ಶಿವರಾತ್ರಿಗೆ ಮೈಸೂರಿನ ತ್ರಿನೇಶ್ವರನಿಗೆ 11 ಕೆ.ಜಿ ಚಿನ್ನದ ಮುಖವಾಡ
ಮೈಸೂರು, ಫೆಬ್ರವರಿ 20: ನಾಳೆ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿದ್ಧತಾ ಕಾರ್ಯ ಜೋರಾಗಿ ನಡೆದಿದೆ.
ನಗರದ ತ್ರಿನೇಶ್ವರ ದೇವಾಲಯಕ್ಕೆ ಮೈಸೂರು ಜಿಲ್ಲಾಡಳಿತ, ಮುಜರಾಯಿ ಇಲಾಖೆಯಿಂದ ಅರ್ಚಕರಿಗೆ ಬರೋಬ್ಬರಿ 11 ಕೆ.ಜಿ ಚಿನ್ನದ ಮುಖವಾಡ ಹಸ್ತಾಂತರ ಮಾಡಲಾಯಿತು.
"ಕಲ್ಲಿನಲ್ಲಿರುವ ದೋಷದಿಂದ ಪ್ರತಿಮೆಯಲ್ಲಿ ಬಿರುಕು"
ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಮುಜರಾಯಿ ತಹಸೀಲ್ದಾರ್ ಯತಿರಾಜ್, ಅರಮನೆ ದೇವಾಲಯಗಳ ಕಾರ್ಯನಿರ್ವಹಣಾ ಅಧಿಕಾರಿ ಗೋವಿಂದರಾಜು, ತ್ರಿನೇಶ್ವರ ದೇವಾಲಯದ ಪ್ರಧಾನ ಅರ್ಚಕ ಸಂತಾನಂ, ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
ಈ ಚಿನ್ನದ ಮುಖವಾಡ ವರ್ಷಪೂರ್ತಿ ಜಿಲ್ಲಾ ಖಜಾನೆಯಲ್ಲಿರುತ್ತದೆ. ಶಿವರಾತ್ರಿ ಮುನ್ನ ದಿನ ಖಜಾನೆಯಿಂದ ತೆಗೆದು ದೇವಾಲಯಕ್ಕೆ ಹಸ್ತಾಂತರ ಮಾಡಲಾಗುತ್ತದೆ.
ಶಿವರಾತ್ರಿಯ ದಿನ ಶಿವಲಿಂಗಕ್ಕೆ ಕೊಳಗ ಧಾರಣೆ ಮಾಡಿ ರಾತ್ರಿ ಪೂರ್ತಿ ಶಿವ ಭಕ್ತರಿಂದ ಜಾಗರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯದ ಶಿವಲಿಂಗಕ್ಕೆ ಮುಖವಾಡ ಧಾರಣೆ ಮಾಡಿ,
ಸಾರ್ವಜನಿಕರ ದರ್ಶನದ ಬಳಿಕ ವಾಪಸ್ ಜಿಲ್ಲಾ ಖಜಾನೆಯಲ್ಲಿ ಸಂರಕ್ಷಿಸಲಾಗುವುದು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹುಟ್ಟಿದ ಸಂಭ್ರಮಕ್ಕಾಗಿ ಅಂದಿನ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ಅವರು ಈ ಚಿನ್ನದ ಮುಖವಾಡವನ್ನು ಉಡುಗೊರೆಯಾಗಿ ನೀಡಿದ್ದರು.