ರಸ್ತೆ ವಿಭಜಕಕ್ಕೆ ಡಿಕ್ಕಿ: ಕಾರು ಪಲ್ಟಿ, ಮೂವರು ಸಾವು
ಮೈಸೂರು, ಅಕ್ಟೋಬರ್ 17: ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಕುಶಾಲನಗರ ಬಳಿಯ ಬಸವನಹಳ್ಳಿಯಲ್ಲಿ ಸಂಭವಿಸಿದೆ. ಮೈಸೂರಿನ ಕೆ.ಜಿ. ಕೊಪ್ಪಲು ನಿವಾಸಿಗಳಾದ ನಂದೀಶ್(19), ಚಂದ್ರು(18), ಚೇತನ್ (19) ಸ್ಥಳದಲ್ಲೇ ಮೃತಪಟ್ಟವರು.
ಇನ್ನು ಪ್ರತಾಪ್, ಶಿವಕುಮಾರ್ ಮತ್ತು ಸುಹಾಸ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ರಾತ್ರಿ 1 ಗಂಟೆ ವೇಳೆ ಆರು ಯುವಕರು ಮಾರುತಿ ಬಲೇನೋ ಕಾರಿನಲ್ಲಿ (ಕೆ.ಎ 04 ಎಂಸಿ 7805) ಮಡಿಕೇರಿಯಿಂದ ಮೈಸೂರಿನತ್ತ ಬರುತ್ತಿದ್ದರು. ಈ ವೇಳೆ ಕುಶಾಲನಗರ ಬಳಿಯ ಬಸವನಹಳ್ಳಿಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.[ಕಾರು ಡಿಕ್ಕಿಯಾಗಿ ತಾಂಡವಪುರದ ನವವಿವಾಹಿತ ಸಾವು]

ಪರಿಣಾಮವಾಗಿ ಕಾರು ಸುಮಾರು ಮುನ್ನೂರು ಮೀಟರ್ ಸಾಗಿ, ಮಗುಚಿ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ನಂದೀಶ್, ಚಂದ್ರು, ಚೇತನ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ, ಕಾರಿನೊಳಗೆ ಸಿಲುಕಿದ್ದ ಪ್ರತಾಪ್, ಶಿವಕುಮಾರ್, ಸುಹಾಸ್ ಗಂಭೀರ ಗಾಯಗೊಂಡಿದ್ದರು.[ಕಬಿನಿ ನಾಲೆಗೆ ಉರುಳಿದ ಕಾರು: ಇಬ್ಬರು ಸಾವು]
ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ಗಾಯಾಳುಗಳನ್ನು ಹೊರತೆಗೆದು ಮೈಸೂರಿಗೆ ಸಾಗಿಸಿದ್ದಾರೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications