ರಾಮದಾಸ್ ಅವರೇ ನನ್ನ ಗಂಡ ಎಂದ ಪ್ರೇಮಕುಮಾರಿ!
ಮೈಸೂರು, ಫೆ. 5 : ನಾನು ಮಾಜಿ ಸಚಿವ ಎಸ್.ಎ. ರಾಮದಾಸ್ ಅವರನ್ನು ಪತಿಯಾಗಿ ಸ್ವೀಕರಿಸಿದ್ದು, ಅವರೊಡನೆ ಬಾಳಬೇಕೆಂದು ಹೋರಾಟ ನಡೆಸುತ್ತಿರುವುದು ತಪ್ಪೇ? ನನಗೇಕೆ ಈ ರೀತಿ ತೊಂದರೆ ನೀಡಲಾಗುತ್ತಿದೆ? ಎಂದು ಪ್ರೇಮಕುಮಾರ್ ಖಾರವಾಗಿ ಪ್ರಶ್ನಿಸಿದ್ದಾರೆ.
ಮೈಸೂರಿನ ಪತ್ರಿಕಾಭವನದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅಳಲು ತೋಡಿಕೊಂಡ ಪ್ರೇಮಕುಮಾರಿ, ಸರ್ಕಾರದಿಂದ ನನಗೆ ಅನ್ಯಾಯವಾಗುತ್ತಿದೆ, ರಾಜೀನಾಮೆಯನ್ನೂ ಸ್ವೀಕರಿಸುತ್ತಿಲ್ಲ, ಸಂಬಳವನ್ನೂ ನೀಡುತ್ತಿಲ್ಲ. ನನಗೆ ನ್ಯಾಯ ಕೊಡಿಸಿ ಎಂದು ಗೋಳು ತೋಡಿಕೊಂಡರು.
ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ 3 ತಿಂಗಳಾದರೂ ಅದನ್ನು ಅಂಗೀಕರಿಸಿಲ್ಲ. ಅಷ್ಟೇ ಅಲ್ಲದೆ ನನಗೆ ಸರ್ಕಾರ ಯಾವುದೇ ಸವಲತ್ತುಗಳನ್ನು ನೀಡದೆ ಮಾನಸಿಕವಾಗಿ ಕಿರುಕುಳ ನೀಡುತ್ತಿದೆ. ನಾನು ರಾಮದಾಸ್ರೊಂದಿಗೆ ಬಾಳ್ವೆ ನಡೆಸಲು ಹೋರಾಟ ಮಾಡುತ್ತಿದ್ದು, ಪ್ರಾರಂಭದಿಂದಲೂ ನನಗೆ ತುಂಬಾ ಅನ್ಯಾಯವಾಗುತ್ತಿದೆ. ದ್ವಿತೀಯ ದರ್ಜೆ ಗುಮಾಸ್ತೆಯಾಗಿರುವ ತನ್ನನ್ನು ಹಲವು ಬಾರಿ ವರ್ಗಾವಣೆ ಮಾಡಿದ್ದಲ್ಲದೆ, ಎಂಟು ತಿಂಗಳಿನಿಂದ ಯಾವುದೇ ವೇತನ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು. ['ಪ್ರೇಮಾ' ಪುರಾಣ ಬಯಲು]
ವೇತನದ ಕುರಿತು ತುಮಕೂರು ಕಚೇರಿಯಲ್ಲಿ ವಿಚಾರಿಸಿದರೂ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಿಎಂ ಸಮ್ಮುಖದಲ್ಲೇ ಮಹಿಳಾ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರೂ, ಸಮಸ್ಯೆ ಏನೆಂದು ಕೇಳುವ ಸೌಜನ್ಯ ತೋರಲಿಲ್ಲ. ಇದರಿಂದ ಬೇಸತ್ತು ಮೂರು ತಿಂಗಳ ಹಿಂದೆ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದು, ಇದನ್ನು ಅಂಗೀಕರಿಸದೆ ಕಡತವನ್ನು ವಿಲೇವಾರಿ ಮಾಡಿಲ್ಲ. ಬದಲಿಗೆ ನೋಟೀಸ್ ಜಾರಿ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನಾನು ಎಂಟು ತಿಂಗಳಿನಿಂದ ವೇತನವಿಲ್ಲದೆ ತೊಂದರೆ ಅನುಭವಿಸುತ್ತಿದ್ದೇನೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು. [ರಾಮದಾಸ್ ಆತ್ಮಹತ್ಯೆಗೆ ಯತ್ನ]
ಮಾಜಿ ಸಚಿವ ಎಸ್.ಎ. ರಾಮದಾಸ್ ಜತೆ ನನ್ನ ಹೆಸರು ಬೆರೆತುಹೋಗಿದೆ. ಅವರೇ ನನ್ನ ಗಂಡ. ನಮ್ಮಿಬ್ಬರನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ. ಅವರು ಯಾವುದೇ ಸಮಯದಲ್ಲಿ ನನ್ನ ಮನೆಗೆ ಬರಬಹುದು ಎಂದು ಹೇಳುವ ಮೂಲಕ ಮತ್ತೊಮ್ಮೆ ರಾಮದಾಸ್ ನನ್ನ ಪತಿ ಎಂದು ಹೇಳುವುದನ್ನು ಮರೆಯಲಿಲ್ಲ. [ಪ್ರೇಮಕುಮಾರಿ ಪ್ರಕರಣಕ್ಕೆ ಹೊಸಜೀವ!]