ವರದಕ್ಷಿಣೆ ದಾಹಕ್ಕೆ ಮೈಸೂರಿನಲ್ಲಿ ಮಹಿಳೆ, ಮಗು ಬಲಿ
ಮೈಸೂರು, ಜೂನ್ 5 : ಮೈಸೂರಿನಲ್ಲಿ ದಿನಕ್ಕೊಂದು ವರದಕ್ಷಿಣೆ ಕಿರುಕುಳ ಪ್ರಕರಣಗಳು ಗೋಚರಿಸುತ್ತಿವೆ. ಇದಕ್ಕೆ ಪೂರಕವೆಂಬಂತೆ ಇಂದು ಗಂಡನ ವರದಕ್ಷಿಣೆ ದಾಹಕ್ಕೆ ಕಂದನೊಂದಿಗೆ ಗೃಹಿಣೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಮೈಸೂರಿನ ಮುತ್ತೂರು ಗ್ರಾಮದ ರಶ್ಮಿ(24) ಹಾಗೂ ಆಕೆಯ ಎರಡು ವರ್ಷದ ಮಗಳು ವೈಷ್ಣವಿ ಹಣದಾಸೆಗೆ ಬಲಿಯಾದ ದುರ್ದೈವಿಗಳು. ಈಕೆಯನ್ನು 2014ರಲ್ಲಿ ಕೆ.ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮದ ಮೂರ್ತಿಯೊಂದಿಗೆ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತು. ಆದರೆ ಧನದಾಹಿಯಾದ ಪತಿ ಒಂದು ವರ್ಷದ ಹಿಂದೆ ಪತ್ನಿಗೆ ವರದಕ್ಷಿಣೆ ಸಾಲುತ್ತಿಲ್, ನಿನ್ನ ತವರು ಮನೆಯಿಂದ ಹೆಚ್ಚಿನ ಹಣ ತೆಗೆದುಕೊಂಡು ಬಂದು ಸಂಸಾರ ನಡೆಸು ಎಂದು ಗಲಾಟೆ ಮಾಡಿದ್ದಾನೆ.[ಡೆಂಗ್ಯೂ ಮಹಾಮಾರಿಗೆ ಮೈಸೂರಿನಲ್ಲಿ ಮತ್ತೊಂದು ಬಲಿ]

ಮಗನ ವರದಕ್ಷಿಣೆ ದಾಹದ ಬೆಂಬಲಕ್ಕೆ ಆತನ ತಾಯಿ ಇಂದಿರಾ, ತಂದೆ ಗೋಪಾಲಗೌಡ ಸೊಸೆಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ರೋಸಿ ಹೋಗಿದ್ದ ಈಕೆ ಊರಿನ ಮುಖಂಡರ ಸಮ್ಮುಖದಲ್ಲಿ ಪಂಚಾಯ್ತಿ ನಡೆಸಿ ಸಮಾಧಾನ ಪಡಿಸಿದ್ದಳು.
ಆದರೆ ವಾರದ ಹಿಂದೆ ಬೀಗರ ಊಟಕ್ಕೆಂದು ಕರೆದುಕೊಂಡ ಹೋದ ಮೂರ್ತಿ, ಪತ್ನಿಯನ್ನು ತವರಿನಲ್ಲಿ ಬಿಟ್ಟು ಈಗ ಬರುತ್ತೇನೆ ಎಂದು ಹೇಳಿ ಹೋದವನು ಬರಲೇ ಇಲ್ಲ. ಶನಿವಾರ ಸಂಜೆ ದೂರವಾಣಿ ಮೂಲಕ ಮಾವನಿಗೆ ಕರೆ ಮಾಡಿದ ಅಳಿಯ ಮೂರ್ತಿ, 50 ಸಾವಿರ ಕೊಟ್ಟರೆ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾನೆ.
ಇದರಿಂದ ಬೇಸರಗೊಂಡ ಪತ್ನಿ ರಶ್ಮಿ ಭಾನುವಾರ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಮಗಳ ಸಾವಿಗೆ ಆಕೆಯ ಪತಿ ಮತ್ತು ಕುಟುಂಬದವರ ವರದಕ್ಷಿಣೆ ಕಿರುಕುಳ ಕಾರಣವೆಂದು ಮೃತಳ ತಂದೆ ನಿಂಗರಾಜು, ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಾಲಕ್ಕೆ ಹೆದರಿ ಆತ್ಮಹತ್ಯೆ
ಯುವಕನೋರ್ವ ಸಾಲಕ್ಕೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಣಸೂರು ತಾಲೂಕು ನಿಲುವಾಗಿಲು ಗ್ರಾಮದಲ್ಲಿ ನಡೆದಿದೆ. ಮಂಜು (21) ಮೃತ ದುರ್ದೈವಿ.
ಈತ ಕೈತುಂಬ ಸಾಲ ಮಾಡಿಕೊಂಡಿದ್ದು, ತೀರಿಸಲಾಗದೆ ಹೆದರಿ ತನ್ನ ಜಮೀನಿನಲ್ಲಿ ವಿಷ ಸೇವಿಸಿದ್ದಾನೆ ಎನ್ನಲಾಗಿದೆ. ಅಸ್ವಸ್ಥನಾಗಿದ್ದ ಈತನನ್ನು ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಜು ಸಾವನ್ನಪ್ಪಿದ್ದಾನೆ. ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications