ನಂಜನಗೂಡು ಉಪಚುನಾವಣೆ: ದಾಖಲಾಯ್ತು 14 ನಾಮಪತ್ರ
ನಂಜನಗೂಡು ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಮಾರ್ಚ್ 21 ರಂದು ಒಟ್ಟು 8 ಜನ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಹಿಂಪಡೆಯಲು ಮಾರ್ಚ್ 24 ಕೊನೆಯ ದಿನವಾಗಿದೆ.
ಮೈಸೂರು, ಮಾರ್ಚ್ 22 : ಏಪ್ರಿಲ್ 9, ಭಾನುವಾರದಂದು ನಡೆಯಲಿರುವ ನಂಜನಗೂಡು ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಾರ್ಚ್ 21 ರಂದು 8 ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲಿಗೆ, ಒಟ್ಟು 14 ಮಂದಿ ನಾಮಪತ್ರ ಸಲ್ಲಿಸಿದಾಂತಾಗಿದೆ.
ಕಾಂಗ್ರೆಸ್ ನಾಯಕ ವಿ. ಶ್ರೀನಿವಾಸ ಪ್ರಸಾದ್ ಅವರು ಪಕ್ಷ ತೊರೆದು ಬಿಜೆಪಿ ಸೇರಿದ್ದರಿಂದ ತೆರವಾದ ನಂಜನಗೂಡು ಕ್ಷೇತ್ರಕ್ಕೆ ಮತ್ತು ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರ ಅಕಾಲಿಕ ಮರಣದಿಂದ ತೆರವಾದ ಗುಂಡ್ಲುಪೇಟೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಇಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮಾರ್ಚ್ 24 ರಂದು ನಾಮಪತ್ರ ವಾಪಸ್ ಪಡೆಯಬಹುದಾಗಿದ್ದು, ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳು ಯಾರ್ಯಾರು ಎಂಬ ಸ್ಪಷ್ಟ ಚಿತ್ರಣ 24 ರ ಸಂಜೆ ತಿಳಿಯಲಿದೆ.
ಕಣದಲ್ಲಿರುವ ಘಟಾನುಘಟಿಗಳು
ಕಳಲೆ ಎನ್. ಕೇಶವಮೂರ್ತಿ(ಕಾಂಗ್ರೆಸ್), ವಿ.ಶ್ರೀನಿವಾಸ್ ಪ್ರಸಾದ್ (ಬಿಜೆಪಿ), ಪಕ್ಷೇತರರು ಪ್ರದೀಪ್ ಕುಮಾರ್, ಮಲ್ಲಣ, ಸುಬ್ಬಯ್ಯ, ಹೆಚ್.ಬಿ ಸೇಶಣ್ಣ, ಈಶ್ವರ್, ಪ್ರಸನ್ನ, ರೇಣುಕಾ ಕೋ. ಸುರೇಶ್, ಆನಂದ್, ಮಹಾದೇವಸ್ವಾಮಿ, ಗುರುಲಿಂಗಯ್ಯ, ತುಳಿಸಿದಾಸ್ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಿಂದ ಬಂದು ಶಿವಣ್ಣ ಎಂಬುವವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿದೆ.
ಚುನಾವಣೆ ಮೇಲೆ ಹದ್ದಿನ ಕಣ್ಣು
ರಾಷ್ಟ್ರೀಯ ಚುನಾವಣಾ ಆಯೋಗವು ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ 3 ಜನ ವೀಕ್ಷಕರನ್ನ ನೇಮಕ ಮಾಡಿದೆ. ಅದರಲ್ಲಿ ಪಂಕಜ್ ಐಎಎಸ್, ಚುನಾವಣಾ ಸಮಾನ್ಯ ವೀಕ್ಷಕರು, ಅಮರ್ ಜ್ಯೋತಿ ಮಜುಮ್ ದಾರ್ ಚುನಾವಣಾ ವೆಚ್ಚ ವೀಕ್ಷಕರು, ಘನಶ್ಯಾಂ ಬನಸಾಲ್, ಐಪಿಎಸ್ ಚುನಾವಣಾ ಪೊಲೀಸ್ ವೀಕ್ಷಕರಾಗಿ ನೇಮಕವಾಗಿದ್ದಾರೆ. ರಾಜಕೀಯ ಪಕ್ಷಗಳು, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು, ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಯಾವುದಾದರೂ ದೂರುಗಳಿದ್ದರೆ ಚುನಾವಣಾ ವೀಕ್ಷಕರನ್ನ ಸಂಪರ್ಕಿಸಬಹುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಿಗಿ ಬಂದೋಬಸ್ತ್
ನಂಜನಗೂಡು ಉಪಚುನಾವಣೆ ನಡೆಯುವ ವ್ಯಾಪ್ತಿಯಲ್ಲಿ 15 ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ. ಎಲ್ಲಾ ವಾಹನಗಳನ್ನ ತಪಾಸಣೆಗೊಳಪಡಿಸಲಾಗುತ್ತಿದೆ. ಮಾರ್ಚ್ 21 ರ ರಾತ್ರಿ ಹುಲ್ಲಹಳ್ಳಿ ಚೆಕ್ ಪೋಸ್ಟ್ನಲ್ಲಿ 1 ಲಕ್ಷದ 78 ಸಾವಿರ ಹಣ ವಶಪಡಿಸಿಕೊಳ್ಳಲಾಗಿದೆ. ಕೇರಳದ ವ್ಯಕ್ತಿಗೆ ಸೇರಿರುವ ಈ ಹಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಿಜೆಪಿ ಶಾಸಕರಿಂದ ದೂರು
ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಬಿಜೆಪಿ ಶಾಸಕ ಬಿ.ಎನ್.ವಿಜಯಕುಮಾರ್ ಮಂಗಳವಾರ ದೂರು ನೀಡಿದ್ದಾರೆ. ಪಕ್ಷಪಾತ ಧೋರಣೆಯಿಂದ ಕಾರ್ಯ ನಿರ್ವಹಿಸುತ್ತಿರುವ ಗುಂಡ್ಲುಪೇಟೆ ಪೊಲೀಸ್ ಸಬ್ ಇನ್ಸಪೆಕ್ಟರ್ ಸಂದೀಪ್ ಕುಮಾರ್ ಮತ್ತು ಇತರ ಸರಕಾರೀ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮುಕ್ತ, ನ್ಯಾಯಯುತ ಚುನಾವಣೆ ಸಲುವಾಗಿ ಹಲವು ಸರಕಾರೀ ಸಿಬ್ಬಂದಿಯ ವರ್ಗಾವಣೆ ಮಾಡುವಂತೆ ಚುನಾವಣಾಧಿಕಾರಿಗಳನ್ನು ಒತ್ತಾಯಿಸಿದರು.
ವಿಜಯಮಾಲೆ ಯಾರ ಕೊರಳಿಗೆ?
ಒಟ್ಟಾರೆ ಉಪಚುನಾವಣಾ ಕಣ ದಿನಕ್ಕೊಂದು ರಂಗು ಪಡೆಯುತ್ತಿದ್ದು, ಮತದಾರ ಯಾರ ಕೊರಳಿಗೆ ವಿಜಯ ಮಾಲೆಯನ್ನು ತೊಡಿಸುತ್ತಾನೆ ಎಂಬುದನ್ನು ತಿಳಿಯಬೇಕಾದರೆ ಏಪ್ರಿಲ್ 13 ಗುರುವಾರದವರೆಗೂ ಕಾಯಬೇಕಿದೆ.