ಪಾದರಾಯನಪುರಕ್ಕೆ ತೆರಳಿದ್ದ ಮೈಸೂರು ಪೊಲೀಸರಿಗೆ ಕೊರೊನಾ
ಮೈಸೂರು, ಜೂನ್ 20: ಮೈಸೂರಿನಲ್ಲಿ ಕೆಎಸ್ಆರ್ಪಿ ಸಿಬ್ಬಂದಿಗೆ ಸೋಂಕು ಹಿನ್ನೆಲೆಯಲ್ಲಿ, ಮೈಸೂರಿನ ಜಾಕಿ ಕ್ವಾಟರ್ಸ್ ನಲ್ಲಿ ಔಷಧಿ ಸಿಂಪಡಣೆ ಮಾಡಲಾಗಿದೆ. ಪಾಲಿಕೆ ಆರೋಗ್ಯಾಧಿಕಾರಿ ನಾಗರಾಜ್ ನೇತೃತ್ವದಲ್ಲಿ ಔಷಧಿ ಸಿಂಪಡಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿ 24 ಸಿಬ್ಬಂದಿಗಳ ತಂಡ ವಾಪಸ್ಸಾಗಿ ಕ್ವಾರೆಂಟೈನ್ ನಲ್ಲಿದ್ದರು. ಈ ಪೈಕಿ ನಿನ್ನೆ 13 ಜನಕ್ಕೆ ಸೋಂಕು ಧೃಡವಾಗಿದ್ದು, ಉಳಿದ 11 ಸಿಬ್ಬಂದಿ ವರದಿ ನೆಗೆಟಿವ್ ಬಂದಿದೆ. ಸೋಂಕಿತ ಸಿಬ್ಬಂದಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಮೈಸೂರಿನ ಈ ಪೋಲಿಸರು ಬೆಂಗಳೂರು, ಪಾದರಾಯನಪುರನ ಬಂದೋ ಬಸ್ತ್ ಗೆ ತೆರಳಿದ್ದರು. ಇವರಲ್ಲಿ 13 ಮಂದಿ ಕೆ ಎಸ್ ಆರ್ ಪಿ ಪೇದೆಗಳಿಗೆ ಪಾಸಿಟಿವ್ ವರದಿ ಬಂದಿದ್ದು, ಆತಂಕದಲ್ಲಿ ಪೊಲೀಸ್ ಇಲಾಖೆ ಇದೆ. ಇಂದು ಬಿಡುಗಡೆ ಆಗುವ ಹೆಲ್ತ್ ಬುಲೆಟಿನ್ನಲ್ಲಿ ಅಧಿಕೃತ ಪ್ರಕಟಣೆ ಸಾಧ್ಯತೆ ಇದೆ.

ಉಳಿದಂತೆ, ಜಿಲ್ಲೆಯಲ್ಲಿ ನಿನ್ನೆ ನಾಲ್ವರು ಮಹಿಳೆಯರು ಸೇರಿದಂತೆ ಆರು ಮಂದಿಗೆ ಕೋವಿಡ್-19 ಇರುವುದು ದೃಢಪಟ್ಟಿದೆ. ಪಿ-5921ರ ಸಂಪರ್ಕದಿಂದ 50 ಮತ್ತು 32ವರ್ಷ ವಯಸ್ಸಿನ ಪುರುಷರು ಹಾಗೂ 32 ಮತ್ತು 82 ವರ್ಷ ವಯಸ್ಸಿನ ಮಹಿಳೆಯರಿಗೆ ಸೋಂಕು ತಗುಲಿದೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಯೋವೃದ್ಧ ಮಹಿಳೆಯನ್ನು ನೋಡಲು ತಮಿಳುನಾಡಿನಿಂದ ಬಂದ ವ್ಯಕ್ತಿಗೆ ಕೋವಿಡ್-19 ಇರುವುದು ಈ ಹಿಂದೆ ದೃಢಪಟ್ಟಿತ್ತು.
ಅವರ ಜನತೆಗೆ ಬಂದ ಪತ್ನಿಗೂ ಸೋಂಕು ತಗುಲಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿರುವ ವಯೋವೃದ್ಧ ಮಹಿಳೆ ಮತ್ತು ಮೊಮ್ಮಗ ಇಬ್ಬರಲ್ಲೂ ಸೋಂಕು ಕಾಣಿಸಿಕೊಂಡಿದೆ. ಪಿ-7553 ಸಂಪರ್ಕಕ್ಕೆ ಬಂದ 30ವರ್ಷ ವಯಸ್ಸಿನ ಮಹಿಳೆ ಮತ್ತು ಪಿ-6904 ಸಂಪರ್ಕಕ್ಕೆ ಬಂದ 29 ವರ್ಷ ವಯಸ್ಸಿನ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ ಓರ್ವರು ಸಿಂಡಿಕೇಟ್ ಸರಸ್ವತಿಪುರಂ ಶಾಖೆ ಸಿಬ್ಬಂದಿಯಾಗಿದ್ದಾರೆ.












Click it and Unblock the Notifications