ಪೊಲೀಸ್ ವೇಷ ಧರಿಸಿ ಪೊಲೀಸರನ್ನೇ ಯಾಮಾರಿಸಲು ಮುಂದಾದ ಚಾಲಾಕಿ ಕಳ್ಳ
ಮೈಸೂರು, ಜನವರಿ 23: ಪೊಲೀಸ್ ವೇಷ ಹಾಕಿಕೊಂಡು ಠಾಣೆಯಲ್ಲೇ ಪೊಲೀಸ್ ಅಧಿಕಾರಿಗಳನ್ನು ಬೇಸ್ತು ಬೀಳಿಸುತ್ತಿದ್ದ ನಕಲಿ ಪೊಲೀಸ್ ಅಧಿಕಾರಿಯೊಬ್ಬನನ್ನು ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಸಿದ್ಧಪ್ಪ ಚನ್ನಬಸಪ್ಪ ನ್ಯಾಮಕ್ಕನವರ (28) ಬಂಧಿತ ವ್ಯಕ್ತಿ. ಈತನ ವಿರುದ್ಧ ವಂಚನೆ ದೂರು ದಾಖಲಾಗಿದೆ. ಈತನಿಂದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಾಕಷ್ಟು ವಂಚನೆಗೆ ಒಳಗಾಗಿದ್ದಾರೆ ಎಂಬ ಅಂಶ ವಿಚಾರಣೆ ವೇಳೆ ಗೊತ್ತಾಗಿದೆ.
ತಾನು ಬೆಂಗಳೂರಿನ ಇಂಟಲಿಜೆನ್ಸ್ ವಿಭಾಗದಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿರುವ ಸಿದ್ದಪ್ಪ ಎಂದು ಹೇಳಿಕೊಂಡು ನಗರದ ವಿವಿಧೆಡೆ ಸಾರ್ವಜನಿಕರನ್ನು ಬೆದರಿಸಿ ವಂಚಿಸುತ್ತಿದ್ದ. ಕೇವಲ ಸಾರ್ವಜನಿಕರನ್ನು ಮಾತ್ರವಲ್ಲ, ವಿವಿಧ ಠಾಣೆಯ ಪೊಲೀಸರನ್ನೇ ಬೇಸ್ತು ಬೀಳಿಸುತ್ತಿದ್ದ.
ಪ್ರಕರಣಗಳ ತನಿಖೆಗೆ ಬಂದಿರುವುದಾಗಿ ಹೇಳುತ್ತಿದ್ದ ಈತನ ಮಾತನ್ನು ಪೊಲೀಸರೂ ನಂಬುತ್ತಿದ್ದರು. ಹೆಚ್ಚಾಗಿ ಈತ ಇನ್ಸ್ಪೆಕ್ಟರ್ ಇರದ ಹೊತ್ತಿನಲ್ಲೇ ಠಾಣೆಗಳಿಗೆ ಭೇಟಿ ಕೊಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

50 ಸಾವಿರ ಲಂಚ ಕೊಡಬೇಕು
ಶಕ್ತಿನಗರದ ನಿವಾಸಿ ನಾರಾಯಣಗೌಡ ಎಂಬುವವರ ಮನೆಗೆ ಕಾರಿನಲ್ಲಿ ಬಂದ ಆರೋಪಿ 'ನಾನು ಬೆಂಗಳೂರಿನ ಪೊಲೀಸ್ ಅಧಿಕಾರಿ. ತಮ್ಮ ಪುತ್ರ ರೇಣುಕೇಶ್ ಅವರು ಹುಡುಗಿಯರಿಗೆ ಮೋಸ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಬಾರದು ಎಂದಿದ್ದರೆ 50 ಸಾವಿರ ಲಂಚ ಕೊಡಬೇಕು ಎಂದು ಕೇಳಿದ್ದಾನೆ. ಅನುಮಾನಗೊಂಡ ನಾರಾಯಣಗೌಡ 5 ಸಾವಿರ ಹಣ ನೀಡಿ, ಬಾಕಿ ಮೊತ್ತವನ್ನು ಎಟಿಎಂನಿಂದ ತರುವುದಾಗಿ ಹೇಳಿ ಉದಯಗಿರಿ ಠಾಣೆಗೆ ಬಂದಿದ್ದಾರೆ.

ನಕಲಿ ಅಧಿಕಾರಿ
ದೂರು ಸ್ವೀಕರಿಸಿದ ಠಾಣೆಯ ಇನ್ಸ್ಪೆಕ್ಟರ್ ಪಿ.ಪಿ.ಸಂತೋಷ್ ನೇತೃತ್ವದ ತಂಡ ನಾರಾಯಣಗೌಡ ಅವರ ಮನೆಗೆ ತೆರಳಿ ಸಿದ್ದಪ್ಪ ಅವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ತಾನು ಪೊಲೀಸ್ ಅಧಿಕಾರಿ ಎಂದು ಬಲವಾಗಿ ವಾದಿಸಿದ್ದಾನೆ. ಯಾವ ಬ್ಯಾಚಿನ ಸಬ್ಇನ್ಸ್ಪೆಕ್ಟರ್? ನಿಮ್ಮ ಮುಖ್ಯಸ್ಥರು ಯಾರು? ಎಂದೆಲ್ಲ ಪ್ರಶ್ನಿಸಿದ ಇನ್ಸ್ಪೆಕ್ಟರ್ ರಹಸ್ಯವಾಗಿ ಬೆಂಗಳೂರಿನ ಇಂಟಲಿಜೆನ್ಸ್ ವಿಭಾಗಕ್ಕೆ ಫೋನ್ ಮಾಡಿ ವಿಚಾರಿಸಿದಾಗ ಸಿದ್ದಪ್ಪ ಎಂಬ ಅಧಿಕಾರಿ ತರಬೇತಿಯಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ತೀವ್ರವಾಗಿ ವಿಚಾರಣೆ ನಡೆಸಿದಾಗ ತಾನೊಬ್ಬ ನಕಲಿ ಅಧಿಕಾರಿ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.

ನಕಲಿ ಫೇಸ್ಬುಕ್ ಖಾತೆ
ಆರೋಪಿಯು ಕೇವಲ ನಕಲಿ ಪೊಲೀಸ್ ಅಧಿಕಾರಿಯಾಗಿ ಮಾತ್ರ ಮೋಸ ಮಾಡುತ್ತಿರಲಿಲ್ಲ. ಬದಲಿಗೆ, ಸುಂದರ ಹುಡುಗಿಯ ಚಿತ್ರ ಹಾಕಿಕೊಂಡು ಹುಡುಗಿಯರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆಯುತ್ತಿದ್ದ. ಇದರ ಮೂಲಕ ಹಿರಿಯ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಂಡು ರಾತ್ರಿ ವೇಳೆ ಹೆಣ್ಣಿನ ದನಿಯಲ್ಲಿ ಮಾತನಾಡುತ್ತಿದ್ದ. ಕಷ್ಟ ಎಂದು ಹೇಳಿಕೊಂಡು ತನ್ನ ಖಾತೆಗೆ ಅವರಿಂದ ಹಣ ಹಾಕಿಸಿಕೊಳ್ಳುತ್ತಿದ್ದ. ಇದೇ ರೀತಿ ಹುಬ್ಬಳ್ಳಿ- ಧಾರವಾಡ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರನ್ನು ಈತ ಯಾಮಾರಿಸಿ ಉಂಗುರ ಮಾಡಿಸಿಕೊಂಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ಪ್ರಕರಣಗಳು ಬೆಳಕಿಗೆ
ಪರಿಚಯಸ್ಥರೊಬ್ಬರಿಂದ ನಾರಾಯಣಗೌಡ ಅವರ ಪುತ್ರ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ವಿಷಯ ತಿಳಿದ ಆರೋಪಿ ಸಿದ್ಧಪ್ಪ ಅವರನ್ನು ವಂಚಿಸಲು ಬಂದಿದ್ದಾನೆ. ಈ ತಂತ್ರಗಾರಿಕೆಯಿಂದಲೇ ಈತ ಇತರರನ್ನು ವಂಚಿಸಿರುವ ಸಾಧ್ಯತೆ ಇದೆ. ಇನ್ನಷ್ಟು ವಿಚಾರಣೆ ಬಳಿಕ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications