ಜೆಡಿಎಸ್ ಕಾರ್ಯಕರ್ತರ ಹುಮ್ಮಸ್ಸಿಗೆ ಬೆಂಕಿ ಇಟ್ಟರಾ ಕುಮಾರಸ್ವಾಮಿ!
ಕುಮಾರಸ್ವಾಮಿಯವರೇನೋ ಉತ್ಸಾಹದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಎಂದು ಮೈಸೂರಿನ ಜೆಡಿಎಸ್ ಸಭೆಯಲ್ಲಿ ಹೇಳಿದ್ದರಿಂದ ಕಾರ್ಯಕರ್ತರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಹೊಸಬರಿಗೆ ಮಣೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ಮೈಸೂರು, ಮೇ 12: 2018ರ ವಿಧಾನಸಭಾ ಚುನಾವಣೆಗೆ ಹಳೇ ಮೈಸೂರು ವ್ಯಾಪ್ತಿ ಸೇರಿದಂತೆ 98 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಿಡುಗಡೆ ಮಾಡುತ್ತಿದ್ದಂತೆಯೇ ಪಕ್ಷದೊಳಗಿಂದ ಅಸಮಾಧಾನದ ಹೊಗೆ ಹೊರಬರತೊಡಗಿದೆ.
ಮೇ 10ರಂದು ಮೈಸೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕೂಗಾಟ, ತಳ್ಳಾಟ, ಪ್ರತಿಭಟನೆ ಎಲ್ಲವೂ ನಡೆದಿದ್ದು, ಕಾರ್ಯಕರ್ತನೊಬ್ಬನಿಗೆ ಕುಮಾರಸ್ವಾಮಿ ಕಪಾಳಮೋಕ್ಷ ಮಾಡುವ ತನಕ ಮುಂದುವರೆದಿರುವುದು ಭವಿಷ್ಯದ ಮುಖ್ಯಮಂತ್ರಿಯಾಗುವ ಗುಂಗಿನಲ್ಲಿರುವ ಎಚ್ ಡಿಕೆಗೆ ಆರಂಭದ ಹಿನ್ನಡೆಯಂತೆ ಗೋಚರಿಸುತ್ತದೆ.[ಕಾರ್ಯಕರ್ತನ ಕಪಾಳಕ್ಕೆ ಹೊಡೆದ ಎಚ್ ಡಿ ಕುಮಾರಸ್ವಾಮಿ]
ಹಳೇ ಮೈಸೂರು ವ್ಯಾಪ್ತಿಯಲ್ಲಷ್ಟೆ ಜೆಡಿಎಸ್ ಪ್ರಾಬಲ್ಯ ಹೊಂದಿದ್ದು, ಕರಾವಳಿಯಾಗಲೀ, ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸಂಘಟನೆಯಾಗಿಲ್ಲ. ಹೀಗಾಗಿ ಮೈಸೂರಿನಿಂದಲೇ ಪಕ್ಷದ ಕಾರ್ಯಕರ್ತರನ್ನು ಸಂಘಟಿಸುವ ಕಾರ್ಯ ಆರಂಭವಾಗಿದೆ. ಮಂಡ್ಯ ಮತ್ತು ರಾಮನಗರ ವ್ಯಾಪ್ತಿಯಲ್ಲಿದ್ದ ಕೆಲವು ಶಾಸಕರು ಮುನಿಸಿಕೊಂಡು ಪಕ್ಷದಿಂದ ಹೊರಬಿದ್ದಿದ್ದಾರೆ.
ಅವರು ಕಾಂಗ್ರೆಸ್ ನತ್ತ ಮುಖ ಮಾಡುವ ಸಾಧ್ಯತೆ ಇರುವುದರಿಂದ ಆ ವ್ಯಾಪ್ತಿಯಲ್ಲಿ ಪಕ್ಷವನ್ನು ಸಂಘಟಿಸಿ, ಬೆಳೆಸುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಮಾಗಡಿಯಲ್ಲಿ ಜೆಡಿಎಸ್ ನಿಂದ ಗೆದ್ದು ಜನಪ್ರಿಯ ಶಾಸಕರಾಗಿರುವ ಬಾಲಕೃಷ್ಣ, ಮಂಡ್ಯದ ಚೆಲುವರಾಯಸ್ವಾಮಿ, ಬೆಂಗಳೂರಿನ ಜಮೀರ್ ಅಹಮದ್ ಸೇರಿದಂತೆ ಹಲವರು ಜೆಡಿಎಸ್ ವಿರುದ್ಧವೇ ತಿರುಗಿ ಬಿದ್ದಿರುವುದರಿಂದ ಗೆಲುವು ಅಂದುಕೊಂಡಷ್ಟು ಸುಲಭವಿಲ್ಲ.[ಶ್ರೀಕಂಠೇಶ್ವರನಿಗೆ ಕುಮಾರ ಸ್ವಾಮಿ ನಮೋ ಎಂದಿದ್ದೇಕೆ?]
ವಿಶ್ವನಾಥ್ ಗೆ ಟಿಕೆಟ್ ನೀಡುವುದಕ್ಕೆ ಅಸಮಾಧಾನ
ಈ ಮಧ್ಯೆ ರಾಮನಗರದಿಂದ ಸ್ವತಃ ಎಚ್.ಡಿ.ಕುಮಾರಸ್ವಾಮಿ ಅವರೇ ಸ್ಪರ್ಧಿಸುತ್ತಿದ್ದರೆ, ಹೊಸ ಮುಖಗಳಾಗಿ ಎಚ್.ವಿಶ್ವನಾಥ್ ಮತ್ತು ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಟಿಕೆಟ್ ನೀಡಿರುವುದು ಗಮನಾರ್ಹವಾಗಿದೆ. ಜತೆಗೆ ಪಕ್ಷದ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿದೆ.
ಅಧಿಕೃತ ಸೇರ್ಪಡೆಯಿಲ್ಲ
ಇನ್ನೂ ಕಾಂಗ್ರೆಸ್ ನಲ್ಲೇ ಇದ್ದೇನೆ ಎಂದು ಹೇಳುತ್ತಾ ಬರುತ್ತಿರುವ ಮಾಜಿ ಸಚಿವ ಎಚ್.ವಿಶ್ವನಾಥ್ ಜೆಡಿಎಸ್ ಗೆ ಅಧಿಕೃತವಾಗಿ ಸೇರ್ಪಡೆಯಾಗಿಲ್ಲ. ಆದರೆ ಅದಕ್ಕೂ ಮೊದಲೇ ಹುಣಸೂರಿನಿಂದ ಟಿಕೆಟ್ ನೀಡಿರುವುದು ಜೆಡಿಎಸ್ ಕಾರ್ಯಕರ್ತರಿಗೆ ಅಸಮಾಧಾನವನ್ನು ತಂದಿದೆ. ಇದೀಗ ಬೇರೆ ಪಕ್ಷದಿಂದ ವಲಸೆ ಬಂದವರಿಗೆ ಮಣೆ ಹಾಕುತ್ತಿರುವುದರಿಂದ ಹಲವು ವರ್ಷಗಳಿಂದ ಪಕ್ಷ ಸಂಘಟನೆ ಮಾಡುತ್ತಾ ಬಂದಿರುವ ಮುಖಂಡರಿಗೆ ನೋವು ತಂದಿದೆ.
ಜಿಟಿಡಿ ಮಗ ಹರೀಶ್ ರಿಂದ ಜೆಡಿಎಸ್ ಸಂಘಟನೆ
ಹುಣಸೂರು ಕ್ಷೇತ್ರದಿಂದ ತಮ್ಮ ಪುತ್ರನನ್ನು ಚುನಾವಣೆ ನಿಲ್ಲಿಸಬೇಕೆಂಬ ಬಯಕೆ ಶಾಸಕ ಜಿ.ಟಿ.ದೇವೇಗೌಡರದ್ದಾಗಿತ್ತು. ಅದರಂತೆ ಪುತ್ರ ಹರೀಶ್ ಗೌಡ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು, ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.
ದಿಢೀರ್ ಎಂಟ್ರಿ ಕೊಟ್ಟ ಪ್ರಜ್ವಲ್
ಈ ಮಧ್ಯೆ ದಿಢೀರ್ ಭೇಟಿ ನೀಡಿದ ರೇವಣ್ಣ ಅವರ ಪುತ್ರ ಪ್ರಜ್ವಲ್, ನಾನೇ ಈ ಕ್ಷೇತ್ರದ ಅಭ್ಯರ್ಥಿ ಎಂದು ಬಾಂಬ್ ಸಿಡಿಸಿ ಹೋಗಿದ್ದರು. ಇದೀಗ ಎಚ್.ವಿಶ್ವನಾಥ್ ಅವರಿಗೆ ಈ ಕ್ಷೇತ್ರದಿಂದ ಟಿಕೆಟ್ ನೀಡಲು ಮುಂದಾಗಿರುವುದರ ಹಿಂದೆ ಕುಮಾರಸ್ವಾಮಿ ಅವರ ತಂತ್ರವೇನಿದೆ ಎಂಬುದು ಮಾತ್ರ ರಹಸ್ಯವಾಗಿ ಉಳಿದಿದೆ.
ರೇವಣ್ಣ-ಕುಮಾರಣ್ಣ ಮಾತ್ರ ಸ್ಪರ್ಧೆ
ಈ ಬಾರಿಯೇ ಚುನಾವಣಾ ಕಣಕ್ಕೆ ಇಳಿಯುವ ಉತ್ಸಾಹದಲ್ಲಿದ್ದ ಪ್ರಜ್ವಲ್ ಗೆ ಮಣೆ ಹಾಕಿಲ್ಲ. ಅಷ್ಟೇ ಅಲ್ಲ ನಮ್ಮ ಕುಟುಂಬದಿಂದ ನಾನು ಮತ್ತು ರೇವಣ್ಣ ಮಾತ್ರ ಸ್ಪರ್ಧಿಸುತ್ತಿದ್ದೇವೆ ಎಂಬ ಹೇಳಿಕೆ ನೀಡುವ ಮೂಲಕ ಕುಟುಂಬದ ಇತರೆ ಸದಸ್ಯರು ಸ್ಪರ್ಧಿಸಲ್ಲ ಎಂಬುದನ್ನು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಇದರಿಂದ ಪ್ರಜ್ವಲ್ ಹುಮ್ಮಸ್ಸಿಗೆ ತಣ್ಣೀರೆರಚಿದಂತಾಗಿದೆ.
ಇದೇನೂ ಅಂತಿಮವಲ್ಲ
ಚುನಾವಣೆಗೆ ಇನ್ನೂ ಒಂದು ವರ್ಷ ಇರುವುದರಿಂದ ಏನೂ ಬೇಕಾದರೂ ಆಗಬಹುದು. ಈಗ ಏನಿದೆ ಅದುವೇ ಅಂತಿಮ ಎನ್ನುವಂತಿಲ್ಲ. ಹೀಗಾಗಿ ಜೆಡಿಎಸ್ ನಲ್ಲಿ ಮುಂದೆ ಏನೇನು ಬೆಳವಣಿಗೆ ನಡೆಯಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.