ಗೊಮ್ಮಟಗಿರಿ ಗೊಮ್ಮಟೇಶ್ವರನಿಗೆ ವೈಭವದ ಮಹಾಮಸ್ತಕಾಭಿಷೇಕ
ಮೈಸೂರು, ಡಿಸೆಂಬರ್ 03 : ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಗೊಮ್ಮಟಗಿರಿಯಲ್ಲಿರುವ ಗೊಮ್ಮಟೇಶ್ವರನಿಗೆ ಸಾವಿರಾರು ಜನರ ಸಮ್ಮುಖದಲ್ಲಿ 69ನೇ ಮಸ್ತಕಾಭಿಷೇಕ ನಡೆಯಿತು. ಗೊಮ್ಮಟೇಶ್ವರನಿಗೆ ನಡೆದ ಪ್ರತಿ ಅಭಿಷೇಕದ ಸಂದರ್ಭದಲ್ಲೂ ನೆರೆದಿದ್ದ ಭಕ್ತರು ಬಾಹುಬಲಿಕೀ ಜೈ ಎನ್ನುತ್ತಾ ಅಭಿಷೇಕವನ್ನು ಕಣ್ತುಂಬಿಕೊಂಡರು.
ಬೆಟ್ಟದ ಕೆಳಗಿನ ಸಭಾಭವನದ ಆವರಣದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಂಬುಜ ಶ್ರೀ ಕ್ಷೇತ್ರದ ಡಾ.ದೇವಕೀರ್ತಿಭಟ್ಟಾರಕ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆದ ಧಾರ್ಮಿಕಸಭೆ ನಂತರ ಮಧ್ಯಾಹ್ನ ಬೆಟ್ಟದ ಮೇಲಿನ ಗೊಮ್ಮಟೇಶ್ವರನಿಗೆ ವಿವಿಧ ಅಭಿಷೇಕಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು.
ಗೊಮ್ಮಟೇಶ್ವರನಿಗೆ ಮೊದಲು ಜಲಾಭಿಷೇಕ ಸಮರ್ಪಿಸಿದ ನಂತರ ಕ್ಷೀರ, ಎಳನೀರು, ಕಷಾಯ, ಅರಿಶಿನ, ಕುಂಕುಮ, ಭತ್ತದ ಅರಳು, ಸಕ್ಕರೆ, ಕಲ್ಕಚೂರ್ಣ(ಅಕ್ಕಿಹಿಟ್ಟು,) ಅಷ್ಟಗಂಧ, ಚಂದನ, ಕಂಕಚೂರ್ಣ, ಪುಷ್ಪ, ಕನಕವೃಷ್ಟಿ ಸೇರಿದಂತೆ ವಿವಿಧ ಅಭಿಷೇಕ ನೆರವೇರಿಸಲಾಯಿತು.

ಗೊಮ್ಮಟನ ಅಭಿಷೇಕ ವೀಕ್ಷಿಸಲು ಸುತ್ತಮುತ್ತಲ ಗ್ರಾಮಗಳವರಲ್ಲದೆ, ದೂರದ ಊರುಗಳಿಂದ ಬಂದಿದ್ದ ಮಂದಿ ಬೆಟ್ಟ ಹತ್ತಿ ದರ್ಶನ ಪಡೆದರು. ತೀರ್ಥಂಕರರ ಪಾದಕೂಟಕ್ಕೆ ಭೇಟಿ ನೀಡಿ ನಮಿಸಿದರು. ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಹರಾಜಿನಲ್ಲಿ ಕಳಸ ತಮ್ಮದಾಗಿಸಿಕೊಂಡಿದ್ದ ಬೆಂಗಳೂರಿನ ನಾಗರತ್ನ, ವಿನುತಾ ಜೈನ್, ಶ್ರೀಧರ್, ಕಿರಣ್ ಕುಮಾರ್, ಸಂತೋಷಕುಮಾರ್, ಹುಣಸೂರಿನ ಮೋಹನ್ ಲಾಲ್ ಮಾರು ಅವರು ಕುಟುಂಬ ಸಮೇತರಾಗಿ ಸ್ವಾಮೀಜಿಗಳೊಂದಿಗೆ ಬಾಹು ಬಲಿಸ್ವಾಮಿಗೆ ಅಭಿಷೇಕ ನೆರವೇರಿಸಿದರು.
ಹಿಂದೆಲ್ಲಾ ಅರ್ಚಕರು ಹಾಗೂ ಹರಾಜಿನಲ್ಲಿ ಕಳಸ ತಮ್ಮದಾಗಿಸಿಕೊಂಡ ಕುಟುಂಬದವರಿಗೆ ಮಾತ್ರ ಅಭಿಷೇಕಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು, ಆದರೆ ಇದೇ ಪ್ರಥಮ ಬಾರಿಗೆ ಸ್ವಾಮೀಜಿಗಳೊಂದಿಗೆ ಮಹಿಳೆಯರಿಗೂ ಗೊಮ್ಮಟೇಶ್ವರನಿಗೆ ಅಭಿಷೇಕ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಮಸ್ತಕಾಭಿಷೇಕಕ್ಕೆ ಬಂದ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಮಸ್ತಕಾಭಿಷೇಕ ಮಹೋತ್ಸವಕ್ಕೆ ಸುತ್ತಮುತ್ತಲ ಗ್ರಾಮಗಳಲ್ಲದೆ, ದೂರದ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಬೆಟ್ಟ ಹತ್ತಿ ಪೂಜೆ ಸಲ್ಲಿಸಿ ಭಕ್ತಿ ಮೆರೆದರು. ಯುವ ಸಮೂಹ ತೀರ್ಥಂಕರರ ಪಾದಕೂಟ, ಜಲ ಮಂದಿರ ಇನ್ನಿತರ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದು ಸಾಮಾನ್ಯವಾಗಿತ್ತು.












Click it and Unblock the Notifications