ನಂಜನಗೂಡಿನಲ್ಲಿ ಕಾಟ ಕೊಡುತ್ತಿದ್ದ ಚಿರತೆ ಶವವಾಗಿ ಪತ್ತೆ
ಮೈಸೂರು, ಜುಲೈ 10: ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸಿದ್ದೇಗೌಡನಹುಂಡಿ ಗ್ರಾಮ ಹಾಗೂ ಸುತ್ತಮುತ್ತ ಓಡಾಡುತ್ತಾ ಜನತೆಯಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯೊಂದರ ಶವ ಇಂದು ಅನುಮಾನಸ್ಪದ ರೀತಿಯಲ್ಲಿ ಗ್ರಾಮದ ಶ್ರೀಪಾದ ಎಂಬುವರ ಜಮೀನಿನಲ್ಲಿ ಪತ್ತೆಯಾಗಿದೆ.
ಕಳೆದ ಎರಡು ತಿಂಗಳಿಂದ ಸಿದ್ದೇಗೌಡನ ಹುಂಡಿ ಗ್ರಾಮದ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಚಿರತೆ, ನಾಯಿಗಳನ್ನು ಹೊತ್ತೊಯ್ದಿತ್ತು. ಇದರಿಂದ ಗ್ರಾಮದ ಜನರೂ ಹೊರಗೆ ತಿರುಗಾಡಲು ಭಯಪಡುವಂತಾಗಿತ್ತು.

ಇಂದು ಜಮೀನಿನಲ್ಲಿ ಚಿರತೆ ಶವ ಪತ್ತೆಯಾಗಿದೆ. ಈ ವಿಷಯ ತಿಳಿದು ನಂಜನಗೂಡು ವಲಯ ಅರಣ್ಯಾಧಿಕಾರಿ ಲೋಕೇಶ್ ಮೂರ್ತಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಪಶು ವೈದ್ಯಾಧಿಕಾರಿಯಿಂದ ಸ್ಥಳದಲ್ಲೇ ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಇದು ಅಂದಾಜು ಮೂರು ವರ್ಷ ಪ್ರಾಯದ ಹೆಣ್ಣು ಚಿರತೆ ಆಗಿದ್ದು, ಮರಣೋತ್ತರ ವರದಿ ಬಂದ ನಂತರವೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಲೋಕೇಶ್ ತಿಳಿಸಿದ್ದಾರೆ.
ಒಂದು ವರ್ಷದ ಹಿಂದೆ ನಂಜನಗೂಡು ಸಮೀಪದ ಹಲ್ಲರೆ ಗ್ರಾಮದ ಜಮೀನಿನಲ್ಲಿ ಮೂರು ಚಿರತೆಗಳನ್ನು ಕಿಡಿಗೇಡಿಗಳು ವಿಷವಿಕ್ಕಿ ಕೊಂದಿದ್ದರು.












Click it and Unblock the Notifications