ಬಿಗ್ ಬಾಸ್ ಗೆ ಹೊರಟಿದ್ದ ನಕಲಿ ಪೊಲೀಸನ ಅಸಲಿ ಮುಖ ಇದು!
ಮೈಸೂರು, ಆಗಸ್ಟ್ 1 : ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ಮಾತಿದೆ. ಆದರೆ ಇಲ್ಲೊಬ್ಬ ಭೂಪ ಸಾಲ ಮಾಡಿ, ನಕಲಿ ಪೊಲೀಸ್ ಎಂದು ಹೇಳಿಕೊಂಡು ತಿರುಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕೆ ತಯಾರಾಗುತ್ತಿದ್ದಾನೆ. ಆದರೆ ಇವನು ಮಾಡಿರುವ ಸಾಲದ ಮೊತ್ತ ಬರೋಬ್ಬರಿ 3 ಕೋಟಿಯಂತೆ! ಇದು ಆತನೇ ಒಪ್ಪಿಕೊಂಡಿರುವ ಸತ್ಯ.
ಹೌದು, ನನ್ನ ಹೆಸರು ಮೂರು ಕೋಟಿ ಮೂರ್ತಿ, ವಿಜಯಮಲ್ಯ ದೊಡ್ಡ ಬ್ಯುಸಿನೆಸ್ ಮ್ಯಾನ್. ಅವರು ಸಾಲ ಮಾಡಿ ದೇಶ ಬಿಟ್ಟು ಹೋದರು, ನಾನು ಸಾಲ ಮಾಡಿ ಊರು ಬಿಟ್ಟು ಬಂದಿದ್ದೇನೆ ಎಂದು ವಿಡಿಯೋ ಮಾಡಿ ಬಿಗ್ ಬಾಸ್ ಸೀಸನ್ 5 ಗೆ ಹೋಗಲು ರೆಡಿಯಾಗಿ ನಗರದ ಗ್ರಾಮಾಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ನಕಲಿ ಪೊಲೀಸ್ ಪೇದೆ.

ಯಾರಿವನು..?
ಈತ ಸಿಕ್ಕಿಬೀಳದೇ ಇದ್ದಿದ್ದರೆ ಬಹುಶಃ ಮುಂದಿನ ಬಿಗ್ ಬಾಸ್ ಸೀಸನ್'ನಲ್ಲಿ ಈತನನ್ನು ಒಬ್ಬ ಕಂಟೆಸ್ಟೆಂಟ್ ಆಗಿ ನೋಡುವ ಸಾಧ್ಯತೆಯೂ ಇತ್ತು. ಯಾಕೆಂದರೆ ಈತ ಬಿಗ್'ಬಾಸ್'ಗೆ ಎಂಟ್ರಿ ಕೊಡಲು ಸಾಕಷ್ಟು ಕಸರತ್ತು ನಡೆಸಿದ್ದ. ಅದಕ್ಕಾಗೇ ತಾನು ಮಾತನಾಡಿರುವುದನ್ನು ವಿಡಿಯೋದಲ್ಲಿ ಶೂಟ್ ಮಾಡಿಸಿಕೊಂಡಿದ್ದ. ತಾನು 3 ಕೋಟಿ ಸಾಲ ಮಾಡಿ ಊರಿಂದೂರು ಅಲೆಯುತ್ತಿರುವುದನ್ನು ಈತ ಬಾಯಿಬಿಟ್ಟಿದ್ದಾನೆ.
ವಿಡಿಯೋದಲ್ಲೇನಿದೆ?
"ನಮಸ್ತೆ ಬಿಗ್ ಬಾಸ್ ಈ ಬಾರಿ ಸಾಮಾನ್ಯ ಜನತೆಗೆ ಬಿಗ್ಬಾಸ್ ಸೀಸನ್ 5 ಅಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಧನ್ಯವಾದ. ನನ್ನ ಹೆಸರು 3 ಕೋಟಿ ಮೂರ್ತಿ. ಸುದೀಪ್ ಅಣ್ಣನಿಗೆ ಕಿಚ್ಚ, ದರ್ಶನ ಅವರಿಗೆ ಚಾಲೆಂಜಿಂಗ್ ಸ್ಟಾರ್, ಪುನೀತಣ್ಣನಿಗೆ ಪವರ್ ಸ್ಟಾರ್, ಗಣೇಶಣ್ಣನಿಗೆ ಗೋಲ್ಡನ್ ಸ್ಟಾರ್ ಎಂದು ನಮ್ಮ ಪ್ರೀತಿಯ ಜನರು ಪ್ರೀತಿಯಿಂದ ಬಿರುದನ್ನ ನೀಡಿದ್ದಾರೆ. ಅದೇ ರೀತಿ ನನಗೂ ಸಹ ಜನರು ಮೂರು ಕೋಟಿ ಮೂರ್ತಿ ಎಂದು ಬಿರುದು ನೀಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.

ನಾನು ವಿಜಯ್ ಮಲ್ಯ ಫಾಲೋವರ್ . ಅವರು ಬ್ಯಾಂಕ್ನಲ್ಲಿ ಸಾಲ ಮಾಡುತ್ತಿದ್ದರು, ನಾನು ಜನರ ಬಳಿ ಬ್ಯುಸಿನೆಸ್ ಮಾಡಲು ಸಾಲ ಮಾಡಿದೆ. ಅವರು ಸಾಲ ಮಾಡಿ ದೇಶ ಬಿಟ್ಟು ಹೋದರು, ನಾನು ಸಾಲ ಮಾಡಿ ಊರು ಬಿಟ್ಟು ಬಂದೆ. ನಮ್ಮ ಜನರು ಮಲ್ಯ ಅಷ್ಟು ಕೋಟಿ; ಇಷ್ಟು ಕೋಟಿ ಸಾಲ ಮಾಡಿದ್ದಾರೆ ಎಂದು ಮಲ್ಯ ಅವರಿಗೆ ಪ್ರಚಾರ ನೀಡಿದರು. ಆದರೆ, ಎಷ್ಟು ಸಾಲ ಮಾಡಿದ್ದರು ಎನ್ನುವುದು ಅವರಿಗೆ ಮಾತ್ರ ಗೊತ್ತು. ಅದೇ ರೀತಿ ನಾನು ಎಷ್ಟು ಸಾಲ ಮಾಡಿದ್ದೇನೆಂದು ನನಗೆ ಮಾತ್ರ ಗೊತ್ತು. ನಾನು ಮೂರು ಕೋಟಿ ಸಾಲ ಮಾಡಿದ್ದೇನೆ ಎಂದು ಜನರು ಪ್ರಚಾರ ಮಾಡುತ್ತಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡ ಮೂರ್ತಿ ಹೆಸರಿನ ಮುಂದೆ ಮೂರು ಕೋಟಿ ಮೂರ್ತಿ ಎಂದು ಹೆಸರಿಟ್ಟುಕೊಂಡಿದ್ದೇನೆ ಎಂದು ತನ್ನ ಹೆಸರಿನ ಅಸಲಿತನವನ್ನ ಬಿಚ್ಚಿಟ್ಟಿದ್ದಾನೆ.
ಈತನಿಗೆ ಬೇಕಂತೆ ಬಿಗ್ ಬಾಸ್ ನಲ್ಲಿ ಎಂಟ್ರಿ!
ಸೂರ್ಯ ಬಂದರೆ ವೈಟ್, ಚಂದ್ರ ಬಂದರೆ ನೈಟ್, ಈ ಮೂರು ಕೋಟಿ ಮೂರ್ತಿ ಬಿಗ್ಬಾಸ್ ಮನೆಗೆ ಬಂದರೆ ಪಕ್ಕ ಎಂಟರ್ ಟೈನ್ಮೆಂಟ್. ಕರ್ನಾಟಕಕೋಸ್ಕರ ಹೋರಾಡುತ್ತೇನೆ, ದೇಶಕೋಸ್ಕರ ಪ್ರಾಣ ಕೊಡುತ್ತೇನೆ ಎನ್ನುತ್ತಾನೆ ಈತ. ಅಷ್ಟೇ ಅಲ್ಲದೆ. ಕಣ್ಣು, ಕಿಡ್ನಿ ದಾನ ಮಾಡುತ್ತಾನಂತೆ! ಇತರರಿಗಿಂತ ನಾನು ಭಿನ್ನ, ಎಲ್ಲರೂ ಸತ್ತ ನಂತರ ಕಣ್ಣು ದಾನ ಮಾಡುತ್ತಾರೆ. ಆದರೆ, ನಾನು ಬದುಕಿರುವಾಗಲೇ ಒಂದು ಕಣ್ಣು, ಕಿಡ್ನಿ ದಾನ ಮಾಡುತ್ತಿದ್ದೇನೆ ಎನ್ನುತ್ತಾನೆ ಭೂಪ.
ಮೋಸ ಮಾಡಿದ್ದಕ್ಕೆ ಬಿಗ್ ಬಾಸ್ ಗೆ ಎಂಟ್ರಿ!
ಬಿಗ್ಬಾಸ್ಗೆ ಹೋಗಲು ಕಾರಣ? ನಾನು ಜೀವನದಲ್ಲಿ ದೊಡ್ಡ ತಪ್ಪು ಮಾಡಿದ್ದೇನೆ, ನನ್ನ ತಂದೆ ತಾಯಿಗೆ ಮೋಸ ಮಾಡಿದ್ದೇನೆ. ತುಂಬಾ ಅವಮಾನವಾಗಿದೆ, ಕಷ್ಟಗಳನ್ನ ಕೊಟ್ಟಿದ್ದೇನೆ. ನಾನು ಮಾಡಿದ ತಪ್ಪನ್ನು ಯಾರು ಮಾಡಬಾರದು. ನನ್ನ ತಂದೆ-ತಾಯಿ ಬಳಿ ಕ್ಷಮೆ ಕೇಳಬೇಕು. ಅದು ಬಿಗ್ಬಾಸ್ ವೇದಿಕೆಯಿಂದ ಮಾತ್ರ ಸಾಧ್ಯ. ಆದ್ದರಿಂದ, ಒಂದು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡುತ್ತೇನೆ ಎಂದು ಸತತ ನಾಲ್ಕು ನಿಮಿಷಗಳ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿಕೊಟ್ಟು ಪೊಲೀಸರಿಗೆ ಅತಿಥಿಯಾಗಿದ್ದಾನೆ ಈ ನಕಲಿ ಪೊಲೀಸಪ್ಪ
ಹೆಂಡತಿ ದೂರಿನಿಂದ ದಾಖಲಾಯ್ತು ಈತನ ಅಸಲಿಯತ್ತು!
2016ರಲ್ಲಿ ಮದುವೆಯಾಗಿ ಒಂದು ತಿಂಗಳಷ್ಟೇ ತನ್ನನ್ನು ಈತ ಚೆನ್ನಾಗಿ ನೋಡಿಕೊಂಡಿದ್ದು. ಅಲ್ಲಿಂದ ಈತ ಮತ್ತು ಈತನ ಅಜ್ಜಿ ಇಬ್ಬರೂ ತನಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದರು ಎಂದು ಈತನ ಪತ್ನಿ ದೂರಿದ್ದಾರೆ. ಅಂದಹಾಗೆ, ಮದುವೆಗೆ ಈತ 250 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ ವರದಕ್ಷಿಣೆ ಪಡೆದುಕೊಂಡಿದ್ದಾನೆ. 10 ಲಕ್ಷ ಖರ್ಚು ಮಾಡಿ ದೊಡ್ಡ ಲೆವೆಲ್'ನಲ್ಲಿ ಮದುವೆ ಮಾಡಿಸಿಕೊಂಡಿದ್ದಾನೆ.
ಬಿಗ್'ಬಾಸ್'ಗೆ ಎಂಟ್ರಿ ಪಡೆಯಲು ಈತ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿ ಹಬ್ಬಿ ಕೊನೆಗೆ ಈತನ ಪತ್ನಿ ದೇವಿಕಾಗೆ ಸಿಕ್ಕಿದೆ. ಅಸಲಿ ಪೊಲೀಸಪ್ಪ ಎಂದು ತಿಳಿದುಕೊಂಡಿದ್ದ ದೇವಿಕಾಗೆ ಈ ವಿಡಿಯೋ ನೋಡಿ ಶಾಕ್ ಆಗಿದೆ. ಈ ಹುಡುಗಿ ಕೊಟ್ಟ ದೂರಿನ ಮೇರೆಗೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.












Click it and Unblock the Notifications