ಕಾರ್ಯಕರ್ತನ ಕಪಾಳಕ್ಕೆ ಹೊಡೆದ ಎಚ್ ಡಿ ಕುಮಾರಸ್ವಾಮಿ
ಮೈಸೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತು. ಟಿಕೆಟ್ ಹಂಚಿಕೆ ವಿಚಾರವಾಗಿ ಏರು ದನಿಯಲ್ಲಿ ಮಾತನಾಡಿದ ಕಾರ್ಯಕರ್ತನೊಬ್ಬನ ಕಪಾಳಕ್ಕೆ ಕುಮಾರಸ್ವಾಮಿ ಹೊಡೆದರು
ಮೈಸೂರು, ಮೇ 10: ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾರಾ ಕನ್ವೆನ್ಷನ್ ಹಾಲ್ ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಗೊಂದಲ ಸೃಷ್ಟಿಯಾಯಿತು. ಟಿಕೆಟ್ ಹಂಚಿಕೆ ಕುರಿತು ಗೊಂದಲ ಏರ್ಪಟ್ಟ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದರು.
ಟಿಕೆಟ್ ಹಂಚಿಕೆ ಕುರಿತು ಗೊಂದಲ ಉಂಟಾಗಿ, ಶಾಸಕ ಜಿ.ಟಿ ದೇವೇಗೌಡ ಮಗ ಹರೀಶ್ ಗೌಡಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತನೊಬ್ಬ ಆಗ್ರಹಿಸಿ, ಕುಮಾರಸ್ವಾಮಿ ಅವರ ಜತೆಗೆ ಏರುದನಿಯಲ್ಲಿ ಕೂಗಾಡಿದ್ದಾನೆ. ಇದರಿಂದ ಕೋಪಗೊಂಡ ಎಚ್ ಡಿಕೆ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.[ಸದ್ಯದಲ್ಲೇ ವಿಶ್ವನಾಥ್ ಜೆಡಿಎಸ್ ಗೆ: ಎಚ್ ಡಿಕೆ ಸ್ಪಷ್ಟನೆ]
ಹುಣಸೂರು ಕ್ಷೇತ್ರದಿಂದ ಜಿ.ಟಿ.ದೇವೇಗೌಡರ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಕುಮಾರಸ್ವಾಮಿ ಅವರಿಗೆ ಒತ್ತಡ ಹೇರಲಾಯಿತು. 9 ವರ್ಷಗಳಿಂದ ಕಾಂಗ್ರೆಸ್ ಶಾಸಕರಿದ್ದರೂ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದು ಜಿ.ಟಿ. ದೇವೇಗೌಡರು. ಈಗ ಏಕಾಏಕಿ ಎಚ್.ವಿಶ್ವನಾಥ್ ಅವರಿಗೆ ಟಿಕೇಟ್ ಕೊಟ್ಟರೆ ಹೇಗೆ? ಎಂದು ಸಭೆಯಲ್ಲಿ ಪ್ರಶ್ನಿಸಲಾಯಿತು.[ಜೆಡಿಎಸ್ ಒಡೆಯಲು ಸಿದ್ದರಾಮಯ್ಯ ತಂತ್ರ: ಎಚ್ ಡಿಕೆ ಆರೋಪ]
ಕುಮಾರಸ್ವಾಮಿ ಹಲ್ಲೆ ನಡೆಸಿದ ವಿಡಿಯೋ ನೋಡಿ
ಜಿ.ಟಿ. ದೇವೇಗೌಡರ ಕುಟುಂಬ ಎಲ್ಲಿಗೆ ಹೋಗಬೇಕು
ಪಕ್ಷವನ್ನೇ ನಂಬಿರುವ ಜಿ.ಟಿ. ದೇವೇಗೌಡರ ಕುಟುಂಬ ಎಲ್ಲಿಗೆ ಹೋಗಬೇಕು ಎಂದು ಕುಮಾರಸ್ವಾಮಿ ಅವರನ್ನು ಜಿ.ಟಿ.ದೇವೇಗೌಡರ ಬೆಂಬಲಿಗರು ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶಿಸಿದ ಶಾಸಕ ಸಾ.ರಾ.ಮಹೇಶ್, ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ಧರಾಗಬೇಕೆಂದು ಸಲಹೆ ನೀಡಿದರು.
ನಿಮ್ಮ ಕ್ಷೇತ್ರವನ್ನೇ ಬಿಟ್ಟುಕೊಡಿ
ಈ ವೇಳೆ ಸಾರಾ ಮಹೇಶ್ ಮಾತಿಗೆ ಆಕ್ಷೇಪ ವ್ಯಕ್ತವಾಯಿತು, ಬೇರೆ ಕ್ಷೇತ್ರದ ಬಗ್ಗೆ ಏಕೆ ಮಾತನಾಡುತ್ತೀರಿ? ಪಕ್ಷದ ಬಗ್ಗೆ ಅಂತಹ ಅಭಿಮಾನವಿದ್ದರೆ ನೀವು ಪ್ರತಿನಿಧಿಸುವ ಕೆ.ಆರ್.ನಗರ ಕ್ಷೇತ್ರವನ್ನೇ ಬಿಟ್ಟು ಕೊಡಿ ಎಂದಾಗ ಸಭೆಯಲ್ಲಿ ಮತ್ತೆ ಗೊಂದಲ ಸೃಷ್ಟಿಯಾಯಿತು. ಸಾ.ರಾ. ಮಹೇಶ್ ಹಾಗೂ ಜಿ.ಟಿ. ದೇವೇಗೌಡರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಗುಂಪುಗಟ್ಟಿ ಕೈ ಕೈ ಮಿಲಾಯಿಸಲು ಮುಂದಾದಾಗ ಮುಖಂಡರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು.
ಸಭೆಗೆ ಶಾಸಕ ಜಿ.ಟಿ.ದೇವೇಗೌಡ ಗೈರು
ಶಾಸಕ ಜಿ.ಟಿ. ದೇವೇಗೌಡ ಗೈರಾಗಿದ್ದಾರೆ. ಜೆಡಿಎಸ್ ಗೆ ಮಾಜಿ ಸಂಸದ ಎಚ್. ವಿಶ್ವನಾಥ್ ಸೇರ್ಪಡೆಗೊಳ್ಳುವ ಸಾಧ್ಯತೆ ಖಚಿತವಾಗುತ್ತಿರುವ ಹಿನ್ನೆಲೆಯಲ್ಲಿ ಸಭೆಗೆ ಗೈರಾಗಿರಬಹುದು ಎಂಬ ಮಾತು ಕೇಳಿಬಂತು. ವಿಶ್ವನಾಥ್ ಪಕ್ಷ ಸೇರಿದರೆ ಅವರನ್ನು ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿಸುವ ಚಿಂತನೆ ನಡೆಸಲಾಗಿದೆ.
ಮುನಿಸಿಕೊಂಡರೆ ಜಿಟಿಡಿ?
ಶಾಸಕ ಜಿ.ಟಿ.ದೇವೇಗೌಡ ಹುಣಸೂರು ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸಲು ಯೋಚಿಸಿದ್ದರು. ಪುತ್ರನಿಗೆ ಅವಕಾಶ ಕೈತಪ್ಪುತ್ತಿರುವುದಕ್ಕೆ ಜಿ.ಟಿ. ದೇವೇಗೌಡರಿಗೆ ಬೇಸರವಾಗಿದೆ. ಆದ್ದರಿಂದ ಜೆಡಿಎಸ್ ಸಭೆಯಿಂದ ತಂದೆ-ಮಗ ದೂರವೇ ಉಳಿದಿದ್ದಾರೆ ಎಂಬ ಮಾತುಗಳು ಕೇಳಿಬಂದವು.
ಜೆಡಿಎಸ್ ಮೇಲುಗೈ
2018 ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಈಗಿನಿಂದಲೇ ಬೂತ್ ಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕು. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಅಧಿಕಾರ ನಡೆಸಿ, ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಹಾಗಾಗಿ ಮತದಾರರು ಪ್ರಾದೇಶಿಕ ಪಕ್ಷದ ಕಡೆಗೆ ಈ ಬಾರಿ ಒಲವು ತೋರಲಿದ್ದು, ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಕುಮಾರಸ್ವಾಮಿ ಕರೆ ನೀಡಿದರು.
ಕುಮಾರಸ್ವಾಮಿ ಸ್ಪಷ್ಟನೆ
ಜೆಡಿಎಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜತೆ ಮಾತನಾಡಿ ಸ್ಪಷ್ಟನೆ ನೀಡಿದ ಎಚ್.ಡಿ.ಕುಮಾರಸ್ವಾಮಿ, ಸಭೆ ಚೆನ್ನಾಗಿ ನಡೆಯಿತು. ಆ ನಂತರ ಕೆಲ ಕಾರ್ಯಕರ್ತರು ನನ್ನನ್ನ ಅಭಿನಂದಿಸಲು ಬಂದರು. ಈ ವೇಳೆ ಜಿಟಿ ದೇವೇಗೌಡ ಪುತ್ರ ಹರೀಶ್ ಗೌಡರಿಗೆ ಟಿಕೆಟ್ ನೀಡುವಂತೆ ಘೊಷಣೆ ಕೂಗಿದರು. ಇದಕ್ಕೆ ನಾನು ಬಿ ಫಾರಂ ನೀಡಲು ಬಂದಿಲ್ಲ ಎಂದು ಹೇಳಿದೆ. ಈ ವೇಳೆ ಸ್ವಲ್ಪ ಗೊಂದಲ ಉಂಟಾಯಿತು. ನಂತರ ಆತನನ್ನ ಒಳಕ್ಕೆ ಕರೆದುಕೊಂಡು ಹೋಗಿ ಸಮಾಧಾನ ಪಡಿಸಿ ಹೊರಕಳಿಸಿದೆ ಎಂದು ತಿಳಿಸಿದರು.