ಹಳೆಮಿರ್ಲೆ-ನರಚನಹಳ್ಳಿ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ!
ಮೈಸೂರು, ಅಕ್ಟೋಬರ್ 03: ಕೆ.ಆರ್.ನಗರ ತಾಲೂಕಿನ ಹಳೆಮಿರ್ಲೆ-ನರಚನಹಳ್ಳಿ ಕೆರೆಯಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದರಿಂದ ಈ ವ್ಯಾಪ್ತಿಯ ಜನ ಭಯಭೀತರಾಗಿದ್ದರೆ, ಮತ್ತೆ ಕೆಲವರು ಕುತೂಹಲದಿಂದ ಮೊಸಳೆ ವೀಕ್ಷಿಸಲು ಕೆರೆಯತ್ತ ಧಾವಿಸುತ್ತಿದ್ದಾರೆ.
ಈ ಬಾರಿ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ಎಲ್ಲೆಡೆಯೂ ತುಂಬಿ ತುಳುಕುತ್ತಿರುವ ಕೆರೆಗಳು ಕಂಡು ಬರುತ್ತಿವೆ. ಕೆರೆಗಳು ಬತ್ತಿದ ಕಾರಣ ನೀರು ಅರಸಿಹೋಗಿದ್ದ ಜಲಚರಗಳು ಮತ್ತೆ ಕೆರೆಗಳತ್ತ ಮುಖಮಾಡಿವೆ.

ಇದೆಲ್ಲದರ ನಡುವೆ ಹಳೆಮಿರ್ಲೆ-ನರಚನಹಳ್ಳಿ ಕೆರೆಯಲ್ಲಿ ಮೊಸಳೆಯೊಂದು ಬಂದು ಸೇರಿಕೊಂಡಿದ್ದು, ಅದು ನೀರಿನಲ್ಲಿ ಮುಳುಗಿ ಏಳುತ್ತಿರುವುದನ್ನು ಗ್ರಾಮಸ್ಥರೇ ನೋಡಿದ್ದಾರೆ. ಈ ಕುರಿತು ನರಚನಹಳ್ಳಿ ಗ್ರಾ.ಪಂ.ಗೆ ವಿಷಯ ತಿಳಿಸಿದ್ದು, ಜಾನುವಾರು ಸೇರಿ ಯಾರೂ ಕೆರೆಗೆ ಇಳಿಯದಂತೆ ಗ್ರಾ.ಪಂ.ನಿಂದ ಡಂಗೂರ ಹೊಡೆಸಲಾಗಿದೆ. ವಿಷಯ ತಿಳಿದ ಜನರು ತಂಡೋಪತಂಡವಾಗಿ ಕುತೂಹಲದಿಂದ ಕೆರೆಯ ಬಳಿ ತೆರಳಿ ಕೆರೆಯಲ್ಲಿ ಅಡ್ಡಾಡುತ್ತಿರುವ ಮೊಸಳೆ ದರ್ಶನ ಮಾಡಿಕೊಂಡು ತೆರಳುತ್ತಿದ್ದಾರೆ.
ಈ ಕುರಿತು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸಂತೋಷ್ ಮಾತನಾಡಿ ನಾನು ಖುದ್ದು ಕೆರೆ ಬಳಿ ತೆರಳಿ ಮೊಸಳೆಯಿರುವುದನ್ನು ಖಚಿತಪಡಿಸಿಕೊಂಡೆ. ಮೊಸಳೆ ಸೆರೆಹಿಡಿಯಲು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದೇನೆ. ಈ ವಿಚಾರವನ್ನು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೂ ತಂದು ಸೂಕ್ತ ಕ್ರಮಕ್ಕಾಗಿ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.
ಇನ್ನೊಂದೆಡೆ ವಲಯ ಅರಣ್ಯಾಧಿಕಾರಿ ಕುಮಾರ್ ಅವರು ಮೊಸಳೆ ಸೆರೆಹಿಡಿಯುವ ಸಂಬಂಧ ತಾನು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರಿದ್ದು, ಮೊಸಳೆಯನ್ನು ಹೇಗೆ ಹಿಡಿಯಬೇಕೆಂಬುದನ್ನು ಪರಿಣಿತರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications