ರುಚಿ ರುಚಿ ಮೈಸೂರು ಪಾಕ ಹುಟ್ಟಿದ್ದು ಹೀಗೆ...
ಮೈಸೂರು, ಸೆಪ್ಟೆಂಬರ್ 13 : ಮೈಸೂರು ಮಹಾರಾಜರ ಕಾಲದಲ್ಲಾದ ಆವಿಷ್ಕಾರಗಳಲ್ಲಿ ಬಹು ಮುಖ್ಯ ಸ್ಥಾನ ನಮ್ಮ ಮೈಸೂರು ಪಾಕ್ ನದ್ದು. ವಿದೇಶಗಳಲ್ಲೂ ಹೆಸರು ಮಾಡಿರುವ ಪಾಕ್ ನ ರುಚಿ ನಾಲಿಗೆಯನ್ನೊಮ್ಮೆ ತಣಿಸದೆ ಇರಲಾರದು. ಕಡೆಲೆಹಿಟ್ಟು , ತುಪ್ಪದ ಹದವಾದ ಮಿಶ್ರಣ, ಮಧ್ಯೆ -ಮಧ್ಯೆ ಬಾಯಿಗೆ ಸಿಗುವ ಏಲಕ್ಕಿಯ ಘಮ... ಅದ್ಭುತವೇ ಸರಿ. ಹಾಗಾದರೇ ಈ ಮೈಸೂರು ಪಾಕ್ ನ ಹುಟ್ಟಿನ ಕಥೆ ಹೇಗೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದೆಯೇ?
1930ರಲ್ಲಿ ಒಂದು ದಿನ ಅರಮನೆಯ ಪ್ರಧಾನ ಅಡುಗೆಯವರಾದ ಮಾದಪ್ಪನವರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭೋಜನಕ್ಕೆ ಎಲ್ಲವನ್ನೂ ಅಣಿಗೊಳಿಸಿದ್ದರು. ಆದರೆ ರಾಜ ಭೋಜನದಲ್ಲಿ ಸಿಹಿ ತಿಂಡಿಯ ಜಾಗ ಖಾಲಿ ಇದ್ದು , ಅದಕ್ಕೆ ಏನನ್ನೂ ಸಿದ್ಧಗೊಳಿಸುವುದು ಎಂದು ಮಾದಪ್ಪನವರು ಚಿಂತಿಸುತ್ತಿರುವ ವೇಳೆ ಕಡಲೆ ಹಿಟ್ಟು , ತುಪ್ಪ , ಸಕ್ಕರೆ ಇವುಗಳ ಪಾಕದ ಒಂದು ಪ್ರಯೋಗವನ್ನು ಮಾಡಿದರು.

ಮಹಾರಾಜ ಊಟ ಮುಗಿಸುವ ವೇಳೆಗೆ ಪಾಕ ಗಟ್ಟಿಯಾದಾಗ ಅದನ್ನು ಮಾದಪ್ಪನವರು ಮಹಾರಾಜರಿಗೆ ಅಳುಕಿನಿಂದಲೇ ಕತ್ತರಿಸಿ ನೀಡಿದರು . ಈ ಸಿಹಿಯನ್ನು ಚಪ್ಪರಿಸಿದ ಮಹಾರಾಜರು ಇದೇನಿದು ಹೊಸ ರುಚಿ ಇಷ್ಟು ಸ್ವಾದಿಷ್ಟವಾಗಿದೆ. ಇದರ ಹೆಸರೇನು? ಎಂದು ಕೇಳಿದಾಗ ತಬ್ಬಿಬ್ಬಾದ ಮಾದಪ್ಪನವರು ಇದು 'ಮೈಸೂರು ಪಾಕ' ಎಂದರಂತೆ. ಅಂದಿನಿಂದ ಈ ಮೈಸೂರು ಪಾಕ್ ವಿಶ್ವ ಪ್ರಸಿದ್ಧ.
ಒಟ್ಟಾರೆ ಮೈಸೂರಿನ ಹೆಸರಿನೊಂದಿಗೆ ಹೆಮ್ಮೆ ಹಾಗೂ ಬಾಯಿನೀರು ಬರುವಂತೆ ಮಾಡುತ್ತಿರುವುದು ಮೈಸೂರು ಪಾಕ್. ಇಂತಹದ್ದೊಂದು ಪಾಕಶಾಲೆ ಆವಿಷ್ಕಾರ ನಡೆದ ಬಗ್ಗೆಯೇ ವಿಚಿತ್ರವಾಗಿರುವುದು ಅಚ್ಚರಿಯ ವಿಷಯ. ಹೀಗೊಂದು ತಿನಿಸು ಮಾಡಬೇಕೆಂಬ ಭಾವನೆಯಾಗಲಿ, ಪ್ರಯತ್ನವಾಗಲಿ ಯಾರೂ ಊಹೆ ಮಾಡದೆಯೇ ಏಕಾಏಕಿ ತಯಾರಿಸಿದ ಈ ಖಾದ್ಯಕ್ಕೆ ಸದ್ಯ ವಿಶ್ವ ಮನ್ನಣೆಯ ಗರಿ!

ಬಾಯಿರುಚಿ ತಣಿಸುವ ಮೈಸೂರು ಪಾಕ
ಗುರುರಾಜ ಸ್ವೀಟ್ ಸ್ಟಾಲ್ ಇರುವುದು ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ. ಮೈಸೂರಿನ ಸಯ್ಯಾಜಿ ರಾವ್ ರಸ್ತೆಯ ಉದ್ದಗಲಕ್ಕೂ ಚಾಚಿಕೊಂಡಿರುವ ದೇವರಾಜ ಮಾರ್ಕೆಟ್ ಮೈಸೂರಿನ ಮಹಾರಾಜರಾಗಿದ್ದ ಚಿಕ್ಕದೇವರಾಜ ಒಡೆಯರ್ ಅವರ ಕಾಲದಲ್ಲಿ ಕಟ್ಟಿದ್ದು.
ಮೈಸೂರು ಎನ್ನುವ ಹೆಸರಿನೊಂದಿಗೆ ಬಾಯಿರುಚಿ ತಣಿಸುವ ಪಾಕವೇ ಮೈಸೂರು ಪಾಕ. ಇದಕ್ಕೆ ಯದುವಂಶದ ನಂಟಿದೆ ಮಾದಪ್ಪ ಅವರ ಕುಟುಂಬದವರೇ ಆಗಿರುವ ಗುರು ಸ್ವೀಟ್ಸ್ ಮಾಲೀಕರು ಈಗಲೂ ಮೈಸೂರು ಪಾಕ್ ಗೆ ಹೆಸರುವಾಸಿ. ಕೇವಲ ಗುರು ಸ್ವೀಟ್ಸ್ ಅಷ್ಟೇ ಅಲ್ಲ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳ ತಯಾರಿಸುವ ಮೈಸೂರು ಪಾಕ್ , ಮೈಸೂರಿನ ಬಾಂಬೆ ಆನಂದಭವನ, ಬಾಂಬೆ ಟಿಫಾನೀಸ್ ತಯಾರಿಸುವ ಮೈಸೂರು ಪಾಕ್ , ಮಂಗಳೂರು ಕಡೆಯ ಗಟ್ಟಿ ಮೈಸೂರು ಪಾಕು ಇವೆಲ್ಲವೂ ಕೂಡ ಜನರ ನಾಲಿಗೆಯ ಮೇಲೆ ಸದಾ ನೀರೂರಿಸುತ್ತಲೇ ಇವೆ.












Click it and Unblock the Notifications