Leopard Attack In T Narasipura : ತಿ. ನರಸೀಪುರ, ಚಿರತೆ ದಾಳಿಗೆ 11 ವರ್ಷದ ಬಾಲಕ ಬಲಿ
ಮೈಸೂರು, ಜನವರಿ 22; ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ಚಿರತೆಯ ದಾಳಿಗೆ ಬಲಿಯಾಗಿದ್ದಾನೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ತಿ. ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ 11 ವರ್ಷದ ಜಯಂತ್ ಎಂಬ ಬಾಲಕ ಚಿರತೆ ದಾಳಿಗೆ ಬಲಿಯಾಗಿದ್ದಾನೆ. ಶನಿವಾರ ರಾತ್ರಿಯಿಂದ ಜಯಂತ್ ನಾಪತ್ತೆಯಾಗಿದ್ದ, ಪೋಷಕರು ಹುಡುಕಾಟ ನಡೆಸುತ್ತಿದ್ದರು.
ಭಾನುವಾರ ಗ್ರಾಮದ ಸಮೀಪ ಇರುವ ಹೊಲದಲ್ಲಿ ಬಾಲಕನ ಶವ ಪತ್ತೆಯಾಗಿದೆ. ತಾಲೂಕಿನಲ್ಲಿ ಚಿರತೆ ದಾಳಿಗೆ ಇದು ನಾಲ್ಕನೇ ಬಲಿಯಾಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಶಾಸಕರು ಹೊರಳಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ಹೊಲದಲ್ಲಿ ಚಿರತೆ ಮರಿಗಳು ಸಹ ಇವೆ ಎಂಬ ಮಾಹಿತಿ ಸಿಕ್ಕಿವೆ.
ಕೆಲವು ದಿನಗಳ ಹಿಂದೆ ತಾಲೂಕಿನಲ್ಲಿ 60 ವರ್ಷದ ವೃದ್ಧ ಚಿರತೆ ದಾಳಿಯಿಂದಾಗಿ ಮೃತಪಟ್ಟಿದ್ದ. ಇದು ತಾಲೂಕಿನಲ್ಲಿ ಚಿರತೆ ದಾಳಿಗೆ 4ನೇ ಬಲಿಯಾಗಿದೆ. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಅರಣ್ಯ ಇಲಾಖೆ ಪ್ರಕಟಣೆ; ಹೊರಳಹಳ್ಳಿ ಗ್ರಾಮದಲ್ಲಿ ಬಾಲಕ ಚಿರತೆ ದಾಳಿಗೆ ಬಲಿಯಾದ ಬಳಿಕ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಜನರು ಮನೆಯಿಂದ ಅನಗತ್ಯವಾಗಿ ಹೊರ ಬರಬೇಡಿ ಎಂದು ಹೇಳಿದೆ.
ಸಂಜೆ, ರಾತ್ರಿ ಮಕ್ಕಳು, ಮಹಿಳೆಯರು ಜಂಟಿಯಾಗಿ ಸಂಚಾರ ನಡೆಸಬೇಡಿ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಚಿರತೆ ಹಿಡಿಯಲು ಬೋನು ಅಳವಡಿಕೆ ಮಾಡುವ ಸಾಧ್ಯತೆ ಇದೆ.
ಚಿರತೆ ಕಾಟ ತಡೆಯಲು ವಿಫಲರಾದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಿ. ನರಸೀಪುರ-ಚಾಮರಾಜನಗರ ರಸ್ತೆ ತಡೆದು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.












Click it and Unblock the Notifications