ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: 30 ಅಭ್ಯರ್ಥಿಗಳು ಕಣದಲ್ಲಿ
ಮೈಸೂರು, ಮಾರ್ಚ್ 27:ಮೈಸೂರು-ಕೊಡಗು ಕ್ಷೇತ್ರದ ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ನಿನ್ನೆ ಮಂಗಳವಾರ (ಮಾ.26) ಗಡುವು ಮುಗಿದಿದ್ದು, 30 ಸ್ಪರ್ಧಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಇವರಲ್ಲಿ 8 ರಾಜಕೀಯ ಪಕ್ಷಗಳ 10 ಅಭ್ಯರ್ಥಿಗಳು ಹಾಗೂ ಪಕ್ಷೇತರ 20 ಅಭ್ಯರ್ಥಿಗಳು ಇದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೂವರು ಮಹಿಳೆಯರೂ ಇದರಲ್ಲಿ ಸೇರಿದ್ದಾರೆ. ಕಾಂಗ್ರೆಸ್ ಹಾಗೂ ಬಿಎಸ್ಪಿಯಿಂದ ತಲಾ ಇಬ್ಬರು ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಿ ಫಾರಂ ಸಲ್ಲಿಸಿದವರಿಗೆ ಪಕ್ಷದ ಚಿಹ್ನೆ ಸಿಗಲಿದೆ.
ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ, ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್, ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿ ಅಭ್ಯರ್ಥಿ ಅಯೂಬ್ ಖಾನ್ ತಲಾ ನಾಲ್ಕು ಸೆಟ್ಗಳಲ್ಲಿ ನಾಮಪತ್ರವನ್ನು ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಅಭಿರಾಂ ಜಿ.ಶಂಕರ್ ಅವರಿಗೆ ಸಲ್ಲಿಸಿದ್ದಾರೆ.

ಸೋಮವಾರ ನಾಮಪತ್ರ ಸಲ್ಲಿಸಿದ್ದ ಪ್ರತಾಪಸಿಂಹ ಹಾಗೂ ವಿಜಯಶಂಕರ್ ಅವರು ಮಂಗಳವಾರ ಕೂಡ ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದು ಉಮೇದುವಾರಿಕೆ ಸಲ್ಲಿಸಿದರು. ಜೆ.ಜೆ.ಆನಂದ್ ಎಂಬುವವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಅಲ್ಲದೇ, ಪಕ್ಷೇತರ ಅಭ್ಯರ್ಥಿಯಾಗಿಯೂ ನಾಮಪತ್ರ ನೀಡಿದ್ದಾರೆ.
ಬಿಎಸ್ಪಿ ಪಕ್ಷದಿಂದ ಡಾ.ಬಿ.ಚಂದ್ರು ಹಾಗೂ ಎಂ.ಸಿದ್ದರಾಜು ಉಮೇದುವಾರಿಕೆ ಸಲ್ಲಿಸಿದ್ದಾರೆ. ಮಾರ್ಚ್ 27ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು 29 ಕೊನೆಯ ದಿನವಾಗಿದೆ. ಏ. 18ರಂದು ಮತದಾನ ನಡೆಯಲಿದೆ.
2014ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಒಟ್ಟು 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ಏಳು ಮಂದಿ ಪಕ್ಷೇತರ ಅಭ್ಯರ್ಥಿಗಳು ವಾಪಸ್ ಪಡೆದಿದ್ದರು. ಇಂದು ಬೆಳಗ್ಗಿನಿಂದ ನಾಮಪತ್ರ ಪರಿಶೀಲನೆ ಆರಂಭವಾಗಿದ್ದು, ಮುಕ್ತಾಯ ಸಮಯ ಎಂಬುದು ಇರುವುದಿಲ್ಲ.












Click it and Unblock the Notifications