ಬರೋಬ್ಬರಿ 25 ಕೋಟಿ ರೂ ಮೌಲ್ಯದ ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನ: ಮೂವರ ಬಂಧನ
ಮೈಸೂರು, ಮೇ 23: ಬೆಲೆಬಾಳುವ ತಿಮಿಂಗಲದ ಅಂಬರ್ ಗ್ರೀಸ್( ತಿಮಿಂಗಿಲ ವಾಂತಿ) ಮಾರಾಟ ಮಾಡಲು ಪ್ರಯತ್ನಿಸಿದ್ದ ಮೂವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಎಸ್ಪಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, 9 ಕೆಜಿ, 821 ಗ್ರಾಂ ತೂಕದ ಅಂದಾಜು 25 ಕೋಟಿ ರೂ ಮೌಲ್ಯದ ಅಂಬರ್ ಗ್ರೀಸ್ ಅನ್ನು ಮೂವರು ವ್ಯಕ್ತಿಗಳು ಕೇರಳ ಮೂಲದಿಂದ ಎಚ್.ಡಿ ಕೋಟೆ ಗಡಿಯಲ್ಲಿ ತಂದು ಅದನ್ನು ಬೆಂಗಳೂರಿಗೆ ಸಾಗಿಸಲು ಪ್ಲಾನ್ ಮಾಡಿದ್ದರು.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚುವರಿ ತನಿಖೆಗೆ ವಿಶೇಷ ಪೊಲೀಸರ ತಂಡ ನಿಯೋಜಿಸಲಾಗಿದೆ ಎಂದು ತಿಳಿಸಿದರು. ಎಫ್ಎಸ್ಎಲ್ ವರದಿಯ ಆಧಾರದ ಮೇಲೆ ತಿಮಿಂಗಲದ ಅಂಬರ್ ಗ್ರೀಸ್ ಎನ್ನುವುದನ್ನು ಖಚಿತಪಡಿಸಲಾಗಿದೆ.
ಅರಣ್ಯ ಇಲಾಖೆ ನಡೆಸಿದ ಪರೀಕ್ಷೆಯಲ್ಲೂ ತಿಮಿಂಗಲದ ವಸ್ತು ಎನ್ನುವುದು ದೃಢವಾಗಿದೆ. ಮಾತ್ರವಲ್ಲದೇ ಅರಣ್ಯ ಇಲಾಖೆಯ ಮಾಹಿತಿ ಪ್ರಕರಣ ಇದರ ಮೌಲ್ಯ ಪ್ರಸ್ತುತ ದೇಶ-ವಿದೇಶದ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 1.50ರಿಂದ 2 ಕೋಟಿ ಬೆಲೆ ಬಾಳುತ್ತದೆ ಎಂದು ತಿಳಿಸಿದರು.

ಆರೋಪಿಗಳು ಬೇರೆ ವ್ಯಕ್ತಿಗಳಿಂದ ಈ ತಿಮಿಂಗಿಲದ ವಾಂತಿಯನ್ನು ಪಡೆದುಕೊಂಡು ಬೆಂಗಳೂರಿಗೆ ತೆರಳಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಈ ಪ್ರಕರಣದಲ್ಲಿ ಹಲವರು ಶಾಮೀಲಾಗಿರುವುದು ಕಂಡುಬಂದಿದೆ. ಹೀಗಾಗಿ ಸಮಗ್ರ ತನಿಖೆ ನಡೆಸಲಾಗುತ್ತಿದೆ.
ನ್ಯಜೀವಿ ಸಂರಕ್ಷಣೆ ಕಾಯಿದೆ ಪ್ರಕಾರ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅಂಬರ್ ಗ್ರೀಸ್ ಅನ್ನು ಸಾಗಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ, ಈ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಂದ ಹಲವಾರು ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಈ ಹಂತದಲ್ಲಿ ಕೆಲವನ್ನು ಹೇಳಲಾಗದು. ದುಬೈಗೆ ಸಾಗಿಸುವುದರಿಂದ ಅಂತಾರಾಷ್ಟ್ರೀಯ ಮಟ್ಟದ ಜಾಲವಾಗಿರಬಹುದೆಂಬ ಅನುಮಾನವಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ವಿವರಿಸಿದರು.
ಈ ವೇಖೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಎನ್.ನಂದಿನಿ, ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್, ಸೆನ್ ಪೊಲೀಸ್ ಠಾಣೆ ಪಿಐ ಪುರುಷೋತ್ತಮ್ ಹಾಜರಿದ್ದರು.












Click it and Unblock the Notifications