ವಿಕೋಪಕ್ಕೆ ತೆರಳಿ ಆಕೆಯನ್ನು ಜಜ್ಜಿ ಕೊಲೆ ಮಾಡಿದ್ದಾನೆ. ಬಳಿಕ ಆತನೂ ಮನೆಯ ಕೋಣೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾನೆ.
ಜ್ಯೋತಿಯ ತಾಯಿ ಮನೆಗೆ ಬಂದು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ತಿ.ನರಸೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಶವವನ್ನು ನೀಡಿದ್ದಾರೆ.












Click it and Unblock the Notifications