ಪಿರಿಯಾಪಟ್ಟಣದಲ್ಲಿ ಯುವಕನ ಬರ್ಬರ ಹತ್ಯೆ
ಮೈಸೂರು, ಅಕ್ಟೋಬರ್ 12 : ಮದ್ಯ ವ್ಯಸನಿ ಯುವಕನೊಬ್ಬನನ್ನು ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬಸಲಾಪುರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಬಸಲಾಪುರ ಗ್ರಾಮದ ಸ್ವಾಮಿಗೌಡ ಎಂಬುವರ ಪುತ್ರ ವೆಂಕಟೇಶ್ (30) ಕೊಲೆಯಾದ ಯುವಕ. ಈತನ ಮೃತದೇಹ ಗ್ರಾಮದ ರಸ್ತೆ ಬದಿಯ ಹೊಲವೊಂದರಲ್ಲಿ ಪತ್ತೆಯಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಮೈಸೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರುದ್ರಮುನಿ, ಹುಣಸೂರು ಉಪವಿಭಾಗದ ಡಿವೈಎಸ್ ಪಿ ಭಾಸ್ಕರ್ ರೈ, ಸರ್ಕಲ್ ಇನ್ಸ್ ಪೆಕ್ಟರ್ ಹೆಚ್.ಎನ್.ಸಿದ್ದಯ್ಯ ಭೇಟಿ ನೀಡಿ ಪರಿಶೀಲಿಸಿದರು.
ಮನೆಯಲ್ಲೇ ಕೊಲೆ?: ಗ್ರಾಮದ ಹೊರವಲಯದಲ್ಲಿರುವ ಸ್ವಾಮಿಗೌಡರ ಮನೆಯಲ್ಲೇ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮನೆಯಲ್ಲೇ ಕೊಲೆಯಾಗಿದೆ ಎಂಬುದಕ್ಕೆ ದಾರಿಯುದ್ದಕ್ಕೂ ರಕ್ತ ಚೆಲ್ಲಿರುವುದಲ್ಲದೆ ಮನೆಯಲ್ಲಿ ರಕ್ತಸ್ರಾವದ ಬಟ್ಟೆಯೂ ಸಿಕ್ಕಿದೆ ಎನ್ನಲಾಗಿದೆ.
ಮನೆಯಲ್ಲೇ ಕೊಲೆಗೈದು ಹೊಲದಲ್ಲಿ ತಂದು ಹಾಕಲಾಗಿದೆಯಾ ಎಂಬುದರ ಬಗ್ಗೆ ತನಿಖೆಯಿಂದ ತಿಳಿದು ಬರಬೇಕಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications