84ನೇ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ
ಮೈಸೂರು, ನವೆಂಬರ್ 26 : 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿದ್ಯಾಕೇಂದ್ರವಾದ ಧಾರವಾಡದಲ್ಲಿ ನಡೆಯಲಿದೆ. ಹಾವೇರಿ, ಬಳ್ಳಾರಿ, ವಿಜಯಪುರ, ಚಿಕ್ಕಮಗಳೂರು, ಕೋಲಾರ ಜಿಲ್ಲೆಗಳು ಸಮ್ಮೇಳನದ ಅತಿಥ್ಯ ವಹಿಸಲು ಬಯಸಿದ್ದವು.
ಮೈಸೂರಿನಲ್ಲಿ ನಡೆಯುತ್ತಿರುವ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಶನಿವಾರ, ಮುಂದಿನ ಸಮ್ಮೇಳನವನ್ನು ಯಾವ ಜಿಲ್ಲೆಯಲ್ಲಿ ಆಯೋಜಿಸಬೇಕು? ಎಂದು ಸಭೆ ಸೇರಿ ನಿರ್ಣಯ ಕೈಗೊಳ್ಳಲಾಗಿದೆ.
ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ

ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಹುಮತದಿಂದ ಧಾರವಾಡದಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಈ ಕುರಿತು ಅಧಿಕೃತ ಘೋಷಣೆ ಮಾಡಿದರು.
'60 ವರ್ಷಗಳ ಬಳಿಕ ಧಾರವಾಡದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಹಾವೇರಿ, ಬಳ್ಳಾರಿ, ಬಿಜಾಪುರ, ಚಿಕ್ಕಮಂಗಳೂರು, ಕೋಲಾರ ಸೇರಿದಂತೆ ಹಲವು ಜಿಲ್ಲೆಯ ಕಸಾಪ ಜಿಲ್ಲಾಧ್ಯಕ್ಷರು ತಮ್ಮ ಜಿಲ್ಲೆಯಲ್ಲಿ ಸಮ್ಮೇಳನ ನಡೆಸುವಂತೆ ಒತ್ತಾಯಿಸಿದರು' ಎಂದು ಮನು ಬಳಿಗಾರ್ ಹೇಳಿದರು.
'ಅಂತಿಮವಾಗಿ ಎಲ್ಲಾ ಸದಸ್ಯರು ಒಮ್ಮತದಿಂದ ಧಾರವಾಡ ಜಿಲ್ಲೆಯಲ್ಲಿ ಸಮ್ಮೇಳನ ಆಯೋಜನೆಗೆ ಸರ್ವಾನುಮತದಿಂದ ತೀರ್ಮಾನಿಸಿದ್ದೇವೆ. ಬೇಂದ್ರೆ ಅವರ ಹುಟ್ಟೂರು, ಚಂದ್ರಶೇಖರ ಪಾಟೀಲ ಅವರ ಜಿಲ್ಲೆಯಲ್ಲದೆ ನಾನೂ ಅದೇ ಜಿಲ್ಲೆಯವರಾಗಿರುವುದರಿಂದ ಧಾರವಾಡದಲ್ಲಿ ಅತ್ಯುತ್ತಮವಾಗಿ ಸಮ್ಮೇಳನ ಆಯೋಜಿಸುತ್ತೇವೆ' ಎಂದರು.
ಇದೇ ವೇಳೆ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲ ಅವರು ಮಾತನಾಡಿ, 'ಧಾರವಾಡ ಜಿಲ್ಲೆಯಲ್ಲಿ ನನ್ನ ಜೀವನದ 60 ವರ್ಷ ಕಳೆದಿದ್ದೇನೆ. ಅದು ಸಾಹಿತ್ಯ, ಸಂಗೀತ, ಸಂಘರ್ಷಗಳಿಂದ ಕೂಡಿದ ಜಿಲ್ಲೆಯಾಗಿದ್ದು , ಸಮ್ಮೇಳನ ಆಯೋಜನೆಗೆ ತಕ್ಕ ಸೌಕರ್ಯಗಳೆಲ್ಲ ಇರುವುದರಿಂದ ಯಶಸ್ವಿಯಾಗಿ ಸಮ್ಮೇಳನ ಆಯೋಜಿಸುತ್ತೇವೆ' ಎಂದು ಹೇಳಿದರು.
ಕಾರ್ಯಕಾರಿ ಸಮಿತಿ ಸದಸ್ಯರಾದ ಕಸಾಪ ರಾಜ್ಯ ಗೌರವ ಕಾರ್ಯದರ್ಶಿ ವಾ.ಚ. ಚನ್ನೇಗೌಡ, ಗೌರವ ಕಾರ್ಯದರ್ಶಿ ರಾಜಶೇಖರ ಹತಗುಂದಿ, ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ, ವೈ.ಡಿ. ರಾಜಣ್ಣ ಉಪಸ್ಥಿತರಿದ್ದರು.












Click it and Unblock the Notifications