ವಿಷಪ್ರಸಾದ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಪ್ರತಿಭಟನೆ
ಮೈಸೂರು, ಜನವರಿ 2: ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ನಡೆದ ವಿಷ ಪ್ರಸಾದ ದುರಂತದಲ್ಲಿ ಅಸ್ವಸ್ಥರಾಗಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ಪೈಕಿ ಗುಣಮುಖರಾಗಿರುವ ಆರು ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಜೆಎಸ್ಎಸ್ ಆಸ್ಪತ್ರೆ , ಅಪೊಲೊ, ಕಾವೇರಿ ಆಸ್ಪತ್ರೆಯಿಂದ ತಲಾ ಒಬ್ಬರು, ಡಿಆರ್ ಎಂ ಆಸ್ಪತ್ರೆಯಿಂದ ಮೂವರು ಹೊಸ ವರ್ಷದ ದಿನ ಬಿಡುಗಡೆಯಾಗಿದ್ದಾರೆ.
ಹನೂರು ತಾಲೂಕಿನ ಎಂಜಿ ದೊಡ್ಡಿಯವರಾದ ಮಲ್ಲಿಗೆ, ಪಳನಿಯಮ್ಮ, ವಡ್ಡರ ದೊಡ್ಡಿ ಯವರಾದ ಕಂದಸ್ವಾಮಿ, ಮಹಾದೇವಿ ಹೊಸ್ತೂರು ಗ್ರಾಮದವರಾದ ಜಯಲಕ್ಷ್ಮೀ ಹಾಗೂ ಕೆಂಪರಾಜಮ್ಮ ಅವರು ಡಿಸ್ಚಾರ್ಜ್ ಆಗಿದ್ದಾರೆ.

ಉಳಿದಂತೆ ಜೆಎಸ್ಎಸ್ ಆಸ್ಪತ್ರೆಯಲ್ಲಿ ಒಬ್ಬರು, ಸುಯೋಗ ಆಸ್ಪತ್ರೆಯಲ್ಲಿ ಇಬ್ಬರು , ಕಾವೇರಿ ಆಸ್ಪತ್ರೆಯಲ್ಲಿ ಇಬ್ಬರು, ಕೊಲಂಬಿಯಾ ಆಸ್ಪತ್ರೆಯಲ್ಲಿ ಒಬ್ಬರು, ನಾರಾಯಣ ಹೃದಯಾಲಯದಲ್ಲಿ ಮೂವರು ಸೇರಿ ಒಂಬತ್ತು ಮಂದಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರಲ್ಲಿ ಒಬ್ಬರು ವೆಂಟಿಲೇಟರ್ ನಲ್ಲಿ ಇಬ್ಬರು ಐಸಿಯುನಲ್ಲಿ ಇದ್ದಾರೆ. ಈ ದುರಂತದಲ್ಲಿ 17 ಮಂದಿ ಸಾವಿಗೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಕರಣದ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ,ಅಂಬಿಕಾ,ದೊಡ್ಡಯ್ಯ, ಮತ್ತು ಮಾದೇಶ್ ರನ್ನು ಜೈಲಿಗಟ್ಟಲಾಗಿದೆ.
ವಿಷಪ್ರಸಾದ: ಸಂತ್ರಸ್ತರಾದ ಕುಟುಂಬಕ್ಕೆ ಧೈರ್ಯ ತುಂಬಿದ ಸಿಎಂ
ಇತ್ತ ಪ್ರಕರಣದಲ್ಲಿ ಭಾಗಿಯಾದ ಪಾತಕಿಗಳಿಗೆ ಜಾಮೀನು ನೀಡದೆ ಗಲ್ಲು ಶಿಕ್ಷೆ ನೀಡುವಂತೆ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ನಗರದ ಕೋರ್ಟ್ ಎದುರಿನ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, 17 ಅಮಾಯಕ ಜೀವಗಳ ಸಾವಿಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಆರೋಪಿಗಳ ಆಸ್ತಿಯನ್ನ ಮುಟ್ಟುಗೋಲು ಹಾಕಿ ಮೃತರ ಕುಟುಂಬಕ್ಕೆ ನೀಡುವಂತೆ ಆಗ್ರಹಿಸಿದ್ದಾರೆ. ಆರೋಪಿಗಳು ಪ್ರಭಾವಿಗಳಾಗಿದ್ದು, ಸಾಕ್ಷಿಗಳನ್ನ ನಾಶ ಮಾಡುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.












Click it and Unblock the Notifications