ಮೈಸೂರು ಮಹಾನಗರ ಪಾಲಿಕೆಯಲ್ಲಿ ಇನ್ನು ಮುಂದೆ ಮಹಿಳೆಯರ ಪಾರುಪತ್ಯ!
ಮೈಸೂರು, ಆಗಸ್ಟ್.04: ಮೈಸೂರು ನಗರ ಪಾಲಿಕೆ 65 ವಾರ್ಡ್ ಗಳಿಗೆ ಆಯ್ಕೆಯಾಗಿರುವ ಸದಸ್ಯರ ಪೈಕಿ 50 ಮಂದಿ ಹೊಸಬರೇ ಇದ್ದಾರೆ. ಈ ಪೈಕಿ 26 ಮಂದಿ ಮಹಿಳೆಯರೇ ಎಂಬುದು ವಿಶೇಷ. ಅವರೆಲ್ಲಾ ಹೊಸಬರು. 6 ಮಂದಿ ಮಾತ್ರ ಹಳಬರು. ಹಾಗೆಯೇ 23 ಮಂದಿ ಪುರುಷರು ಹೊಸಬರು ಮತ್ತು 10 ಮಂದಿ ಪುರುಷರು ಹಳಬರಿದ್ದಾರೆ.
ಬಹುಪಾಲು ಮಂದಿ ಮಾಜಿ ಮೇಯರ್ ಗಳು ಮತ್ತು ಹಿರಿಯ ಸದಸ್ಯರು ಸೋತಿರುವುದರಿಂದ ಹೊಸಬರದ್ದೇ ಪಾರುಪತ್ಯ. ಈ ಬಾರಿ ಮಹಿಳಾ ಮೀಸಲಾತಿ ಇರುವುದರಿಂದ 32 ಮಂದಿ ಆಯ್ಕೆಯಾಗಿದ್ದಾರೆ.
ಪಾಲಿಕೆ ಚುನಾವಣೆಯಲ್ಲಿ ವಿಜಯಿಗಳಾದ ಮಹಿಳಾ ಅಭ್ಯರ್ಥಿಗಳು "ನಾವು ಅಬಲೆಯರಲ್ಲ. ಆಡಳಿತದ ಗಂಧ ನಮಗೂ ತಿಳಿದಿದೆ. ಗಂಡನನ್ನು ಮುಂದೆ ಬಿಟ್ಟು ನಾಲ್ಕು ಗೋಡೆ ಮಧ್ಯೆ ಕೂರುವುದಿಲ್ಲ' ಎನ್ನುತ್ತಾರೆ.

ಪಿಎಚ್ ಡಿ ಮಾಡಿ ಸ್ವಾವಲಂಬಿ ಆಗಬೇಕು ಎನ್ನುವುದು ನನ್ನ ಆಶಯ. ಪಾಲಿಕೆ ಚುನಾವಣೆಯಲ್ಲಿ ಗೆದ್ದಿದ್ದು, ನಾನೇ ಕೆಲಸ ಮಾಡುವೆ. ಗಂಡನನ್ನು ಮುಂದೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಹೀಗೆ ಹೇಳಿದ್ದು, ಬಿಜೆಪಿಯ 28ನೇ ವಾರ್ಡಿನಿಂದ ಗೆಲುವು ಸಾಧಿಸಿರುವ ಡಾ.ಅಶ್ವಿನಿ ಶರತ್.
ಮಹಿಳೆ ಉನ್ನತ ಶಿಕ್ಷಣ ಪಡೆದು ರಾಜಕೀಯಕ್ಕೆ ಬರಬೇಕು. ಗಂಡನನ್ನು ಅವಲಂಬಿಸಿ ರಾಜಕಾರಣ ಮಾಡಬಾರದು ಎನ್ನುವುದು ಇವರ ನಂಬಿಕೆ.

ಇನ್ನು ಜಯನಗರ 48ನೇ ವಾರ್ಡಿನಿಂದ ಗೆದ್ದಿರುವ ಜೆಡಿಎಸ್ ಅಭ್ಯರ್ಥಿ ಎಂ.ಎಸ್.ಶೋಭಾ ಬಿಸಿಎ ಪದವೀಧರೆ. ಇವರ ಪ್ರಕಾರ ಪಾಲಿಕೆ ಸದಸ್ಯೆಗೆ ಶಿಕ್ಷಣವೇ ಆಭರಣ. ಪ್ರಬುದ್ಧತೆಯಿಂದ ಕೆಲಸ ಮಾಡಲು ಶಿಕ್ಷಣವೇ ಪೂರಕ.
ಇದೇ ಮಾತನ್ನು 45ನೇ ವಾರ್ಡಿನಿಂದ ಗೆದ್ದ ಜೆಡಿಎಸ್ ನ ಕೆ.ನಿರ್ಮಲಾ ಸಹ ಪುರಸ್ಕರಿಸಿದರು. ಇವರು ಡಿಪ್ಲೊಮಾ ಎಲೆಕ್ಟ್ರಿಕಲ್ಸ್ ಪದವೀಧರೆ. ಶಿಕ್ಷಣವಿರುವ ಕಾರಣದಿಂದಲೇ ನಾನು ಚುನಾವಣೆಯಲ್ಲಿ ನಿಂತು, ಗೆಲ್ಲಲು ಸಾಧ್ಯವಾಯಿತು. ವಾರ್ಡ್ ನಲ್ಲಿ ಗ್ರಂಥಾಲಯ, ಕುಡಿಯುವ ನೀರಿನ ಸೌಲಭ್ಯ ನೀಡುವುದು ಆದ್ಯತೆ ಎಂದು ಮುಗುಳ್ನಗುತ್ತಾರೆ.

ಬಿಜೆಪಿ 64ನೇ ವಾರ್ಡಿನ ಕೆ.ಚಂಪಕಾ ಬಿಬಿಎಂ ಪದವೀಧರೆ, ಜೆಡಿಎಸ್ ನ 37ನೇ ವಾರ್ಡಿನ ಅಶ್ವಿನಿ ಅನಂತು ಬಿಎ ಪದವೀಧರೆ. ಬಿಜೆಪಿಯ 21ನೇ ವಾರ್ಡಿನ ಸಿ.ವೇದಾವತಿ ಬಿ.ಇಡಿ ಓದಿದ್ದಾರೆ, 59ನೇ ವಾರ್ಡಿನ ಸುನಂದಾ ಪಾಲನೇತ್ರ ಸಮಾಜವಿಜ್ಞಾನದಲ್ಲಿ ಎಂ.ಎ ಮಾಡಿದ್ದಾರೆ.
32ನೇ ವಾರ್ಡಿನ ಕಾಂಗ್ರೆಸ್ಸಿನ ಎಚ್.ಎಂ.ಶಾಂತಕುಮಾರಿ ಸಹ ಸಮಾಜವಿಜ್ಞಾನ ಎಂ.ಎ. ಓದಿದ್ದಾರೆ. "ಪಾಲಿಕೆ ಸದಸ್ಯೆಯಾಗಬೇಕು ಎಂದರೆ ಓದಿರಲೇಬೇಕು ಎಂದು ಕಾನೂನಿನಲ್ಲಿದೆಯೇ"? ಎಂದು ಪ್ರಶ್ನಿಸಿದ್ದು 54ನೇ ವಾರ್ಡಿನ ಬಿಜೆಪಿಯ ಪುಟ್ಟನಿಂಗಮ್ಮ.
ಇವರು ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ. ಜನರ ಸಂಪರ್ಕ ನನಗೆ ಸಾಕು. ಅನುಭವವೇ ನನ್ನನ್ನು ಯಶಸ್ವಿ ರಾಜಕಾರಣಿ ಮಾಡುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವೇಶ್ವರನಗರ 62ನೇ ವಾರ್ಡಿನಿಂದ ಬಿಜೆಪಿಯ ಆರ್.ಶಾಂತಮ್ಮ ವಡಿವೇಲು ಗೆಲುವಿನ ನಗೆ ಬೀರಿದರು. ದೇವರಾಜು ಅರಸು ಕಾಲೋನಿ ನಿವಾಸಿ ಶಾಂತಮ್ಮ ಅವರ ಅತ್ತೆ 15 ವರ್ಷ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ದುಡಿದವರು.
ವಾರ್ಡ್ ನಲ್ಲಿ ಹಲವು ಸಮಸ್ಯೆಗಳಿವೆ. ರಸ್ತೆ ಸರಿಪಡಿಸಬೇಕು, ಗುಂಡಿ ಮುಚ್ಚಬೇಕು. ಉದ್ಯಾನ ಅಭಿವೃದ್ಧಿಪಡಿಸಬೇಕು. ಇವೆಲ್ಲವನ್ನೂ ಆದ್ಯತೆ ಮೇಲೆ ಮಾಡುವೆ ಎಂದರು.
ಹೆಣ್ಣು ಬರೀ ಅಡುಗೆ ಮನೆಗೆ ಮಾತ್ರವಲ್ಲ. ರಾಜಕಾರಣದಲ್ಲೂ ಸೈ ಎನ್ನುವಂತೆ ಮಾಡಿರುವಈ ಬಾರಿಯ ಮೈಸೂರು ಮಹಾನಗರ ಪಾಲಿಕೆಯ ಚುನಾವಣೆ ಎಲ್ಲರಿಗೂ ಮಾದರಿಯೇ ಸರಿ.












Click it and Unblock the Notifications