ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣ: ಸರ್ಕಾರದಿಂದ 100 ಕೋಟಿ ರೂ. ಬಿಡುಗಡೆ
ಮೈಸೂರು, ನವೆಂಬರ್, 22: ವೇಗವಾಗಿ ಬೆಳೆಯುತ್ತಿರುವ ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣಕ್ಕೆ ಇದೀಗ ಸರಕಾರವೂ ಕೈ ಜೋಡಿಸಿದ್ದು, 100 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ರಾಜಧಾನಿ ಬೆಂಗಳೂರಿನ ನಂತರ ಸಾಂಸ್ಕೃತಿಕ ನಗರಿ ಮೈಸೂರು ವೇಗವಾಗಿ ಬೆಳೆಯುತ್ತಿದ್ದು, ಇನ್ನೇನು ಶೀಘ್ರದಲ್ಲೇ ಎಕ್ಸ್ಪ್ರೆಸ್ ಹೈವೆ ಪೂರ್ಣಗೊಳ್ಳಲಿದೆ. ಜೊತೆಗೆ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೂ ಮುಂದಡಿ ಇಡಲಾಗಿದೆ. ಈ ಸಂಬಂಧ ಜಮೀನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ 100 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.
ಟಿಪ್ಪು ಎಕ್ಸ್ಪ್ರೆಸ್ ರೀತಿಯಲ್ಲೇ ಗುಂಬಜ್ ಶೈಲಿಯ ಬಸ್ ನಿಲ್ದಾಣದ ಬದಲಾವಣೆ: ಪ್ರತಾಪ್ ಸಿಂಹ
ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ರನ್ ವೇ ವಿಸ್ತರಣೆಗಾಗಿ ಅಗತ್ಯವಿರುವ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ 319 ಕೋಟಿ ನೀಡಲು ನಿರ್ಧರಿಸಿದೆ. ಇದಕ್ಕೆ ಅನುಗುಣವಾಗಿ ಈಗಾಗಲೇ 1ನೇ ಹಂತದಲ್ಲಿ ಕೆ.ಐ.ಎ.ಡಿ.ಬಿಗೆ 50 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿರುತ್ತದೆ. ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸುವ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿಕೆಯ ಮೇರೆಗೆ 2ನೇ ಹಂತದಲ್ಲಿ ಕೆ.ಐ.ಎ.ಡಿ.ಬಿಗೆ 100 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಭೂಸ್ವಾಧೀನ ಪಡಿಸಿಕೊಳ್ಳುವ ಕಾರ್ಯವನ್ನು ತುರ್ತಾಗಿ ಕೈಗೊಳ್ಳಲಾಗುವುದು ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ. ಇತ್ತೀಚೆಗೆ ವಂದೆ ಭಾರತ್ ರೈಲು ಮೈಸೂರು-ಚೆನ್ನೈನಿಂದ ಚಲಿಸುತ್ತಿದೆ. ರೈಲು, ರಸ್ತೆ ಹಾಗೂ ವಿಮಾನ ಸಂಪರ್ಕ ಹೆಚ್ಚು ಸುಲಭವಾಗುತ್ತಿದೆ. ಹಾಗೆಯೇ ಭವಿಷ್ಯದಲ್ಲಿ ಮೈಸೂರು ಕೂಡ ಸಮಗ್ರ ಅಭಿವೃದ್ಧಿ ಕಡೆ ದೃಷ್ಟಿ ನೆಟ್ಟಿದೆ ಎಂದರು.
ಎಕ್ಸ್ಪ್ರೆಸ್ ವೇ ಬಗ್ಗೆ ಸಂಸದ ಹೇಳಿದ್ದೇನು?
ಹಾಗೆಯೇ ಎಲ್ಲರ ಬಹುನಿರೀಕ್ಷಿತ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ಎರಡನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. ಅಲ್ಲದೇ ಇದೇ ನವೆಂಬರ್ ತಿಂಗಳ 30ರಂದು ಶ್ರೀರಂಗಪಟ್ಟಣ ಬೈಪಾಸ್ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಶ್ರೀರಂಗಪಟ್ಟಣ ಬೈಪಾಸ್ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಹಾಗೂ ಟೋಲ್ ಪ್ಲಾಜಾವನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿದ್ದ ಅವರು, ಈ ತಿಂಗಳಿನೊಳಗೆ ಬೈಪಾಸ್ ಅನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಟ್ವೀಟ್ನಲ್ಲಿ ತಿಳಿಸಿದ್ದರು. ಮೊದಲ ಹಂತದಲ್ಲಿ ಬೆಂಗಳೂರಿನಿಂದ ನಿಡುಘಟ್ಟದವರೆಗೆ 54 ಕಿಲೋ ಮೀಟರ್ ಕಾಮಗಾರಿ ಭರದಿಂದ ಸಾಗಿ ಮುಕ್ತಾಯವಾಗಿತ್ತು. ಸದ್ಯ ಕಾಮಗಾರಿ ಮುಗಿದರೂ ಕೆಲವು ಕಡೆ ಲಿಂಕೇಜ್ಗಳನ್ನು ಸರಿಪಡಿಸುವುದು ಬಾಕಿ ಉಳಿದಿದೆ. ಹಲವೆಡೆ ಬೈಪಾಸ್ನಿಂದ ಎಕ್ಸ್ಪ್ರೆಸ್ ಹೈವೇ ಸಂಪರ್ಕ ಕಲ್ಪಿಸುವುದು ವಿಳಂಬವಾಗಿದ್ದು, ಆದರೆ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಇನ್ನು ಎರಡನೇ ಹಂತದ ಕಾಮಗಾರಿ ವಿಳಂಬವಾಗಿದ್ದು, ಇದನ್ನು ಶೀಘ್ರವೇ ಕಾಮಗಾರಿ ಮುಗಿಸಲಾಗುವುದು ಎಂದು ಪ್ರತಾಪ್ ಸಿಂಹ ಭರವಸೆ ನೀಡಿದ್ದಾರೆ.
ಗುತ್ತಿಗೆದಾರರ ವಿಳಂಬದಿಂದ ಕಾಮಗಾರಿ ಕುಂಠಿತ
ಬೆಂಗಳೂರು-ಮೈಸೂರು ನಡುವಿನ ವಿಶ್ವದರ್ಜೆ ಗುಣಮಟ್ಟದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಡಿಸೆಂಬರ್ ಇಲ್ಲವೇ ಜನವರಿ 2023ಕ್ಕೆ ಮುಗಿಯುತ್ತದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಆದರೆ ಇದೀಗ ಪ್ರತಾಪ್ ಸಿಂಹ ಅವರು, ನವೆಂಬರ್ 30ರಂದು ಶ್ರೀರಂಗಪಟ್ಟಣ ಬೈಪಾಸ್ ಓಪನ್ ಮಾಡಲಾಗುವುದು ಎಂದು ಟ್ವೀಟ್ ಮೂಲಕ ಭರವಸೆ ವ್ಯಕ್ತಪಡಿಸಿದ್ದರು. ಮೊದಲು ಬೆಂಗಳೂರು-ಮದ್ದೂರಿನ ನಿಡಘಟ್ಟ 54 ಕಿಲೋ ಮೀಟರ್ ಉದ್ದದ ರಸ್ತೆ ಅಕ್ಟೋಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿತ್ತು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ವಿಶ್ವವಿಖ್ಯಾತ ಮೈಸೂರು ದಸರಾ ವೇಳೆಗೆ ಈ ರಸ್ತೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಆದ ಮಳೆ ಮತ್ತು ಗುತ್ತಿಗೆದಾರರ ವಿಳಂಬದಿಂದ ಈ ರಸ್ತೆ ಕಾಮಗಾರಿ ಕೇಂದ್ರ ಸಚಿವರ ಆಶಯದಂತೆ ಪೂರ್ಣಗೊಂಡಿಲ್ಲ.
ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಒತ್ತಡ
ಬೆಂಗಳೂರು ನಿಡಘಟ್ಟದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ನಿರ್ಮಾಣ ಆಗುತ್ತಿರುವ ಸರ್ವಿಸ್ ರಸ್ತೆಗಳು ಪೂರ್ಣಗೊಳ್ಳುವ ಹಂತಕ್ಕೆ ತಲುಪಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್, ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ನೀಡಿದ್ದರು. ದಸರಾ ವೇಳೆಗೆ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗದು. ಇನ್ನು ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಸಂಚಾರಕ್ಕೆ ಮುಕ್ತ ಮಾಡಿಕೊಡಲಾಗುವುದು. ಗುತ್ತಿಗೆ ಪಡೆದಿರುವ ಸಂಸ್ಥೆಗಳಿಗೆ ರಸ್ತೆಯ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಒತ್ತಡ ತಂದಿದ್ದೇವೆ. ಮಳೆ ನೀರು ಸರಾಗವಾಗಿ ಹೋಗಲು ಮತ್ತೆ ಕೆಲವೆಡೆ ಭೂ ಸ್ವಾಧೀನ ಮಾಡಬೇಕಾಗಿದೆ. ಭೂಸ್ವಾಧೀನದ ನಂತರ ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವಿಸ್ ರಸ್ತೆ, ಸುರಂಗ ಮಾರ್ಗಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದರು. ಈಗಾಗಲೇ ಬಹುತೇಕ ಬೈಪಾಸ್ ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದೆ. ದಶಪಥದ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಈ ನಗರಗಳ ನಡುವೆ 90 ನಿಮಿಷಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡಬಹುದಾಗಿದೆ ಎಂದು ಮಾಹಿತಿ ನೀಡಲಾಗಿದೆ.
844 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭ
ಇನ್ನು ಮೈಸೂರು ಎಕ್ಸ್ಪ್ರೆಸ್ ವೇ ಮಾದರಿಯಲ್ಲಿ ಬೆಂಗಳೂರಿಗೆ ಮತ್ತೊಂದು ದಶಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ನೆಲಮಂಗಲ - ತುಮಕೂರು ನಡುವೆ ರಾಷ್ಟ್ರೀಯ ಹೆದ್ದಾರಿ -48ರಲ್ಲಿ 44.04 ಕಿಲೋ ಮೀಟರ್ ದಶಪಥ ಅಭಿವೃದ್ಧಿ ಕಾಮಗಾರಿ 844 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಯಾರಂಭಗೊಂಡಿದೆ. 3 ವರ್ಷಗಳಲ್ಲಿ ನಿರ್ಮಾಣ ಆಗಲಿರುವ ದಶಪಥ, ಸೋಂಪುರ ಕೈಗಾರಿಕಾ ಪ್ರದೇಶ, ತುಮಕೂರು ಕೈಗಾರಿಕಾ ಪ್ರದೇಶ ಮಾತ್ರವಲ್ಲದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ಸಾಗಾಟಕ್ಕೂ ನೆರವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಕೇಂದ್ರ ಸರ್ಕಾರದ ಭಾರತ್ ಮಾಲಾ ಪರಿ ಯೋಜನಾ ಹೆದ್ದಾರಿಗಳ ಅಭಿವೃದ್ಧಿಗೆ ಎಂದು ಆರಂಭಿಸಲಾದ ಯೋಜನೆ ಇದಾಗಿದೆ. ರಾಜ್ಯದಲ್ಲಿ ನಿರ್ಮಾಣ ಆಗುತ್ತಿರುವ 2ನೇ ದಶಪಥ ರಸ್ತೆ ಇದಾಗಲಿದೆ ಎನ್ನುವುದು ವಿಶೇಷವಾಗಿದೆ.