ಸುಧಾಮೂರ್ತಿ, ಬಿ ಸರೋಜಾದೇವಿ ಸೇರಿ 9 ಮಂದಿಗೆ ಜಯಚಾಮರಾಜ ಒಡೆಯರ್ ಸ್ಮರಣಾರ್ಥ ಪ್ರಶಸ್ತಿ
ಮೈಸೂರು, ಜುಲೈ 17: ಮೈಸೂರು ಅರಸ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮಶತಾಬ್ದಿ ಪ್ರಯುಕ್ತ ಮೈಸೂರಿನ ಅರಮನೆಯ ದರ್ಬಾರ್ ಹಾಲ್ ನಲ್ಲಿ ನಾಳೆ, ಜುಲೈ 18ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 9 ಜನರಿಗೆ ಶ್ರೀ ಜಯಚಾಮರಾಜ ಒಡೆಯರ್ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಜನ್ಮಶತಾಬ್ದಿ ಕಾರ್ಯಕ್ರಮವನ್ನು ನಾಳೆ ಬೆಳಿಗ್ಗೆ 11.15ಕ್ಕೆ ರಾಜ್ಯಪಾಲ ವಜೂಬಾಯಿ ವಾಲಾವರು ಉದ್ಘಾಟಿಸಲಿದ್ದಾರೆ. ರಾಜಮಾತೆ ಪ್ರಮೋದಾದೇವಿ ಒಡೆಯರ್ ಮತ್ತು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಇದೇ ವೇಳೆ ಆಕಾಶವಾಣಿಯಲ್ಲಿ ಬಿತ್ತರಿಸಿರುವ ಜಯಚಾಮರಾಜ ಒಡೆಯರ್ ಅವರ 94 ಸಂಗೀತ ಸಂಯೋಜನೆಗಳ ಸಿ.ಡಿಯನ್ನು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಗೆ ನೀಡಲಾಗುವುದು.

ಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆಗೈದಿರುವ ಪ್ರೊ.ಎಲ್.ಶಿವರುದ್ರಪ್ಪ (ತತ್ವಶಾಸ್ತ್ರ), ಬಿ.ಎನ್.ಎಸ್.ಅಯ್ಯಂಗಾರ್ (ಯೋಗ), ಪ್ರೊ.ಎಂ.ಎ. ಲಕ್ಷ್ಮಿತಾತಾಚಾರ್ ಶಾಸ್ತ್ರಿ (ಸಂಸ್ಕೃತ), ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ (ಕನ್ನಡ), ಬಿ. ಸರೋಜಾದೇವಿ (ಸಿನಿಮಾ), ಸುಧಾಮೂರ್ತಿ (ಸಮಾಜಕ್ಕೆ ಅತ್ಯುತ್ತಮ ಕೊಡುಗೆ), ಸೈಯದ್ ಘನಿ ಖಾನ್ (ಕೃಷಿ), ಅಜಯ್ ದೇಸಾಯಿ (ವನ್ಯಜೀವಿ) ಮತ್ತು ಪ್ರಣವಿ ಅರಸ್ ( ಕ್ರೀಡಾಪಟು ) ಅವರಿಗೆ ಜಯಚಾಮರಾಜ ಒಡೆಯರ್ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಇದಕ್ಕೂ ಮುನ್ನ ಜಗನ್ಮೋಹನ ಅರಮನೆಯಲ್ಲಿ ಬೆಳಿಗ್ಗೆ 10.30ಕ್ಕೆ ರಾಜ್ಯಪಾಲ ವಜೂಬಾಯಿ ವಾಲಾ ಅವರು ನವೀಕರಿಸಲಾದ ಶ್ರೀ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯನ್ನು ಉದ್ಘಾಟಿಸಲಿದ್ದಾರೆ.












Click it and Unblock the Notifications