ಮೈಸೂರು: ನಕಲಿ ಸಿಸಿಬಿ ಪೊಲೀಸರು ಅಸಲಿ ಸಿಸಿಬಿ ಪೊಲೀಸರ ಬಲೆಗೆ
ಮೈಸೂರು, ಜುಲೈ 18 : ಕಳೆದ ತಿಂಗಳು ಸಿಸಿಬಿ(ಕೇಂದ್ರ ಅಪರಾಧ ವಿಭಾಗ) ಪೊಲೀಸರ ಸೋಗಿನಲ್ಲಿ ಬಂದು 30 ಲಕ್ಷ ಲಪಟಾಯಿಸಿದ್ದ 8 ಮಂದಿಯನ್ನಷ್ಟೇ ಅಲ್ಲದೇ ಕೆಲವು ಆರೋಪಗಳಲ್ಲಿ ಗುರುತಿಸಿಕೊಂಡ 7 ಆರೋಪಿಗಳನ್ನು ಮೈಸೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇವರು, ತಾವು ಸಿಸಿಬಿ ಪೊಲೀಸರು ಎಂದು ಸುಳ್ಳುಹೇಳಿ, ಕಚೇರಿಯೊಂದರಲ್ಲಿ 30 ಲಕ್ಷ ರೂ.ದೋಚಿದ್ದರು.
ವಿ ವಿ ಪುರಂ ನಲ್ಲಿ ನಡೆದಿದ್ದ ಹಗಲು ದರೋಡೆ ಆರೋಪಿಗಳು ಸೇರಿದಂತೆ 15 ಮಂದಿಯನ್ನ ಬಂಧಿಸಲಾಗಿದೆ, ವಿವಿಪುರಂ ಬಳಿ 30 ಲಕ್ಷ ಹಣವನ್ನ 8 ಮಂದಿ ದರೋಡೆಕೊರರು ದೋಚಿದ್ದರು. ಇದೀಗ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಬಂಧಿತರಿಂದ 8,69,900 ನಗದು, ಕೃತ್ಯಕ್ಕೆ ಬಳಸಿದ್ದ ವಾಹನ, ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಚಾಲಾಕಿ ಕಳ್ಳರು!
8 ಮಂದಿ ಆರೋಪಿಗಳ ಜತೆಗೆ ಮೊಬೈಲ್ IMEI(International Mobile Equipment Identity number) ನಂಬರ್ ಬದಲಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಹ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಮೈಸೂರು ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್, ವಿವಿಧೆಡೆ ದರೋಡೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಆರೋಪಿಯ ಕೈವಾಡವಿದೆ. ಪೆರೋಲ್ ಮೇಲೆ ಬಂದಿದ್ದ ಆರೋಪಿಯೂ ಸಹ ಈ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಖಲೀಮ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದನು. ಒಂದು ತಿಂಗಳ ಪೆರೋಲ್ ಗೆ ಬಂದು ಕೃತ್ಯವಸಗಿದ್ದ ಎಂದು ತಿಳಿಸಿದ್ದಾರೆ.
ಮೈಸೂರು ನಗರ ಪೊಲೀಸರು ಜುಲೈ-2017ರ ಮಾಹೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 8 ಜನ ದರೋಡೆಕೋರರು, 5 ಮಂದಿ ಮೊಬೈಲ್ ಸ್ನಾಚಿಂಗ್ ಮತ್ತು ಕಳ್ಳತನ ಮಾಡುತ್ತಿದ್ದ ಆರೋಪಿಗಳು ಹಾಗೂ ಕಳ್ಳತನ ಮಾಡಿದ್ದ ಮೊಬೈಲ್ ಫೋನ್ ಗಳ ಐ.ಎಂ.ಇ.ಐ ನಂಬರ್ ಬದಲಾವಣೆ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಒಟ್ಟು 12,61,900ರೂ.ಮೌಲ್ಯದ 32 ಮೊಬೈಲ್ ಗಳನ್ನು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಸಿಸಿಬಿ ಪೊಲೀಸರು ಎಂಟು ಜನ ದರೋಡೆಕೋರರನ್ನು ಬಂಧಿಸಿ 8,69,900 ನಗದು ,1 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಟಾಟಾ ಸುಮೋ ಮತ್ತು 5 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅವ್ವಾ ಮಾದೇಶ್ ಆಸ್ತಿ ಮುಟ್ಟುಗೋಲು
ಹುಣಸೂರು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸ ಅನುಭವಿಸುತ್ತಿರುವ ನಗರ ಪಾಲಿಕೆ ಮಾಜಿ ಸದಸ್ಯ ಸಿ. ಮದೇಶ್ ಅಲಿಯಾಸ್ ಅವ್ವ ಮಾದೇಶ್ ಗೆ ಸೇರಿದ 5.35 ಕೋಟಿ ಮೌಲ್ಯದ ಸ್ವತ್ತುಗಳು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕೊಲೆ, ಅಪರಾಧಿಕ ಒಳಸಂಚು, ಬೆದರಿಕೆ ಮೊದಲಾದ ಕೃತ್ಯಗಳಿಂದ ತನ್ನ ಹಾಗೂ ಕುಟುಂಬವರ ಹೆಸರಿನಲ್ಲಿ ಮಾದೇಶ್ ಮಾಡಿದ್ದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಮಾದೇಶ್ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮೈಸೂರು ನಗರ ಪೊಲೀಸ್ ವತಿಯಿಂದ ಎನ್ ಫೋರ್ಸ್ ಮೆಂಟ್ ಡೈರಕ್ಟರೇಟ್ (ED) ರವರಿಗೆ ಕೋರಿಕೆ ಪತ್ರ ಸಲ್ಲಿಸಲಾಗಿತ್ತು. ಈ ಕೋರಿಕೆಯನ್ನು ಪರಿಗಣಿಸಿ ಡೈರಕ್ಟರೇಟ್ ಅವ್ವ ಮಾದೇಶ್ ಗೆ ಸೇರಿದ ಒಟ್ಟು 5.35 ಕೋಟಿ ಮೌಲ್ಯದ ಜಮೀನು ಮತ್ತು ಕಟ್ಟಡಗಳ ಮುಟ್ಟುಗೋಲು ಹಾಕಿದ್ದಾರೆ. ಈ ಸಂಬಂಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಮಾದೇಶ್ ಗೆ ಸೇರಿದ ಮತ್ತಷ್ಟು ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು.












Click it and Unblock the Notifications